ಬೆಂಗಳೂರು: ಆಧುನಿಕ ಕರ್ನಾಟಕ, ಆ ಮೂಲಕ ಆಧುನಿಕ ಭಾರತ ನಿರ್ಮಾಣಕ್ಕೆ ವೀರಶೈವ ಲಿಂಗಾಯತ ಸಮುದಾಯದ ಕೊಡುಗೆ ಅಪಾರವಾದ್ದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿಂದು ಕರ್ನಾಟಕ ವೀರಶೈವ ಲಿಂಗಾಯಿತ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಜಾತಿ, ಧರ್ಮದವರಿಗೂ ಆಶ್ರಯ, ಅನ್ನ, ಅಕ್ಷರದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ವೀರಶೈವ ಲಿಂಗಾಯತ ಮಠ ಮಾನ್ಯಗಳಿಗೆ ಸಲ್ಲುತ್ತದೆ ಎಂದರು.
ವಿದ್ಯಾವಂತ ಮತ್ತು ಗುಣವಂತ ನಾಗರಿಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ನಮ್ಮ ಸಮಾಜದ ಮಠಮಾನ್ಯಗಳ ಕೊಡುಗೆಯಿಂದ ಇಂದು ಕೋಟ್ಯಂತರ ಜನರು ವಿದ್ಯಾವಂತರಾಗಿದ್ದಾರೆ, ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನಮ್ಮ ಪೂರ್ವಜರು ಪ್ರತಿಪಾದಿಸಿದರು. 12ನೇ ಶತಮಾನದಲ್ಲಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಸಂದೇಶವನ್ನು ಬಸವಾದಿ ಶರಣರು ಸಾರಿದರು. ಇಡೀ ವಿಶ್ವಕಕ್ಕೆ ಸಾಮಾಜಿಕ ನ್ಯಾಯದ, ಸಮ ಸಮಾಜದ ಪರಿಕಲ್ಪನೆ ಕೊಟ್ಟಿದ್ದೇ ನಮ್ಮ ಸಮಾಜ. ಇಂತಹ ಅಸ್ಮಿತೆ ಕೊಟ್ಟ ಸಮಾಜಕ್ಕೆ ನಾನು ಋಣಿಯಾಗಿರಬೇಕು ಎಂದರು.
ಬೆಂಗಳೂರಲ್ಲಿ ಜಮೀನಿಗೆ ಬಂಗಾರದ ಬೆಲೆ ಇದೆ. ಸಮಾಜದ ಸರ್ಕಾರಿ ನೌಕರರಿಗಾಗಿಯೇ ಒಂದು ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚುವ ಮಹತ್ಕಾರ್ಯವನ್ನು ಈ ಸಂಘ ಮಾಡುತ್ತಿದೆ. ಯಾವ ಸಂಸ್ಥೆ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತದೆಯೋ ಅದು ಯಶಸ್ಸು ಸಾಧಿಸುತ್ತದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯ ಮೇವರ್ಗದ ಸಮುದಾಯವಾದರೂ ನಮ್ಮಲ್ಲಿಯೂ ಕಡು ಬಡವರಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅವರೆಲ್ಲರೂ ಸಬಲರಾಗಬೇಕು, ಬಡತನದಿಂದ ಹೊರ ಬರಬೇಕು ಇದಕ್ಕಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶ್ರಮಿಸುತ್ತಿದೆ ಎಂದರು.
ನಮ್ಮ ರಾಜ್ಯದಲ್ಲಿ 7 ಕೋಟಿಗೂ ಅಧಿಕ ಜನರಿದ್ದಾರೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಇಡೀ ರಾಜ್ಯದಲ್ಲಿ 6.5 ಲಕ್ಷ ಸರ್ಕಾರಿ ಅರೆ ಸರ್ಕಾರಿ ಸಿಬ್ಬಂದಿ ಇರಬಹುದು. ನೀವು ಅದೃಷ್ಟವಂತರು. ನೀವೆಲ್ಲರೂ ಸಮಾಜದ ಪ್ರತಿಭಾವಂತರ ಉನ್ನತ ವ್ಯಾಸಂಗಕ್ಕೆ ಶೇ. 1ರಷ್ಟು ನಿಮ್ಮ ಆದಾಯ ವಿನಿಯೋಗಿಸಿ ಎಂದು ಕಿವಿ ಮಾತು ಹೇಳಿದರು.
ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು ದೇಶ ನಿನಗೇನು ಕೊಟ್ಟಿದೆ ಎಂದು ಕೇಳಬೇಡ. ದೇಶಕ್ಕೆ ನೀನು ಏನು ಕೊಟ್ಟಿದ್ದೀಯಾ ಎಂದು ನಿನ್ನನ್ನೇ ಕೇಳಿಕೋ ಎಂದು ಹೇಳುತ್ತಿದ್ದರು, ಅದೇ ರೀತಿ ಸಮಾಜ ನಿಮಗೆ ಎಲ್ಲ ನೀಡಿದೆ. ನೀವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಘದ ರವಿ ತಿರ್ಲಾಪುರ ಮತ್ತಿತರರು ಪಾಲ್ಗೊಂಡಿದ್ದರು.