ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ಕಚೇರಿಯಲ್ಲಿ ವೀಡಿಯೋ ಚಿತ್ರೀಕರಣ ಮಾಡದಂತೆ, ತಪ್ಪು ಪ್ರಶ್ನಿಸುವ, ಭ್ರಷ್ಟಾಚಾರವನ್ನು ಸಾರ್ವಜನಿಕರವಾಗಿ ಖಂಡಿಸುವ ನಮ್ಮ ಪಕ್ಷದ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಎಲ್ಲಿಯೂ ಹೇಳಿಲ್ಲ. ವೈರಲ್ ಆಗಿರುವಂತ ಆದೇಶದಲ್ಲಿ ಅಂತಹ ಯಾವುದೇ ಸೂಚನೆಗಳಿಲ್ಲ ಎಂಬುದಾಗಿ ಕೆ ಆರ್ ಎಸ್ ಪಕ್ಷದ ರವಿಕೃಷ್ಣಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಪೊಲೀಸ್ ಇಲಾಖೆ ಹೊರಡಿಸಿದೆ ಎನ್ನಲಾಗಿರುವಂತ ಆದೇಶವನ್ನು ಸರಿಯಾಗಿ ಓದಿಲ್ಲ. ಅದೊಂದು ಆದೇಶವೂ ಅಲ್ಲ. ಹಿರಿಯ ಅಧಿಕಾರಿಗಳಿಗೆ ಸಲ್ಲಿಕೆಯಾಗುವಂತ ಮನವಿಗಳನ್ನು ಕೆಳ ಹಂತದ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸುವಂತೆ ವರ್ಗಾವಣೆ ಮಾಡುವಂತ ಆದೇಶದ ಪ್ರತಿ ಅದಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ನಮ್ಮ ಕೆ ಆರ್ ಎಸ್ ಪಕ್ಷದಿಂದ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮುಂದುವರೆಯಲಿದೆ. ಅದನ್ನು ಯಾರಿಂದಲೂ ತಡೆಯುವುದಕ್ಕೆ ಆಗುವುದಿಲ್ಲ. ತಡೆಯುವಂತೆ, ಎಫ್ಐಆರ್ ದಾಖಲಿಸುವಂತೆ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ಆದೇಶಗಳನ್ನು ಹೊರಡಿಸಿದರೂ ನಾವು ಜಗ್ಗುವುದೂ ಇಲ್ಲ, ಬಗ್ಗುವುದು ಇಲ್ಲ. ನಮ್ಮ ಹೋರಾಟ ನಿರಂತರವಾಗಿ ಸಾಗಲಿದೆ ಎಂಬುದಾಗಿ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಹೊರಡಿಸಿರುವ ಜ್ಞಾಪನದಲ್ಲಿ ಏನಿದೆ?
ಕೆ ಆರ್ ಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಿನಾಂಕ 22-12-2025ರಲ್ಲಿನ ಉಲ್ಲೇಖ ಗಮನಿಸುವಂತೆ ತಿಳಿಸಲಾಗಿದೆ.
ದಿನಾಂಕ 22-12-2025ರಂದು ಡಿಜಿಪಿ ಮತ್ತು ಐಜಿಪಿ ಆದೇಶ ಏನಾಗಿತ್ತು?
ಸರ್ಕಾರದ ಪತ್ರ ಸಂಖ್ಯೆ ಹೆಚ್.ಡಿ 509 ಎಸ್ ಎಸ್ ಟಿ 2025, ದಿನಾಂಕ 15-11-2025 ಎಂಬುದಾಗಿ ಪತ್ರದ ವಿವರವನ್ನು ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜರಲ್ ಆಫ್ ಪೊಲೀಸ್ ಉಲ್ಲೇಖಿಸಿದ್ದಾರೆ. ಕೆ ಆರ್ ಎಸ್ ಪಕ್ಷದ ಮುಖಂಡರು ಕಾರ್ಯಕರ್ತರುಗಳು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಸಾರ್ವಜನಿಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವುದು, ಸನ್ಮಾನ ಮಾಡುವ ನೆಪದಲ್ಲಿ ಮಾನಹಾನಿ, ನಿಂದನೆಯ ಅವಾಚ್ಯ ಶಬ್ದಗಳನ್ನು ಸಾರ್ವಜನಿಕವಾಗಿ ಉಪಯೋಗಿಸುತ್ತಿರುವುದು, ಸಾರ್ವಜನಿಕರಿಗೆ ಸೇವಾ ಸಿಬ್ಬಂದಿ, ಅಧಿಕಾರಿಗಳಿಗೆ ಆತ್ಮಸ್ಥೈರ್ಯ ತುಂಬಿ ಮಾನಸಿಕವಾಗಿ ಕರ್ತವ್ಯ ನಿರ್ವಹಿಸಲು ಕಾನೂನು ನಿಯಮಗಳನ್ನು ಮೀರಿ ಕರ್ತವ್ಯಗಳಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಆಯಾ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಕೂಡಲೇ ದೂರು ದಾಖಲಿಸಲು ಸುತ್ತೋಲೆಯನ್ನು ಹೊರಡಿಸಿ ಎಲ್ಲಾ ಇಲಾಖೆಯ ಹೆಚ್ಚುವರು ಮುಖ್ಯ ಕಾರ್ಯದರ್ಶಿಗಳಿಗೆ ಕೂಡಲೇ ಆದೇಶ ಮಾಡುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇದರ ಹೊರತಾಗಿ ಆ ಆದೇಶದಲ್ಲಿ ಎಲ್ಲಿಯೂ ಕೆ ಆರ್ ಎಸ್ ಪಕ್ಷದ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶಿಸಿಲ್ಲ ಎಂಬುದನ್ನು ಗಮನಿಸಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








