ಬೆಂಗಳೂರು : ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಈಗ ಸ್ವಾವಲಂಭಿಯಾಗಿದ್ದು ಇದರಲ್ಲಿ KPCL ನೌಕರರ ಶ್ರಮ ಅಪಾರವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 56 ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
KPCL ಅಧ್ಯಕ್ಷನಾಗಿ ನಾನೂ ಕೂಡ KPCL ನೌಕರರಲ್ಲಿ ಒಬ್ಬನಾಗಿದ್ದೀನಿ. ಅತೀ ಹೆಚ್ಚು ಕಾಲ KPCL ಅಧ್ಯಕ್ಷನಾಗಿ ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿಯಾಗಿದ್ದೇನೆ ಎಂದರು.
ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ KPCL ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ಉತ್ತಮವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದರು.
ನಮ್ಮ ಮೇಲೆ, ಅಧಿಕಾರಿಗಳ ಮೇಲೆ ಸಮಾಜದ ಋಣ ಇದೆ. ನಾವಾಗಲೀ, ಅಧಿಕಾರಿಗಳಾಗಲೀಸಮಾಜದ ಹಣದಲ್ಲಿ ಬೆಳೆದಿದ್ದೇವೆ. ಆದ್ದರಿಂದ ಸಮಾಜದ ಋಣ ತೀರಿಸುವ ಕಾಳಜಿಯಿಂದ ಕೆಲಸ ಮಾಡಬೇಕಿದೆ ಎಂದರು.
ನಾವು ಓದುವಾಗ ಊರಲ್ಲಿ ಕರೆಂಟ್ ಇರಲಿಲ್ಲ. ಸೀಮೆಎಣ್ಣೆ ದೀಪದಲ್ಲಿ ಓದಿ ಮೇಲೆ ಬಂದೆವು. ನಾನು 8 ನೇ ತರಗತಿಗೆ ಬಂದಾಗ ಊರಿಗೆ ಕರೆಂಟ್ ಬಂತು. ಈಗ ವರ್ಷಕ್ಕೆ 20 ಸಾವಿರ ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣವನ್ನು ರೈತರ ಪರವಾಗಿ ಸರ್ಕಾರ ಕೊಡುತ್ತಿದೆ. ಕೆಪಿಸಿಎಲ್ ನೌಕರರ ಶ್ರಮದಿಂದ ವಿದ್ಯುತ್ ರೈತರಿಗೆ ತಲುಪುತ್ತಿದೆ ಎಂದರು.
ಪವನ, ಸೌರ, ಉಷ್ಣ, ಜಲ ವಿದ್ಯುತ್ ಉತ್ಪಾದನೆ ಜೊತೆಗೆ ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದನೆ ಮಾಡುತ್ತಾ ದೇಶದಲ್ಲೇ ಪ್ರಮುಖ ಸ್ಥಾನದಲ್ಲಿದ್ದು ಸ್ವಾವಲಂಬನೆ ಸಾಧಿಸಿದ್ದೀವಿ. 60 ಸಾವಿರ ಮೆ.ವ್ಯಾ ಉತ್ಪಾದನೆ ಮಾಡುವ ಗುರಿ ಎಡೆಗೆ ನಾವು ಸಾಗುತ್ತಿದ್ದೇವೆ ಎಂದರು.
ತಲಾ ಆದಾಯದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎನ್ನುವ ವರದಿಗಳು ಬಂದಿವೆ. ಈ ಸಾಧನೆ ನಾವು ಮಾಡಿದ್ದೇವೆ ಎಂದರು.
ನಮ್ಮಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ಇದೆ. ಇದು ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು. ನಮಗೆ ಶಿಕ್ಷಣ ಸಿಕ್ಕ ಮೇಲೆ ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಕಲಿತವರೂ ಜಾತಿವಾದಿಗಳಾಗಿ, ದ್ವೇಷವಾದಿಗಳಾಗುತ್ತಿದ್ದಾರೆ ಎಂದರು.
ಮನುಷ್ಯರ ನಡುವೆ ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತಿ ಸಮಾಜವನ್ನು ವಿಭಜಿಸುವವರಿಂದ ನೀವೆಲ್ಲರೂ ದೂರ ವಿರಿ. ಕುವೆಂಪು ಅವರ ಆಶಯದಂತೆ ವಿಶ್ವ ಮಾನವರಾಗೋಣ ಎಂದು ಕರೆ ನೀಡಿದರು.
KPCL ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಸಾಗರದ ‘ಬಂಟರ ಸಂಘ’ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ
BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