ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಮಳೆಗಾಲದಲ್ಲಿ ವಿದ್ಯುತ್, ಕುಡಿಯುವ ನೀರು ಪೂರೈಕೆ ಸೇರಿದಂತೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ ನೀಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಮಳೆಗಾಲ ಆರಂಭಗೊಳ್ಳುತ್ತಿದೆ. ಡೆಂಗ್ಯೂ ಹೆಚ್ಚಳವಾಗುವ ಮುನ್ನವೇ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಗರ ನಗರ, ತಾಲ್ಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳ ನಿಯಂತ್ರಣ ಕ್ರಮವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೂ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದಾವೆ. ಶಿವಮೊಗ್ಗದಲ್ಲೂ ಒಂದು ಕೇಸ್ ಪತ್ತೆಯಾಗಿದೆ. ಸಾಗರ ತಾಲ್ಲೂಕಿನಲ್ಲಿ ಕೋರೋನಾ ಬಗ್ಗೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದರು.
ಈ ವೇಳೆ ಪ್ರತಿಕ್ರಿಯಿಸಿದಂತ ಶಾಸಕರ ಆಪ್ತ ಕಾರ್ಯದರ್ಶಿ ಟಿ.ಪಿ ರಮೇಶ್ ಅವರು ಕೊರೋನಾ ಪತ್ತೆಗಾಗಿ 600 ಕಿಟ್ ತರಿಸಲಾಗಿದೆ. ಸಕಲ ಸಿದ್ಧತೆಯನ್ನು ತಾಲ್ಲೂಕು ಆಡಳಿತ ಮಾಡಿಕೊಂಡಿದೆ ಎಂದರು.
ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರು ಸಾಗರ ನಗರದಲ್ಲಿ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದೆ. ಚರಂಡಿ ಶುಚಿಗೊಳಿಸುವಂತ ಕಾರ್ಯವನ್ನು ನಗರಸಭೆಯಿಂದ ಮಾಡಲಾಗುತ್ತಿದೆ. ಡೆಂಗ್ಯೂ ಪ್ರಕರಣ ದಾಖಲಾಗದಂತೆ ಕ್ರಮಕೈಗೊಳ್ಳುವುದಾಗಿ ಶಾಸಕರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಡಾ.ಭರತ್ ಅವರು ತಾಲ್ಲೂಕಿನಲ್ಲಿ ವೈದ್ಯರ ಕೊರತೆಯಿದೆ. ಇದರಿಂದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಗಮನಕ್ಕೆ ತಂದರು.
ಸಾಗರ ತಾಲ್ಲೂಕಿನ ವೈದ್ಯರ ಹುದ್ದೆಗಳ ಭರ್ತಿಗೆ ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚಿಸಲಾಗಿದೆ. ಅವರು ಸಮಸ್ಯೆ ಸರಿ ಪಡಿಸುವ ಭರವಸೆ ನೀಡಿದ್ದಾರೆ. ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯೊಂದನ್ನು ಹೊರಡಿಸುತ್ತಿದ್ದಾರೆ ಎಂದು ತಿಳಿಸಿದರು.
ಕೆಡಿಪಿ ನಾಮನಿರ್ದೇಶಿತ ಸದಸ್ಯ ಪ್ರಶಾಂತ್ ಮಾತನಾಡಿ ನಗರಸಭೆಯಿಂದ ಬಿ-ಖಾತಾ ವಿತರಣೆ ತಡವಾಗುತ್ತಿದೆ. ಬಿ-ಖಾತಾ ವಿತರಣೆಯನ್ನು ತ್ವರಿತಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದಂತ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರು, ಸರ್ವರ್ ಸಮಸ್ಯೆಯಿಂದ ಹೀಗೆ ಆಗುತ್ತಿದೆ. ಅಲ್ಲದೇ ಬಿ-ಖಾತೆ ಮಾಡಿಕೊಡೋದಕ್ಕೆ ಅಗತ್ಯವಿರುವಂತ ದಾಖಲಾತಿಗಳನ್ನು ಒದಗಿಸದೇ ಇರೋದು ತಡವಾಗೋದಕ್ಕೆ ಮತ್ತೊಂದು ಕಾರಣವಾಗಿದೆ. ಬಿ-ಖಾತಾ ವಿತರಣೆಯನ್ನು ಮತ್ತಷ್ಟು ತ್ವರಿತಗೊಳಿಸುವುದಾಗಿ ಹೇಳಿದರು.
