ಬೆಂಗಳೂರು: ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಆಚರಿಸಲ್ಪಡುವ ‘ಸುಶಾಸನ ದಿನ’ದ ಭಾಗವಾಗಿ ಒಟ್ಟು 10 ಸಾವಿರ ಯುವಜನರಿಗೆ ಭಾನುವಾರ ಇಲ್ಲಿ ಉದ್ಯೋಗಪತ್ರಗಳನ್ನು ವಿತರಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂಕೇತಿಕವಾಗಿ ಎಂಟು ಅಭ್ಯರ್ಥಿಗಳಿಗೆ ಉದ್ಯೋಗಾದೇಶಗಳನ್ನು ಹಸ್ತಾಂತರಿಸಿದರು.

ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಈ ಉಪಕ್ರಮದಡಿ, ಮಾಸಿಕ ಕನಿಷ್ಠ 18 ಸಾವಿರ ರೂ.ಗಳಿಂದ ಹಿಡಿದು ಗರಿಷ್ಠ 45 ಸಾವಿರ ರೂ. ವೇತನದವರೆಗಿನ ಉದ್ಯೋಗಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ. ಉದ್ಯೋಗ ಪಡೆದುಕೊಂಡವರಲ್ಲಿ ಎಂಜಿನಿಯರಿಂಗ್, ಬಿ.ಎಸ್ಸಿ, ಬಿ.ಕಾಂ., ನರ್ಸಿಂಗ್‌, ಡಿಪ್ಲೊಮಾ, ಪಾಲಿಟೆಕ್ನಿಕ್‌ ಪದವೀಧರರಿದ್ದಾರೆ. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯೋಗ ಪಡೆದುಕೊಂಡ 3 ಸಾವಿರ ಅಭ್ಯರ್ಥಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಇದ್ದರು. ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ & ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳು ಸಂಯುಕ್ತವಾಗಿ ಈ ಕಾರ್ಯಕ್ರಮ ಏರ್ಪಡಿಸಿದ್ದವು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, “ಕರ್ನಾಟಕವನ್ನು ಬಿಟ್ಟರೆ ಬೇರ್‍ಯಾವ ರಾಜ್ಯದಲ್ಲೂ ಉದ್ಯೋಗ ನೀತಿ ಇಲ್ಲ. ಇದಕ್ಕೆ ಪೂರಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನೂ ತರಲಾಗಿದೆ. ಸ್ಥಳೀಯರಿಗೆ ಉದ್ಯೋಗ ಸಿಗಬೇಕೆನ್ನುವುದು ಸರಕಾರದ ಗುರಿಯಾಗಿದ್ದು, ನೇಮಕಾತಿಗೆ ತಕ್ಕ ಪ್ರೋತ್ಸಾಹ ಕೊಡಲಾಗುತ್ತಿದೆ. ಇದರಂತೆ ವಿದ್ಯುತ್‌ಚಾಲಿತ ವಾಹನಗಳ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ತಮ್ಮ ಆರ್‍‌ & ಡಿ ಕೇಂದ್ರಗಳನ್ನು ಹೊಂದಿರುವ ಕಂಪನಿಗಳು ನಮ್ಮ ರಾಜ್ಯದಲ್ಲೇ ಉತ್ಪಾದನಾ ಘಟಕಗಳನ್ನೂ ಕಡ್ಡಾಯವಾಗಿ ಸ್ಥಾಪಿಸುವಂತೆ ನೋಡಿಕೊಳ್ಳಬೇಕು” ಎಂದರು.

ಇದಲ್ಲದೆ, ‘ಸ್ತ್ರೀ ಸಾಮರ್ಥ್ಯ’ ಯೋಜನೆಯಡಿ ಒಂದು ಲಕ್ಷ ರೂ. ಸಬ್ಸಿಡಿ ಸಹಿತ ತಲಾ 5 ಲಕ್ಷ ರೂ.ಗಳ ಸಾಲ ಸೌಲಭ್ಯ ಒದಗಿಸುವ ಮೂಲಕ 5 ಲಕ್ಷ ಮಹಿಳೆಯರ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲಾಗುವುದು. ಹಾಗೆಯೇ, ‘ಸ್ವಾಮಿ ವಿವೇಕಾನಂದ ಯೋಜನೆ’ಯ ಮುಖಾಂತರ ಗ್ರಾಮೀಣ ಭಾಗಗಳ 5 ಲಕ್ಷ ಯುವಜನರಿಗೆ ಉದ್ಯೋಗ ಕೊಡಲಾಗುವುದು. ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆಗೆ ವೇಗ ಮತ್ತು ಅಗಾಧತೆ ಸಿಕ್ಕಲಿದೆ ಎಂದು ಅವರು ನುಡಿದರು.

ರಾಜ್ಯಕ್ಕೆ ಇತ್ತೀಚೆಗೆ 8 ಲಕ್ಷ ಕೋಟಿ ರೂ. ಹೂಡಿಕೆ ಬರುವುದು ಖಾತ್ರಿಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಕೌಶಲ್ಯಾಭಿವೃದ್ಧಿ ನಿರ್ಣಾಯಕವಾಗಿದೆ. ಹೀಗಾಗಿ ಐಟಿಐ, ಜಿಟಿಟಿಸಿ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳೆಲ್ಲವನ್ನೂ ಕೌಶಲ್ಯದ ವ್ಯಾಪ್ತಿಗೆ ತರಲಾಗಿದೆ. ಇನ್ನೊಂದೆಡೆಯಲ್ಲಿ, ಪ್ರಧಾನಮಂತ್ರಿಗಳ ಸ್ಕಿಲ್‌ ಇಂಡಿಯಾ ಮತ್ತು ದೀನ್‌ ದಯಾಳ್‌ ಉಪಾಧ್ಯಾಯ ಕೌಶಲ್ಯ ಯೋಜನೆಗಳಡಿ ಯುವಜನರನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮತ್ತು ಉದ್ಯೋಗದಾತರನ್ನಾಗಿ ಮಾಡಲಾಗುತ್ತಿದೆ. ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಮುದ್ರಾ’ದ ಅಡಿಯಲ್ಲಿ ರಾಜ್ಯದ 25 ಲಕ್ಷ ಜನರಿಗೆ ತಮ್ಮ ವಹಿವಾಟು/ಉದ್ಯಮಗಳನ್ನು ಆರಂಭಿಸಲು ಗರಿಷ್ಠ ತಲಾ 10 ಲಕ್ಷ ರೂ.ವರೆಗೆ ಸುಗಮವಾಗಿ ಸಾಲ ಕೊಡಲಾಗಿದೆ ಎಂದು ಅವರು ತಿಳಿಸಿದರು.

ಪಾಶ್ಚಾತ್ಯ ರಾಷ್ಟ್ರಗಳು ಈಗ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದ್ದು, ಪಕ್ಕದ ಚೀನಾ ಕೋವಿಡ್‌ನಿಂದ ತತ್ತರಿಸುತ್ತಿದೆ. ಆದರೆ, ಶೇಕಡ 46ರಷ್ಟು ಯುವಜನರೊಂದಿಗೆ ಭಾರತವು ದೈತ್ಯ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದೆ. ಯುವಜನರು ಜಾಗತಿಕ ಸ್ಪರ್ಧೆಯನ್ನು ಕಡೆಗಣಿಸದೆ ವೈಯಕ್ತಿಕ ಯಶಸ್ಸನ್ನು ಸಾಧಿಸಿ, ಸಾಮುದಾಯಿಕ ಸಾಧನೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಬೊಮ್ಮಾಯಿ ಆಶಿಸಿದರು.

ವೃತ್ತಿ ತರಬೇತಿ ಆರಂಭ

ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, “ಈ ವರ್ಷದಿಂದ ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ವೃತ್ತಿ ತರಬೇತಿ ಪದವಿಯನ್ನು (ಬಿ.ವೋಕ್‌) ಪ್ರಾರಂಭಿಸಲಾಗುವುದು. ಇದಕ್ಕಾಗಿ ಜಿಟಿಟಿಸಿ ಮತ್ತು ವಿವಿ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರ ಮೂಲಕ ‘ಸರ್ವರಿಗೂ ಉದ್ಯೋಗ’ ನೀತಿಯ ಸಾಕಾರ ಮಾಡಲಾಗುವುದು ಎಂದರು.

ಈಗಾಗಲೇ ರಾಜ್ಯದಲ್ಲಿ ಸರಕಾರಿ 150 ಐಟಿಐಗಳನ್ನು ಉನ್ನತೀಕರಿಸಲಾಗಿದೆ. ಈ ವರ್ಷ ಉಳಿದ 30 ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಜಿಟಿಟಿಸಿಗಳಲ್ಲಿ ಈಗಾಗಲೇ ಅಲ್ಪಾವಧಿಯ 10 ಮತ್ತು ದೀಘಾವಧಿಯ 30 ಹೊಸ ಕೋರ್ಸುಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿರುವ ಉದ್ಯೋಗಾವಕಾಶಗಳು ಹೊರರಾಜ್ಯಗಳವರ ಪಾಲಾಗುವುದಕ್ಕಿಂತ ನಮ್ಮ ಯುವಜನರಿಗೇ ಸಿಗುವಂತೆ ಮಾಡುವುದು ನಮ್ಮ ಮುಂದಿರುವ ಹೆಗ್ಗುರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಉನ್ನತ ಶಿಕ್ಷಣ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಪಾರದರ್ಶಕತೆ, ಉತ್ತರದಾಯಿತ್ವ, ಸುಲಭ ವರ್ಗಾವಣೆ, ಕುಂದುಕೊರತೆಗಳ ಸುಗಮ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸುಶಾಸನ ಮಾಸವನ್ನು ರಚನಾತ್ಮಕವಾಗಿ ಆಚರಿಸಲಾಗಿದೆ, ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ ಮುಖಾಂತರ ವಿದ್ಯಾರ್ಥಿಗಳ ಆಸಕ್ತಿಗಳು ಇತ್ಯಾದಿಗಳನ್ನು ಗಮನಿಸಿ, ಸೂಕ್ತ ಕೌಶಲ್ಯಾಭಿವೃದ್ಧಿ ಒದಗಿಸಲಾಗುವುದು ಎಂದು ಅವರು ನುಡಿದರು.

ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆ ನಿವಾರಣೆಗೆ ರೂಪಿಸಿರುವ ‘ಶಿಕ್ಷಣ ಸ್ಪಂದನ’ ಉಪಕ್ರಮ ಮತ್ತು ಜಿಟಿಟಿಸಿ ಪುನಾರಚನೆ ವರದಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌ ಸೆಲ್ವಕುಮಾರ್‍‌, ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಎಂಡಿ ಅಶ್ವಿನ್‌ ಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಜೀವನೋಪಾಯ ಮಿಷನ್ ವ್ಯವಸ್ಥಾಪಕ‌ ನಿರ್ದೇಶಕಿ ರಾಗಪ್ರಿಯಾ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆಯುಕ್ತೆ ಜ್ಯೋತಿ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ ತಿಮ್ಮೇಗೌಡ, ಜಿಟಿಸಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.

ತನ್ನ ಪ್ರಾಣ ಸ್ನೇಹಿತ ಹೊಸ ಪಕ್ಷ ರಚನೆ ಬಗ್ಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದೇನು ಗೊತ್ತಾ?

ಬೆಂಗಳೂರಿನಲ್ಲಿ ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆ ಲಾಂಗ್ ಬೀಸಿದ ಪುಂಡ: ಕಾಲಿಗೆ ಗುಂಡೇಟು, ಅರೆಸ್ಟ್

ಜನಾರ್ಧನ ರೆಡ್ಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ – ಸಚಿವ ಜೆ.ಸಿ ಮಾಧುಸ್ವಾಮಿ

Share.
Exit mobile version