ಬೆಂಗಳೂರು:ಮಾಂಸಾಹಾರ ಸೇವಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದ ನಂತರ ನಡೆದ ವಿವಾದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಪವಿತ್ರ ಸ್ಥಳಗಳಲ್ಲಿ ನಂಬಿಕೆಯಿರುವ ಜನರ ಭಾವನೆಗಳನ್ನು ಗೌರವಿಸುವುದು ಮುಖ್ಯ ಎಂದು ಹೇಳಿದರು.
ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳು ಎಂಬುದನ್ನು ಎಲ್ಲೋ ಒಂದು ಕಡೆ ಮರೆಯುತ್ತಿದ್ದಾರೆ ಎಂಬುದು ನನ್ನ ಭಾವನೆ. ಇದು ಮೊದಲ ಬಾರಿ ಏನಲ್ಲ. ಹಲವು ಸಂದರ್ಭಗಳಲ್ಲಿ ಈ ರೀತಿ ಘಟನೆಗಳು ಪುನರಾವರ್ತನೆ ಆಗಿವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ದೇವರ ಬಗ್ಗೆ ಎಷ್ಟು ಭಕ್ತಿ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ಬೇರೆ ಮಾತು. ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ಅವರ ನಡವಳಿಕೆಯನ್ನು ಸಮಾಜ, ಪ್ರತಿಯೊಬ್ಬರೂ ಗಮನಿಸುತ್ತಾರೆ. ಈ ಘಟನೆ ನಿಜವಾಗಿಯೂ ಖಂಡನೀಯ. ಅದರಲ್ಲೂ ಸುತ್ತೂರಿನ ಪವಿತ್ರ ಗದ್ದುಗೆಗೆ ಭೇಟಿ ಕೊಟ್ಟದ್ದು ನಿಜವಾಗಲೂ ಒಂದು ದುರಂತ ಎಂದು ತಿಳಿಸಿದರು.
ಇಲ್ಲಿ ಪಕ್ಷದ ಮೂರು ದಿನಗಳ ‘ಗ್ರಾಮ ಚಲೋ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಇದೇ ಮೊದಲಲ್ಲ, ಸಿದ್ದರಾಮಯ್ಯ ಪದೇ ಪದೇ ಮಾಡುತ್ತಿದ್ದಾರೆ, ಇದು ಅವರ ಸಿಎಂ ಸ್ಥಾನಕ್ಕೆ ತಕ್ಕಂತೆ ಇಲ್ಲ ಎಂದರು.
“ಅಂತಹ ಸ್ಥಳಗಳನ್ನು ಪವಿತ್ರವೆಂದು ಪರಿಗಣಿಸುವ ಜನರ ಭಾವನೆಗಳನ್ನು ಗೌರವಿಸುವುದು ಮುಖ್ಯ, ಒಬ್ಬ ವ್ಯಕ್ತಿಯಾಗಿ, ಮಾಂಸ ಅಥವಾ ತರಕಾರಿಗಳನ್ನು ಸೇವಿಸಬಹುದು, ಅದು ಒಬ್ಬರ ಆಯ್ಕೆಗೆ ಬಿಟ್ಟದ್ದು. ಆದರೆ ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಒಬ್ಬರು ಪ್ರತಿಯೊಬ್ಬರ ಭಾವನೆಗಳಿಗೆ ಗೌರವ ನೀಡಬೇಕು,” ಎಂದರು.
ಒಮ್ಮೆ ತಪ್ಪಿದಲ್ಲಿ ಜನ ಮನ್ನಿಸುತ್ತಾರೆ, ಆದರೆ ನಿತ್ಯ ನಡೆದರೆ ಸಿಎಂ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂದು ಭಾವಿಸುತ್ತಾರೆ, ಇಂತಹ ತಪ್ಪುಗಳು ಮರುಕಳಿಸಬಾರದು ಎಂಬುದಷ್ಟೇ ಅವರಿಗೆ ನನ್ನ ಮನವಿ ಎಂದು ವಿಜಯೇಂದ್ರ ಹೇಳಿದರು.