ಈ ವೇಳೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಬಡವರಿಗೆ ಬಿ-ಖಾತಾ ವಿತರಣೆ ಮಾಡಬೇಕು ಎಂಬುದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕನಸಾಗಿದೆ. ಬಡವರ ಸಮಸ್ಯೆ ನೀಗಿಸೋ ನಿಟ್ಟಿನಲ್ಲಿ ಬಿ-ಖಾತಾ ವಿತರಣೆಯ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದು ತಡವಾಗೋದನ್ನು ನಾನು ಸಹಿಸುವುದಿಲ್ಲ. ತ್ವರಿತವಾಗಿ ಬಿ-ಖಾತಾಗೆ ಅರ್ಜಿ ಸಲ್ಲಿಸಿದವರಿಗೆ ವಿತರಣೆ ಮಾಡುವಂತ ಕೆಲಸವಾಗಬೇಕು ಎಂಬುದಾಗಿ ಪೌರಾಯುಕ್ತರಿಗೆ ಸೂಚಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಬಿ.ಆರ್ ಜಯಂತ್ ಮಾತನಾಡಿ ಸಾಗರ ನಗರದಲ್ಲಿ ಸ್ವಚ್ಛ ವಾಹನಗಳಿಗೆ ಕಸ ಹಾಕೋದು ಬಿಟ್ಟು ಚರಂಡಿ ಸೇರಿದಂತೆ ಇತರೆಡೆಗೆ ಹಾಕಲಾಗುತ್ತಿದೆ. ನಗರಸಭೆಯಿಂದ ನಿಯಂತ್ರಿಸುವಂತ, ಕಸ ವಿಲೇವಾರಿ ವಾಹನಗಳಿಗೆ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುವಂತ ಕೆಲಸವಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರು ಯಾರು ಯಾರು ಕಸ ಎಲ್ಲೆಂದರಲ್ಲಿ ಹಾಕುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಕಸ ಚರಂಡಿ, ದಾರಿ ಪಕ್ಕದಲ್ಲೇ ಸುರಿಯೋ ಪ್ರದೇಶದಲ್ಲಿ ಸಿಸಿಟಿವಿ ಹಾಕಿ. ನಗರಸಭೆಯಿಂದ ಕೆಲವರನ್ನು ಕಾವಲಿರಿಸಿ ಕಸವನ್ನು ಕಸವಿಲೇವಾರಿ ವಾಹನಕ್ಕೆ ಹಾಕದೇ ಎಲ್ಲೆಂದರಲ್ಲೇ ಹಾಕೋರಿಗೆ ಕಾನೂನು ಬಿಸಿ ಮುಟ್ಟಿಸಿ ಎಂಬುದಾಗಿ ತಾಕೀತು ಮಾಡಿದರು.
ಕೆಡಿಪಿ ಸದಸ್ಯ ಆನಂದ್ ಭೀಮನೇರಿಯವರು ಸಾಗರ ನಗರಸಭೆಯವರು ಬೀದಿ ನಾಯಿ ಹಿಡಿದು, ವಿಲೇವಾರಿಯನ್ನು ಒಂದೇ ಕಡೆಗೆ ಮಾಡಿದ್ದಾರೆ. ಇದರಿಂದ ಸಮಸ್ಯೆ ಆಗುತ್ತಿದೆ ಎಂದಾಗ, ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರು ಕೆಲ ದಿನಗಳ ಹಿಂದೆ ಹೀಗೆ ಆಗಿದೆ. ಮುಂದೆ ಹೀಗೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.
ಸಹಾಯಕ ಕೃಷಿ ಅಧಿಕಾರಿ ಚಂದ್ರಕುಮಾರ್.ಕೆ ಅವರು ಶೇ.98 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಈಗ ಶೇ.353 ಮಿಲಿ ಮೀಟರ್ ಸಾಗರ ತಾಲ್ಲೂಕಿನಲ್ಲಿ ಮಳೆಯಾಗಿದೆ. ಹೆಚ್ಚುವರಿಯಾಗಿ ಶೇ.260 ಮಿಲಿ ಮೀಟರ್ ಮಳೆಯಾಗಿದ್ದು, ರೈತರ ಬೆಳೆಗಳಿಗೆ ಹಾನಿಯುಂಟಾಗಿದೆ ಎಂಬುದಾಗಿ ಸಭೆಯ ಗಮನಕ್ಕೆ ತಂದರು.
