ರಾಯಚೂರ : ಕರ್ನಾಟಕ ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.
ಜುಲೈ 15ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿ ಅವರ ದರ್ಶನದ ಪಡೆದು, ಮಂತ್ರಾಲಯದ ಕರ್ನಾಟಕ ಛತ್ರದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ನಿರ್ಮಾಣ ಮಾಡಿರುವ ನೂತನ ಹಾಗೂ ಹಳೆ ಕಟ್ಟಡಗಳ ಪರಿಶೀಲನೆ ನಡೆಸಿ ಕರ್ನಾಟಕ ರಾಜ್ಯ ವಸತಿ ಗೃಹ ಕಟ್ಟಡದ ಸಭಾಂಗಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂತ್ರಾಲಯಕ್ಕೆ ಪ್ರತಿ ದಿನ ಅಂದಾಜು 200 ಬಸ್ಸಗಳು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುತ್ತವೆ. ರೈಲಿನ ಮೂಲಕವು ಜನರು ಮಂತ್ರಾಲಯಕ್ಕೆ ಬರುತ್ತಾರೆ. ಆಂಧ್ರಕ್ಕೆ ಹೋಲಿಸಿದರೆ ಶೇ.60ರಷ್ಟು ಜನರು ಕರ್ನಾಟಕ ರಾಜ್ಯದಿಂದಲೇ ಮಂತ್ರಾಲಯಕ್ಕೆ ಆಗಮಿಸುತ್ತಾರೆ. ಈ ಬಗ್ಗೆ ಮಂತ್ರಾಲಯದ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದಾಗ, ಕರ್ನಾಟಕದಿಂದ ಬರುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ವಸತಿ ಗೃಹಗಳ ನಿರ್ಮಾಣಕ್ಕೆ ಸೂಕ್ತವಾದ ಜಾಗದ ವ್ಯವಸ್ಥೆ ಮಾಡಿಕೊಡುವುದಾಗಿ ಸ್ವಾಮೀಜಿ ಅವರು ಮಾತುಕೊಟ್ಟಿದ್ದಾರೆ ಎಂದು ಸಚಿವರು ತಿಳಿಸಿದರು.
ಮಂತ್ರಾಲಯದಲ್ಲಿ ಈಗಿರುವ ಕರ್ನಾಟಕ ರಾಜ್ಯ ವಸತಿ ಗೃಹ ಕಟ್ಟಡದ ಕಳಪೆ ಕಾಮಗಾರಿಯ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಕಳಪೆ ಕಾಮಗಾರಿ ನಡೆದಿದೆ ಎಂದು ಲೋಕಾಯುಕ್ತರಿಂದ ಸಾಬೀತಾದಲ್ಲಿ ಸಂಬAಧಿಸಿದ ಗುತ್ತಿಗೆದಾರರಿಂದಲೇ ಕಟ್ಟಡದ ದುರಸ್ತಿ ಮಾಡಿಸಲಾಗುವುದು. ಇಲ್ಲವಾದಲ್ಲಿ ಕಟ್ಟಡದಲ್ಲಿನ ನೂನ್ಯತೆಗಳ ಬಗ್ಗೆ ಪರಿಶೀಲಿಸಿ ಮಾಸ್ಟರ್ ಪ್ಲಾನ್ ರೂಪಿಸಿ ಕಟ್ಟಡವನ್ನು ಸರಿಪಡಿಸಲಾಗುವುದು ಎಂದು ಸಚಿವರು ಹೇಳಿದರು.
ಆನಲೈನ್ ವ್ಯವಸ್ಥೆಗೆ ಕ್ರಮ
ಧಾರ್ಮಿಕ ದತ್ತಿ ಇಲಾಖೆಯಿಂದ ಮಂತ್ರಾಲಯದಲ್ಲಿ ನಿರ್ಮಾಣ ಮಾಡಿರುವ ಕರ್ನಾಟಕ ರಾಜ್ಯದ ವಸತಿ ಗೃಹದಲ್ಲಿ ಒಟ್ಟು 50 ಕೋಣೆಗಳಿವೆ. ಇವುಗಳನ್ನು ಕರ್ನಾಟಕದಿಂದ ಬರುವ ಭಕ್ತರಿಗೆ ಮೀಸಲಿರಿಸಿದೆ. ತಲಾ ನಾಲ್ಕು ಜನರು 12 ಗಂಟೆ ಸಮಯ ವಾಸ್ತವ್ಯ ಮಾಡಲು 500 ರೂಪಾಯಿ ದರ ನಿಗದಿಪಡಿಸಲಾಗಿದೆ. 12 ಗಂಟೆ ಮೀರಿದಾಗ 1000 ರೂ. ದರ ನಿಗದಿಪಡಿಸಲಾಗುತ್ತದೆ. ಒಟ್ಟು 50 ರೂಮುಗಳ ಪೈಕಿ 30 ರೂಮುಗಳನ್ನು ಆನಲೈನ್ ಮೂಲಕ ಹಾಗೂ ಇನ್ನುಳಿದ 20 ರೂಮುಗಳನ್ನು ನೇರವಾಗಿ ಹಣ ಪಾವತಿಸಿ ಬುಕ್ಕಿಂಗ್ ಮಾಡುವ ವ್ಯವಸ್ಥೆಗೆ ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದರು.
ಟೂರಿಸಂ ಇಲಾಖೆಗೆ ಉಸ್ತುವಾರಿ
ಕಲ್ಯಾಣ ಮಂಟಪ, ಛತ್ರ, ವಸತಿ ಗೃಹಗಳ ನಿರ್ಮಾಣ ಪ್ರಕರಣವು ನ್ಯಾಯಾಲಯದ ಅಂಗಳದಲ್ಲಿರುವುದರಿAದ ಕಟ್ಟಡದ ದುರಸ್ತಿಗೆ ತೊಡಕಾಗಿ ಪರಿಣಮಿಸಿದೆ. ಮಂತ್ರಾಲಯ, ಶ್ರೀಶೈಲಂ, ತಿರುಪತಿ ಸೇರಿದಂತೆ ನಾನಾ ಕಡೆಗಳಲ್ಲಿ ವಿವಾದದಿಂದ ಕೂಡಿರುವ ಜಾಗದ ಸಮಸ್ಯೆಯನ್ನು ಬೇಗನೆ ಇತ್ಯರ್ಥಪಡಿಸಬೇಕು ಎಂದು ಖುದ್ದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಆಯಾ ದತ್ತಿ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದ ಸಚಿವರು, ಉತ್ತಮ ದರ್ಜೆಯ ನಿರ್ವಹಣೆಗಾಗಿ ಮಂತ್ರಾಲಯದಲ್ಲಿರುವ ಕರ್ನಾಟಕ ವಸತಿ ಗೃಹಗಳ ಕಟ್ಟಡದ ನಿರ್ಹಹಣೆಯ ಉಸ್ತುವಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವ ಬಗ್ಗೆ ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ ಅವರೊಂದಿಗೆ ಮಾತನಾಡುವುದಾಗಿ ಸಚಿವರು ತಿಳಿಸಿದರು.
ಈ ವೇಳೆ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾದ ವೆಂಕಟೇಶ್, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಕಿಶೋರ್ ಕುಮಾರ ಪಾಟೀಲ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಶಾವಂತಗೇರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚAದ್ರಶೇಖರ, ಕರ್ನಾಟಕ ವಸತಿ ಗೃಹ ಕಟ್ಟಡದ ಅಧಿಕಾರಿ ಆಂಜನೇಯ ಸೇರಿದಂತೆ ಇನ್ನೀತರರು ಇದ್ದರು.