ಬೆಂಗಳೂರು: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಇತ್ತೀಚೆಗೆ ಹೊರಡಿಸಿರುವ ಇಲಾಖಾ ಪದೋನ್ನತಿ ಪರೀಕ್ಷೆಗಳ (LDCE) ನೋಟಿಫಿಕೇಶನ್ನಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಭಾಷಾ ಅನ್ಯಾಯದ ವಿರುದ್ಧ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಏನಿದು ವಿವಾದ? ಹುಬ್ಬಳ್ಳಿ ವಿಭಾಗದಲ್ಲಿ ಖಾಲಿ ಇರುವ 39 ಆಫೀಸ್ ಸೂಪರಿಂಟೆಂಡೆಂಟ್, 25 ಸೀನಿಯರ್ ಕ್ಲಾರ್ಕ್ ಹಾಗೂ 9 ಇಂಟರ್ಮೀಡಿಯಟ್ ಅಪ್ರೆಂಟಿಸ್ ಮೆಕಾನಿಕ್ಸ್ ಹುದ್ದೆಗಳ ಭರ್ತಿಗಾಗಿ ಇಲಾಖಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಯಲಿವೆ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಇದು ಕರ್ನಾಟಕದ ಮಣ್ಣಿನಲ್ಲಿ ಕನ್ನಡಕ್ಕೆ ಮಾಡುತ್ತಿರುವ ಅಪಮಾನ ಎಂದು ಕರವೇ ಕಿಡಿಕಾರಿದೆ.
ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದಿಂದ ಇತ್ತೀಚೆಗೆ ಹೊರಡಿಸಲಾದ ಮೂರು ಪ್ರಮುಖ ಎಲ್ ಡಿಸಿಇ ನೋಟಿಫಿಕೇಷನ್ ಗಳನ್ನು (ಆಫೀಸ್ ಸೂಪರಿಂಟೆಂಡೆಂಟ್ ಲೆವೆಲ್-6, ಸೀನಿಯರ್ ಕ್ಲಾರ್ಕ್ ಲೆವೆಲ್-5 ಮತ್ತು ಇಂಟರ್ಮೀಡಿಯಟ್ ಅಪ್ರೆಂಟಿಸ್ ಮೆಕಾನಿಕ್ಸ್) ಗಮನಿಸಿದೆ. ಈ ನೋಟಿಫಿಕೇಷನ್ ಗಳಲ್ಲಿ ಈ ಪದೋನ್ನತಿ ಪರೀಕ್ಷೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ…
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) May 4, 2026
ನಾರಾಯಣಗೌಡ ಅವರ ಪ್ರಮುಖ ಆರೋಪಗಳು:
-
ಭಾಷಾ ಹಕ್ಕುಗಳ ಉಲ್ಲಂಘನೆ: ಕರ್ನಾಟಕದ ನೆಲದಲ್ಲಿ ಕನ್ನಡಿಗರ ಬೆವರಿನಿಂದ ಕಟ್ಟಲ್ಪಟ್ಟ ಇಲಾಖೆಯಲ್ಲಿ ಕನ್ನಡಕ್ಕೆ ಸ್ಥಾನವಿಲ್ಲದಿರುವುದು ಕನ್ನಡಿಗರ ಅಸ್ಮಿತೆಯ ