ಬೆಂಗಳೂರು: ಪ್ರಜಾವಾಣಿಯಲ್ಲಿದ್ದ, ಸ್ವಯಂ ನಿವೃತ್ತಿ ಪಡೆದಿದ್ದ ಕುಸುಮಾ ಶಾನಭಾಗ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ಆಗಿದ್ದಾಗ ಅದರ ವಿರುದ್ಧ ಹೋರಾಡಿ ಗೆದ್ದವರು. ಅವರ ಕುರಿತು ಪತ್ರಕರ್ತನ ಅನುಭವಗಳು ಸರಣಿಯಲ್ಲಿ ಬರೆದುದು ಇಲ್ಲಿದೆ.
ಕೆಲ ವರ್ಷಗಳ ಹಿಂದೆ ಬೆಂಗಳೂರಿನಿಂದ ಮೈಸೂರಿಗೆ ರೈಲಲ್ಲಿ ಹೊರಟಿದ್ದೆ. ನಾಲ್ಕಾರು ಪತ್ರಿಕೆಗಳನ್ನು ಓದುವುದು ನೋಡಿದ ಸಹಪ್ರಯಾಣಿಕರೊಬ್ಬರು ಪರಿಚಯಿಸಿಕೊಂಡು, ‘ಪತ್ರಕರ್ತರಾ?’ ಕೇಳಿದರು.
‘ಹೌದು’ ಎಂದೆ.
‘ಮಂಡ್ಯದವನು. ಕುಸುಮಾ ಶಾನಭಾಗ ಗೊತ್ತಾ?’ ಕೇಳಿದರು.
‘ಗೊತ್ತು ಸರ್. ಅವರ ಸಹೋದ್ಯೋಗಿ’ ಎಂದೆ.
‘ಅವರು ಪ್ರಜಾವಾಣಿಯ ಮಂಡ್ಯದ ವರದಿಗಾರರಾಗಿದ್ದರು’
‘ಗೊತ್ತು ಸರ್’ ಎಂದೆ.
‘ಪ್ರಾಮಾಣಿಕ, ದಿಟ್ಟ ಪತ್ರಕರ್ತೆ’ ಎಂದು ಮೆಚ್ಚುಗೆಯಾಡಿದರು.
‘ಕೇಳಿದ್ದೆ ಸರ್. ನಿಮಗೆ ಗೊತ್ತಿದ್ದುದು ಹೇಳಿ ದಯವಿಟ್ಟು’ ಕೇಳಿದೆ.
ಕುಸುಮಾ ಶಾನಭಾಗ ಅವರು ಮಂಡ್ಯದಲ್ಲಿ ಪ್ರಜಾವಾಣಿಯ ವರದಿಗಾರರಾಗಿದ್ದ ಸಂದರ್ಭ. ವಕೀಲರೂ ಲಂಕೇಶ್ ಪತ್ರಿಕೆಯ ವರದಿಗಾರರೂ ಆಗಿದ್ದ ಕಂಚನಹಳ್ಳಿ ಗಂಗಾಧರ ಮೂರ್ತಿ ಅವರ ಕೊಲೆಯಾಯಿತು. ಕೊಲೆಗೆ ಸಂಬಂಧಿಸಿದಂತೆ ಆರೋಪಿಯೆಂದು ಆಗ ಶಾಸಕರಾಗಿದ್ದವರಿಗೆ ಕೋಳ ಹಾಕಿ ಬಂಧಿಸಿದ ಫೋಟೋವನ್ನು ತೆಗೆದವರು ಕುಸುಮಾ ಶಾನಭಾಗ. ಆಗ ಅವರು ತಮ್ಮ ಲೂನಾದಲ್ಲಿ ಓಡಾಡುತ್ತಿದ್ದರು. ಗಲ್ಲಿಗಳನ್ನು ಸುತ್ತಿಕೊಂಡು ಹೋಗಿ ಶಾಸಕರಿಗೆ ಕೋಳ ಹಾಕಿದ ಫೋಟೋ ತೆಗೆದರು. ಅವರು ಫೋಟೋ ತೆಗೆಯಬಾರದೆಂದು ಶಾಸಕರ ಕಡೆ ಬೆನ್ನತ್ತಿದವರಿಂದ ತಪ್ಪಿಸಿಕೊಂಡಿದ್ದರು. ಶಾಸಕರನ್ನು ಬಂಧಿಸಿದ ಸುದ್ದಿ ಪ್ರಜಾವಾಣಿಯ ಮೊದಲ ಪುಟದಲ್ಲಿ ಪ್ರಕಟವಾಗಿತ್ತು. ತರುವಾಯ ಶಾಸಕರು ಆರೋಪಮುಕ್ತರಾದರು.
ಇನ್ನೊಂದು ಘಟನೆ; ಮಂಡದ ಸಕ್ಕರೆ ಕಾರ್ಖಾನೆಯವರು ಕಬ್ಬು ಅರೆಯಲು ಆರಂಭಿಸಿದ ಮೇಲೆ ಹಾಗೂ ಸಕ್ಕರೆ ಉತ್ಪಾದನೆಯಾದ ಮೇಲೆ
ಪತ್ರಿಕಾಗೋಷ್ಠಿ ಕರೆಯುತ್ತಿದ್ದರು.