ಸಾಗರ ತಾಲ್ಲೂಕಿನಲ್ಲಿ 570 ಹೆಕ್ಟೇರ್ ನಲ್ಲಿ ಮುಸುಕಿನ ಜೋಳ ಭಿತ್ತನೆಯಾಗಿತ್ತು. ಅಕಾಲಿಕ ಮಳೆಯ ಕಾರಣದಿಂದಾಗಿ ಶೇ.70ರಷ್ಟು ಬೆಳೆಯನ್ನು ಮಾತ್ರವೇ ರೈತರು ಕಟಾವು ಮಾಡಲು ಸಾಧ್ಯವಾಗಿದೆ. ಶೇ.30ರಷ್ಟು ಜಮೀನಿನಲ್ಲೇ ಇದ್ದು, ಮೊಳಕೆ ಹೊಡೆದು ಹಾನಿಯಾಗುವ ಹಂತದಲ್ಲಿದೆ. ಇದನ್ನು ಕಂದಾಯ-ಕೃಷಿ ಇಲಾಖೆ ಜಂಟಿಯಾಗಿ ಸರ್ವೆ ಮಾಡಿ, ಬೆಳೆಹಾನಿಯ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಆ ಕೆಲಸ ಮೊದಲು ಆಗಬೇಕು. ಮೆಕ್ಕೆ ಜೋಳ ಪೂರ್ತಿ ಹಾಳಾಗಿದೆ ಅಂತ ವರದಿ ನೀಡಿ. ನಾಳೆಯಿಂದಲೇ ಜಂಟಿ ಸರ್ವೆ ಮಾಡಿ, ರೈತರ ಬೆಳೆಹಾನಿಯ ವರದಿ ನೀಡಿ, ಅವರಿಗೆ ಪರಿಹಾರ ಕೊಡಿಸುವಂತ ಕೆಲಸ ಮಾಡುವಂತೆ ನಿರ್ದೇಶಿಸಿದರು.
ಮುಸುಕಿನ ಜೋಳವಲ್ಲದೇ ಸಾಗರ ತಾಲ್ಲೂಕಿನ ಅಲ್ಲಲ್ಲಿ ಭತ್ತವೂ ನಾಶವಾಗಿದೆ. ಆ ಬಗ್ಗೆಯೂ ಸರ್ವೇ ನಡೆಸಿ, ಸಂಕಷ್ಟದಲ್ಲಿರುವಂತ ರೈತರಿಗೆ ಪರಿಹಾರ ಕಲ್ಪಿಸುವಂತ ಕಾರ್ಯಕ್ಕೆ ಮುಂದಾಗುವಂತೆ ತಿಳಿಸಿದರು.
ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಮಳೆಹಾನಿಯಿಂದಾದ ಬೆಳೆಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ. ಆ ಕೆಲಸ ತಕ್ಷಣವೇ ಮಾಡಿ. ಮುಸುಕಿನ ಜೋಳ, ಭತ್ತ ಮಳೆಯಿಂದ ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಂತ ಕೆಲಸ ಮಾಡಿ ಎಂದರು.
ಸಹಾಯಕ ಕೃಷಿ ಅಧಿಕಾರಿ ಚಂದ್ರಕುಮಾರ್.ಎನ್ ಅವರು ಸಾಗರ ತಾಲ್ಲೂಕಿನಲ್ಲಿ ಭಿತ್ತನೆ ಬೀಜ ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ರೈತರಿಂದ ಹೆಚ್ಚು ಬೇಡಿಕೆಯಿರುವಂತ ಭಿತ್ತನೆ ಬೀಜವನ್ನು ಖರೀದಿಸಿ ದಾಸ್ತಾನು ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರದ ಮೂಲಕ ವಿತರಣೆಯ ಕೆಲಸ ಮಾಡಲಾಗುವುದು. ಡಿಎಪಿ ರಸಗೊಬ್ಬರ ಮಾತ್ರವೇ ಕೊರತೆಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.
ಭಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಶೇ.75ರಷ್ಟು ರಿಯಾಯಿತಿ ದರದಲ್ಲಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ನೀಡಲಾಗುತ್ತದೆ. ಕೃಷಿಭಾಗ್ಯ ಯೋಜನೆಯಡಿಯೂ ರಿಯಾಯಿತಿ ನೀಡಲಾಗುತ್ತಿದೆ ಎಂದರು.
ರೈತರಿಗೆ ತೊಂದರೆ ಆಗಬಾರದು. ಸಾಗರ ತಾಲ್ಲೂಕಿನಲ್ಲಿ ಭಿತ್ತನೆ ಬೀಜಕ್ಕೂ ಕೊರತೆಯಾಗಬಾರದು. ಬೆಳೆಹಾನಿ ಪರಿಹಾರವೂ ತಡವಾಗಬಾರದು. ರೈತರಿಗೆ ತೊಂದರೆ ಆದ್ರೆ ನಾನು ಸಹಿಸುವುದಿಲ್ಲ. ಹಾಗೆ ಆಗದಂತೆ ಮುನ್ನಚ್ಚರಿಕೆ ವಹಿಸುವಂತೆ ಖಡಕ್ ಸೂಚನೆ ನೀಡಿದರು.
ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಕಳೆದ ಒಂದು ವಾರದಿಂದ ಎಡಬಿಡದೇ ಮಳೆಯಾಗುತ್ತಿದೆ. ಗಾಳಿ ಸಹಿತ ಮಳೆಗೆ 80 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದಾವೆ. ಅವುಗಳಲ್ಲಿ 68 ಬದಲಾವಣೆ ಮಾಡಲಾಗಿದೆ. ತುಮುರಿ ಭಾಗದಲ್ಲಿ ಮೂರು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು ಎಂದರು.
ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ಅವರು ಕೂಗಾರುವಿನಲ್ಲಿ 600 ರಿಂದ 650 ಅಕೇಶಿಯಾ ಮರಗಳಿದ್ದಾವೆ. 11ಕೆವಿ ವಿದ್ಯುತ್ ಸರಬರಾಜಾಗುವಂತ ಲೈನ್ ಸಮೀಪದಲ್ಲೇ ಇದ್ದು, ಅವುಗಳು ಗಾಳಿ ಮಳೆಗೆ ಪದೇ ಪದೇ ವಿದ್ಯುತ್ ಕಂಬಗಳ ಮೇಲೆ ಬೀಳುತ್ತಿರುವುದೇ ತುಮುರಿ ಭಾಗದಲ್ಲಿ ಆಗಾಗ ಕರೆಂಟ್ ಕೈಕೊಡುತ್ತಿರೋದಕ್ಕೆ ಕಾರಣವಾಗಿದೆ. ಅಕೇಶಿಯಾ ಮರಗಳನ್ನು ಕಟಾವು ಮಾಡಿದರೇ ಇದಕ್ಕೊಂದು ಶಾಶ್ವತ ಪರಿಹಾರ ಸಿಗಲಿದೆ. ಆ ಕೆಲಸವನ್ನು ತ್ವರಿತವಾಗಿ ಮಾಡುವಂತೆ ಮೆಸ್ಕಾಂಗೆ ಸೂಚಿಸುವಂತೆ ಶಾಸಕರ ಗಮನಕ್ಕೆ ತಂದರು.
ಆಗ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸ್ಥಳದಲ್ಲಿದ್ದಂತ ಮೆಸ್ಕಾಂ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆ ಕೆಲಸ ಮಾಡುವಂತೆ ಸೂಚಿಸಿದರು. ಅರಣ್ಯ ಇಲಾಖೆಯವರು ಮರ ಕತ್ತರಿಸದೇ ಇದ್ದರೇ, ಮೆಸ್ಕಾಂ ಇಲಾಖೆಯವರೇ ಕತ್ತರಿಸಿ ಹಾಕಿ ಎಂದರು.
ಈ ಆಧುನಿಕ ಕಾಲದಲ್ಲೂ ಮೂರು ದಿನಗಳ ಕಾಲ ತುಮುರಿ ಭಾಗದಲ್ಲಿ ಕರೆಂಟ್ ಇರೋದಿಲ್ಲ ಅಂದ್ರೆ ಏನು ಕತೆ. ಆರ್ ಎಫ್ ಓ ಅವರೇ ಈ ಬಗ್ಗೆ ಗಮನ ಹರಿಸಿ ಎಂದ ಶಾಸಕರು, 24 ಗಂಟೆ ವಿದ್ಯುತ್ ಸರಬರಾಜು ಆಗುವಂತೆ ನೋಡಿಕೊಳ್ಳಲು ಹೇಳಿದರು.
ಇದೇ ಸಂದರ್ಭದಲ್ಲಿ ಸರಬರಾಜಾಗುತ್ತಿರುವಂತ ವಿದ್ಯುತ್ ಕಂಬಗಳು ಗುಣಮಟ್ಟದಿಂದ ಕೂಡಿಲ್ಲ ಎನ್ನುವುದನ್ನು ಗಮನಿಸಿದಂತ ಶಾಸಕರು, ಕೂಡಲೇ ಭದ್ರಾ ಎನ್ನುವಂತ ಕಂಪನಿಯ ಕಂಬಗಳ ಸರಬರಾಜು ನಿಲ್ಲಿಸುವಂತೆ ಸೂಚಿಸಿದರು. ಈ ಸಂಬಂಧ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಂಡು, ಭದ್ರಾ ಕಂಪನಿಯ ಗುತ್ತಿಗೆ ಸ್ಥಗಿತಗೊಳಿಸುವಂತ ಕ್ರಮ ನಿರ್ಧಾರವನ್ನು ಸರ್ಕಾರಕ್ಕೆ ಸಲ್ಲಿಸಲು ಸ್ಥಳದಲ್ಲಿದ್ದಂತ ಅಧಿಕಾರಿಗಳಿಗೆ ಸೂಚಿಸಿದರು.
ಮೆಸ್ಕಾಂ ಎಂಡಿ ಜೊತೆಗೂ ದೂರವಾಣಿ ಕರೆಯಲ್ಲಿ ಮಾತನಾಡಿದಂತ ಶಾಸಕರು ವಿದ್ಯುತ್ ಕಂಬದ ಗುಣಮಟ್ಟದ ಬಗ್ಗೆ, ಟಿಸಿ ಸರಬರಾಜಿನಲ್ಲಿನ ವ್ಯತ್ಯಯದ ಬಗ್ಗೆ ಚರ್ಚಿಸಿದರು. ಸಮಸ್ಯೆ ಪರಿಹರಿಸುವಂತೆ ಹೇಳಿದರು.
ವಿದ್ಯುತ್ ಸಮಸ್ಯೆ ಆದರೇ ಜನಪ್ರತಿನಿಧಿಯಾದ ನನಗೆ ಪೋನ್ ಬರುತ್ತೆ. ನಾನು ನಿಮ್ಮ ಪರವಾಗಿ ಉತ್ತರ ಕೊಡಬೇಕು. ಆ ಕೆಲಸ ಆಗಬಾರದು. ಕೆಲಸ ಸರಿಯಾಗಿ ಮಾಡಿ, ಇಲ್ಲವಾದಲ್ಲಿ ವರ್ಗಾವಣೆ ನಡೆಯುತ್ತಿದೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಅಂತ ಮೆಸ್ಕಾಂ ಎಇಗಳಿಗೆ ತಾಕೀತು ಮಾಡಿದರು.
ಜೆಜೆಎಂಗೆ 24 ಟಿಸಿ ಬರುವುದಿದೆ. ಅಕ್ಟೋಬರ್, ನವೆಂಬರ್ ನಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮುನ್ನಾ ವಿದ್ಯುತ್ ಸರಬರಾಜು ಆಗಬೇಕು. ಆ ನಂತ್ರ 24 ಗಂಟೆ ಮನೆ ಮನೆಗೆ ನೀರು ಸರಬರಾಜು ಮಾಡುವಂತ ಕೆಲಸವಾಗಬೇಕು ಎಂಬುದಾಗಿಯೂ ಹೇಳಿದರು.
