ಬೆಂಗಳೂರು: ರಾಜ್ಯ ಸರಕಾರವು ಬೆಲೆ ಏರಿಕೆ, ದರ ಹೆಚ್ಚಳದ ಅಭಿಯಾನವನ್ನೇ ಕೈಗೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ಬಸ್ ಪ್ರಯಾಣದರ ಹೆಚ್ಚಿಸಿದ್ದರು. ಈಗ ಮೆಟ್ರೋ ಪ್ರಯಾಣ ದರ ಹೆಚ್ಚಿಸಿದ್ದಾರೆ. ಈ ರೀತಿ ಹೆಚ್ಚಳದಿಂದ ಮೆಟ್ರೋ, ಬಸ್ ಪ್ರಯಾಣ ಕೈಬಿಟ್ಟು ಸ್ವಂತ ವಾಹನದಲ್ಲಿ ಓಡಾಡಲು ಇನ್ನೂ ಹೆಚ್ಚು ಖರ್ಚಾಗಲಿದೆ ಎಂದು ವಿಶ್ಲೇಷಿಸಿದರು.
ಜನರು ಅತಿ ಹೆಚ್ಚು ಅಸಹಾಯಕ ಪರಿಸ್ಥಿತಿಗೆ ಹೋಗುತ್ತಿದ್ದಾರೆ. ಈಗ ಮೆಟ್ರೋ ಪ್ರಯಾಣದರ ಎಷ್ಟು ಹೆಚ್ಚಿಸಿದ್ದಾರೆ ಎಂದರೆ, ಬೆಂಗಳೂರಿನಲ್ಲಿ 25- 30 ಕಿಮೀ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡಿದರೆ ಹಿಂದೆ 60 ರೂ. ಇತ್ತು. ಈಗ ಅದು 90 ರೂ. ಆಗಿದೆ ಎಂದು ಆಕ್ಷೇಪಿಸಿದರು.
100 ರೂ. ಇದ್ದರೆ ಈಗ 146 ರೂ. ಅಂದರೆ ಶೇ 46 ಏರಿಕೆ ಆಗಿದೆ ಎಂದು ಟೀಕಿಸಿದರು. ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರಿನಲ್ಲಿ ಮೆಟ್ರೋ ಬಂದಿದೆ. ಟ್ರಾಫಿಕ್ ಕಡಿಮೆ ಮಾಡಲು ಮೆಟ್ರೋ ಬಂದರೆ, ಇವರು ಮೆಟ್ರೋ, ಬಸ್ ಪ್ರಯಾಣ ದರ ಏರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಡೀಸೆಲ್, ಪೆಟ್ರೋಲ್ ದರವನ್ನು ಬೇರೆ ರಾಜ್ಯಕ್ಕೆ ಹೋಲಿಸಿದರೆ ಸಿದ್ದರಾಮಯ್ಯರ ಸರಕಾರ ಮೂರು ಸಲ ಹೆಚ್ಚಿಸಿದೆ ಎಂದರು. ಇದರಿಂದ ಆಟೋ ದರ ಹೆಚ್ಚಾಗಿದೆ. ಆಟೋ, ಬಸ್, ಮೆಟ್ರೋದಲ್ಲಿ ಬಡವರು ಓಡಾಡುತ್ತಾರೆ. ಬಡವರ ಮೇಲೆ ಒಂದಾದ ಬಳಿಕ ಒಂದರಂತೆ ಬರೆ ಹಾಕುವುದು ಸರಿಯಲ್ಲ ಎಂದು ತಿಳಿಸಿದರು.
ಡೀಸೆಲ್, ಪೆಟ್ರೋಲ್ ದರ ಏರಿಕೆ, ಮೆಟ್ರೋ, ಬಸ್, ಆಟೋ ದರ ಹೆಚ್ಚಳದಿಂದ ಬಡವರ ಮೇಲೆ ನಿರಂತರ ಪ್ರಹಾರ ಆಗುತ್ತಿದೆ. ಹೆಚ್ಚಿಸಿದ ಮೆಟ್ರೋ ಪ್ರಯಾಣ ದರವನ್ನು ವಾಪಸ್ ಪಡೆಯಬೇಕು ಎಂದು ಅವರು ಸಿದ್ದರಾಮಯ್ಯನವರಿಗೆ ಮನವಿ ಮಾಡಿದರು.
BREAKING: ನಾಳೆ ‘ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡು’ ರಾಜ್ಯಪಾಲರಿಗೆ ಮರು ರವಾನೆ
BREAKING: ನಾಳೆ ಪ್ರಯಾಗ್ ರಾಜ್ ಮಹಾ ಕುಂಭಮೇಳಕ್ಕೆ ‘ರಾಷ್ಟ್ರಪತಿ ಮುರ್ಮು’ ಭೇಟಿ, ಪುಣ್ಯ ಸ್ನಾನ