ಆಗ ಸ್ಥಿರ ದೂರವಾಣಿ (ಲ್ಯಾಂಡ್ ಲೈನ್) ಕಾಲ. ದಿನದ ಸುದ್ದಿಗಳನ್ನು ಕಳಿಸಿದ ಮೇಲೆ ಕುಸುಮಾ ಅವರು ಬೆಂಗಳೂರಿನ ಮುಖ್ಯ ಕಚೇರಿಗೆ ಫೋನ್ ಮಾಡಿದರು. ಫೋನ್ ತೆಗೆದುಕೊಂಡವರು ಮರು ದಿನದ ವಿಶೇಷವೇನೆಂದು ಕೇಳಿದಾಗ ಸಂಜೆ ಸಕ್ಕರೆ ಕಾರ್ಖಾನೆಯ ಪತ್ರಿಕಾಗೋಷ್ಠಿ ಇರುವ ಕುರಿತು ತಿಳಿಸಿದ್ದಾರೆ.
ಮರುದಿನ ಬೆಳಿಗ್ಗೆ 11 ಗಂಟೆಗೆ ಒಂದಿಬ್ಬರು ಸ್ಥಳೀಯ ಪತ್ರಕರ್ತರು, ಸಕ್ಕರೆ ಕಾರ್ಖಾನೆಯವರ ಪತ್ರಿಕಾಗೋಷ್ಠಿ ರದ್ದುಪಡಿಸಿರುವುದು ಯಾಕೆಂದು ಕುಸುಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರ್ಖಾನೆಯ ಎಂ.ಡಿಯವರ ಸಹಾಯಕರು, ಕುಸುಮಾ ಅವರಿಂದ ಪತ್ರಿಕಾಗೋಷ್ಠಿ ರದ್ದಾಗಿದೆ ಎಂದು ತಿಳಿಸಿದಾಗ ಪತ್ರಕರ್ತರು ಸಿಟ್ಟಾಗಿದ್ದಾರೆ. ರದ್ದಾಗಿದ್ದಕ್ಕಿಂತ ಕಾರ್ಖಾನೆಯವರೇ ಪತ್ರಿಕಾಗೋಷ್ಠಿಯಲ್ಲಿ ಕಾಣಿಕೆಯಾಗಿ ಕೊಡುತ್ತಿದ್ದ ಒಳ್ಳೆಯ ಮದ್ಯ ಮಿಸ್ ಆಯಿತೆಂದು ಸಿಟ್ಟಿಗೆದ್ದರು. ಆಗ ಕುಸುಮಾ ಅವರು ವಿಚಾರಿಸಿದಾಗ ಗೊತ್ತಾಯಿತು. ಬೆಂಗಳೂರಿನ ಸುದ್ದಿ ಸಂಸ್ಥೆಯ ಪತ್ರಕರ್ತ ಹಾಗೂ ಹಿಂದಿನ ದಿನ ಫೋನ್ ತೆಗೆದ ಪತ್ರಕರ್ತರು ಕಾರ್ಖಾನೆಯ ಮುಖ್ಯ ಕಚೇರಿಯ ಕಾರಿನಲ್ಲಿ ಬೆಂಗಳೂರಿನಿಂದ ಮಂಡ್ಯದ ಸಕ್ಕರೆ ಕಾರ್ಖಾನೆಗೆ ಬಂದು ಹೋಗಿದ್ದು ಗೊತ್ತಾಯಿತು.
ಹೇಗೆಂದರೆ ಸುದ್ದಿ ಸಂಸ್ಥೆಯ ಪತ್ರಕರ್ತರ ತಂದೆ ಕುಸುಮಾ ಅವರ ಮನೆಗೆ ಬಂದಾಗ. ಅವರು ಫೋನ್ ತೆಗೆದ ಪತ್ರಕರ್ತರಿಗೆ ‘ನೀವ್ಯಾಕೆ ಬಂದಿರಿ?’ ಎಂದು ಕೇಳಿದಾಗ ‘ಕುಸುಮಾ ಅವರಿಗೆ ಬರೆಯಲು ಬರಲ್ಲ. ಅದಕ್ಕೆ ಬಂದೆ’ ಎಂದರಂತೆ! ಕುಸುಮಾ ಅವರು ಪತ್ರಿಕಾಗೋಷ್ಠಿ ವಿಷಯ ತಿಳಿಸದಿದ್ದರೆ ಅವರು ಬರುತ್ತಿರಲಿಲ್ಲ. ಅಲ್ಲದೆ ಕಾರ್ಖಾನೆಯ ಎಂ.ಡಿಗೆ ಫೋನ್ ಮಾಡಿ, ಪತ್ರಿಕಾಗೋಷ್ಠಿ ರದ್ದುಪಡಿಸುವುದರ ಜೊತೆಗೆ ಕಾರ್ಖಾನೆಯ ಕಾರಲ್ಲಿ ಬಂದುಹೋಗಿದ್ದಾರೆ. ಹಾಗೆ ಹೋಗುವಾಗ ತಲಾ ಐದು ಕಿಲೊ ಸಕ್ಕರೆಯನ್ನೂ ಪಡೆದುಕೊಂಡು ಹೋದರು.