ತಹಶೀಲ್ದಾರ್ ಚಂದ್ರಶೇಖರ ನಾಯ್ಕ್ ಅವರು ಮಳೆಯಿಂದಾಗಿ ಸಾಗರ ತಾಲ್ಲೂಕಿನಲ್ಲಿ 35 ಮನೆಗಳು ಹಾನಿಗೊಂಡಿದ್ದಾವೆ. 9 ಮನೆಗಳಿಗೆ ಈಗಾಗಲೇ ಸರ್ವೇ ಮಾಡಿ ಪರಿಹಾರಕ್ಕೆ ವರದಿ ಸಲ್ಲಿಸಲಾಗಿದೆ. ಬಿಡುಗಡೆ ಆಗುವುದು ಮಾತ್ರ ಬಾಕಿಯಿದೆ. 11 ಅನಧಿಕೃತವಾಗಿದ್ದು, ತಾಂತ್ರಿಕ ಸಮಸ್ಯೆಯಿಂದ ವರದಿ ತಯಾರಿಕೆಗೆ ಅಡ್ಡಿಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.
ಈ ವೇಳೆ ಕಳೆದ ವರ್ಷ ಮಳೆಹಾನಿಯಿಂದಾದ ಮನೆ ಹಾನಿಗೆ ನೀಡುವಂತ ಪರಿಹಾರ ತಡವಾಗಿದೆ. ಈ ಬಾರಿ ಅದು ಆಗಬಾರದು. ಡಿಸಿ ಜೊತೆಗೆ ಮಾತನಾಡಿ ಬೇಗ ಆಗುವಂತೆ ಮಾಡಿ. ಬಡವರಿಗೆ ಮನೆಹಾನಿ ಪರಿಹಾರ ತಕ್ಷಣವೇ ಸಿಗುವಂತೆ ಆಗಬೇಕು ಎಂಬುದಾಗಿ ತಿಳಿಸಿದರು.
ಸಾಗರ ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಜಾಸ್ತಿಯಾಗಿದೆ. ಅದನ್ನು ನಿಯಂತ್ರಿಸುವಂತ ಕೆಲಸವಾಗಬೇಕು. ಒತ್ತುವರಿ ಮಾಡಿ ಶುಂಠಿ ಹಾಕಿ, ಬಾಡಿಗೆ ಕೊಡೋರ ಸಂಖ್ಯೆ ಜಾಸ್ತಿಯಾಗಿದೆ. ಅದನ್ನು ತಡೆಯಬೇಕು ಎಂದು ಸೂಚಿಸಿದರು.
94ಸಿ ವಿತರಣೆ ತ್ವರಿತವಾಗಿ ನಡೆಯುತ್ತಿಲ್ಲ. ನನಗೆ ಈ ಬಗ್ಗೆ ಬೇಸರವಿದೆ. ತೃಪ್ತಿಯೂ ಇಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆ ಜೊತೆಗೂಡಿ ಜಂಟಿ ಸರ್ವೆ ಮಾಡಿ 94ಸಿ ಅಡಿಯಲ್ಲಿ ಬಡವರಿಗೆ ಹಕ್ಕು ಪತ್ರ ಸಿಗುವಂತೆ ಆಗಲು ಕ್ರಮವಹಿಸುವಂತೆ ಸಲಹೆ ಮಾಡಿದರು.
ಕೆಡಿಪಿ ಸದಸ್ಯ ಪ್ರಶಾಂತ್ 94ಸಿ ಮಾಡಿಕೊಡಲು ವಿಎಗಳು 25ರಿಂದ 30 ಸಾವಿರ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದಾಗ, ಶಾಸಕರು ಗರಂ ಆದರು. ಹಾಗೆ ಯಾರು ಹಣ ಕೇಳುತ್ತಿದ್ದಾರೋ ಅಂತ ವಿಎ ವಿರುದ್ಧ ಕ್ರಮವಾಗಬೇಕು. ಅವರನ್ನು ಕೂಡಲೇ ಅಮಾನತುಗೊಳಿಸಿ. ಬಡವರಿಗೆ ಸಮಸ್ಯೆ ಆಗುವುದನ್ನು, ಹಣಕ್ಕೆ ಬೇಡಿಕೆ ಇಡೋದನ್ನು ನಾನೆಂದೂ ಸಹಿಸೋದಿಲ್ಲ ಎಂದರು.
