ನವದೆಹಲಿ: ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಭದ್ರತಾ ಬೆಂಗಾವಲು ವಾಹನದ ಮೇಲೆ ಶಂಕಿತ ಉಗ್ರರು ಸೋಮವಾರ ದಾಳಿ ನಡೆಸಿದ್ದು, ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಾವಲು ಪಡೆ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ತೆರಳುತ್ತಿತ್ತು. ಈ ವೇಳೆಯಲ್ಲಿ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಭದ್ರತಾ ಪಡೆಗಳ ವಾಹನಗಳ ಮೇಲೆ ಅನೇಕ ಗುಂಡುಗಳನ್ನು ಹಾರಿಸಲಾಗಿದೆ. ಅವರು ಪ್ರತೀಕಾರ ತೀರಿಸಿಕೊಂಡರು. ರಾಷ್ಟ್ರೀಯ ಹೆದ್ದಾರಿ -53 ರ ಕೋಟ್ಲೆನ್ ಗ್ರಾಮದ ಬಳಿ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ ಎಂದು ಅವರು ಹೇಳಿದರು.
ದಾಳಿಯ ಸಮಯದಲ್ಲಿ ಕನಿಷ್ಠ ಒಬ್ಬ ಸಿಬ್ಬಂದಿಗೆ ಗುಂಡು ತಗುಲಿದೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ದೆಹಲಿಯಿಂದ ಇನ್ನೂ ಇಂಫಾಲ್ ತಲುಪದ ಸಿಎಂ ಬಿರೇನ್ ಸಿಂಗ್ ಅವರು ಜಿಲ್ಲೆಯ ಪರಿಸ್ಥಿತಿಯನ್ನು ಪರಿಶೀಲಿಸಲು ಜಿರಿಬಾಮ್ಗೆ ಭೇಟಿ ನೀಡಲು ಯೋಜಿಸುತ್ತಿದ್ದರು” ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಜಿರಿಬಾಮ್ನಲ್ಲಿ ಶನಿವಾರ ಶಂಕಿತ ಉಗ್ರರು ಎರಡು ಪೊಲೀಸ್ ಹೊರಠಾಣೆಗಳು, ಅರಣ್ಯ ಬೀಟ್ ಕಚೇರಿ ಮತ್ತು ಕನಿಷ್ಠ 70 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.