ಈ ವಿಷಯವನ್ನು ಕುಸುಮಾ ಅವರು ಸಂಪಾದಕರಿಗೆ, ಸುದ್ದಿ ಸಂಪಾದಕರಿಗೆ ತಿಳಿಸಿದಾಗ ಅವರಿಗೂ ಗೊತ್ತಿರಲಿಲ್ಲ. ಅವರಿಗೆ ಮಾಹಿತಿ ನೀಡದೆ ಬಂದವರು, ಬರೆಯಲು ಬಾರದೆಂದು ಗೂಬೆ ಕೂಡಿಸಿದರು.
ಬರೆಯಲು ಬಾರದ ಪತ್ರಕರ್ತೆ ಎಂದು ಕುಸುಮಾ ಅವರು ಅನುಭವಿಸಿದ ಅವಮಾನ ಅವರನ್ನು ಸುಡುತ್ತಲೇ ಇತ್ತು. ಸಹೋದ್ಯೋಗಿಗಳ ಟೀಕೆ, ವ್ಯಂಗ್ಯ, ಕಟಕಿ ನಗು ಅವರನ್ನು ಆತ್ಮಹತ್ಯೆಯ ನಿರ್ಧಾರದವರೆಗೂ ಎಳೆದುಕೊಂಡು ಹೋಗಿತ್ತು. ಇದನ್ನು ಅವರು ತಮ್ಮ ‘ಪುಟಗಳ ನಡುವಿನ ನವಿಲುಗರಿ’ ಕೃತಿಯಲ್ಲಿ ವಿವರಿಸಿದ್ದಾರೆ.
ಮುಂದೆ ಸಕ್ಕರೆ ಒಯ್ದವರು ಸಹಸಂಪಾದಕರಾದ ನಂತರ ಕುಸುಮಾ ಅವರಿಗೆ ಕಿರುಕುಳ ನೀಡಿ, ಅವರು ಕೆಲಸ ಬಿಡುವಂತೆ ಮಾಡಿದರು!
ಪತ್ರಕರ್ತೆಯಾಗುವ ಮೊದಲು ಕುಸುಮಾ ಅವರು ಸ್ವಯಂ ಸೇವಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಅವರು ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಆಳವಾಗಿ ಅಧ್ಯಯನ ಕೈಗೊಂಡಿದ್ದರು. ಒಮ್ಮೆ ಅಧ್ಯಯನಕ್ಕೆ ಹೋದಾಗ ತಲೆಹಿಡುಕರು ಅವರನ್ನು ಎರಡನೇ ಮಹಡಿಯಿಂದ ಕೆಳಗೆ ಎಸೆದಿದ್ದರು. ಆದರೂ ಅವರು ಅಧ್ಯಯನ ನಿಲ್ಲಿಸದೆ ಲೈಂಗಿಕ ಕಾರ್ಯಕರ್ತೆಯರ ಕುರಿತು ‘ಕಾಯಕ ಕಾರ್ಪಣ್ಯ’ ಕೃತಿ ರಚಿಸಿದರು. ಅವರ ‘ಮಣ್ಣಿಂದ ಎದ್ದವರು’ ಕಾದಂಬರಿಯೂ ಪ್ರಕಟವಾಗಿದೆ.
ಅಂದಹಾಗೆ ಕುಸುಮಾ ಅವರು ಕಾದಂಬರಿಕಾರ ಭಾರತೀಸುತ ಅವರ ಮಗಳು. ಭಾರತೀಸುತ ಅವರ ಖ್ಯಾತ ಕಾದಂಬರಿಗಳು; ಎಡಕಲ್ಲು ಗುಡ್ಡದ ಮೇಲೆ, ಹುಲಿಯ ಹಾಲಿನ ಮೇವು, ಗಿರಿಕನ್ಯೆ, ಬಯಲುದಾರಿ. ಇವು ಸಿನಿಮಾಗಳಾಗಿಯೂ ಪ್ರಸಿದ್ಧ. ಭಾರತೀಸುತ ಅವರ ಪುತ್ರಿ ಖ್ಯಾತ ಪತ್ರಕರ್ತ ಕುಸುಮಾ ಶಾನಭಾಗ ಅವರು ಇಂದು ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.
ಬೆಂಗಳೂರಿನ BTM ಲೇಔಟ್ ನಲ್ಲಿ ನವೀಕೃತ ಪ್ರಾಥಮಿಕ ಆರೋಗ್ಯ ಕೇಂದ್ರ ಲೋಕಾರ್ಪಣೆಗೊಳಿಸಿದ ಸಚಿವ ರಾಮಲಿಂಗಾರೆಡ್ಡಿ