ತಹಶೀಲ್ದಾರ್ ಕಚೇರಿ ನಿರ್ವಹಣೆ ಸರಿಯಿಲ್ಲ. ನೂತನ ಪೀಠೋಪಕರಣ ನೀಡಲಾಗಿದೆ. ಸಮರ್ಪಕ ನಿರ್ವಹಣೆಯ ಕೊರತೆಯಿದೆ. ಇದಕ್ಕಾಗಿ ನಗರಸಭೆಯಿಂದ ಒಬ್ಬ ಸಿಬ್ಬಂದಿ ನೀಡಲು ತಿಳಿಸುತ್ತೇನೆ. ತಹಶೀಲ್ದಾರ್ ಕಚೇರಿ ಸ್ವಚ್ಛಗೊಳಿಸಿ, ಶೌಚಾಲಯ ದಿನಂಪ್ರತಿ ಕ್ಲೀನ್ ಮಾಡುವ ವ್ಯವಸ್ಥೆ ಮಾಡಲು ಪೌರಾಯುಕ್ತರಿಗೆ ಸೂಚಿಸಿದರು.
ಶಾಲಾ-ಕಾಲೇಜು ಆರಂಭಗೊಳ್ಳುತ್ತಿದ್ದು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಜಾತಿ-ಆದಾಯ ಪ್ರಮಾಣ ಪತ್ರ ವಿತರಣೆಯಲ್ಲಿ ಸಮಸ್ಯೆ ಆಗಬಾರದು. ತ್ವರಿತವಾಗಿ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಣೆಯಾಗಬೇಕು ಎಂದು ತಹಶೀಲ್ದಾರ್ ಗೆ ನಿರ್ದೇಶಿಸಿದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಈಗಾಗಲೇ ಸಾಗರ ತಾಲ್ಲೂಕಿನಲ್ಲಿ ಡೆಂಗ್ಯೂ, ಕೊರೋನಾ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುನ್ಸೂಚನೆ ನೀಡಿದ್ದೇನೆ. ಸ್ವಚ್ಛತೆಯ ಕ್ರಮವಹಿಸಿ, ಡೆಂಗ್ಯೂ ಹೆಚ್ಚಳವಾಗದಂತೆ ಕ್ರಮವಹಿಸಲು ತಿಳಿಸಿದ್ದೇನೆ ಎಂದರು.
ಬಿಜೆಪಿ ಮುಖಂಡರ ಸುದ್ದಿಗೋಷ್ಠಿ ನಡೆಸಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಆದರೇ ಆ ಎಲ್ಲಾ ಆರೋಪಗಳು ಸುಳ್ಳು. ನಮ್ಮದೇ ಸರ್ಕಾರವಿದೆ. ಅನುದಾನ ತರೋದು ನನಗೆ ಗೊತ್ತಿದೆ. ಬಿಜೆಪಿ ಅವಧಿಯ ಅನುದಾನದ ಕಾಮಗಾರಿ ಮುಟ್ಟೋದಿಲ್ಲ. ನನ್ನ ಕಾರ್ಯಕ್ರಮಗಳಿಗೆ ಮಾತ್ರವೇ ಗುದ್ದಲಿಪೂಜೆ, ಶಂಕುಸ್ಥಾಪನೆ ನೆರವೇರಿಸುವುದಾಗಿ ಸ್ಪಷ್ಟ ಪಡಿಸಿದರು.
ಎಂಎಸ್ಐಎಲ್ ನಿಗಮದಲ್ಲಿ ಹಣವಿರುತ್ತದೆ. ಹಿಂದಿನ ಶಾಸಕರು ಅದರಿಂದ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಆದರೇ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಅಷ್ಟು ಅನುದಾನವಿರೋದಿಲ್ಲ. ಒಂದು ವೇಳೆ ದೊರೆಯುವುದಾದರೇ ಸಾಗರಕ್ಕೆ ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಹೇಳಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ನಾಳೆಯೊಳಗೆ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆಯಾಚಿಸಬೇಕು: ಫಿಲ್ಮಂ ಚೇಂಬರ್ ಅಧ್ಯಕ್ಷ ನರಸಿಂಹಲು
BREAKING : 43 ಕ್ರಿಮಿನಲ್ ಕೇಸ್ ಹಿಂಪಡೆಯುವ ರಾಜ್ಯ ಸರ್ಕಾರದ ಕ್ರಮಕ್ಕೆ ಹಿನ್ನಡೆ: ಹೈಕೋರ್ಟ್ ನಿಂದ ಆದೇಶವೇ ರದ್ದು.!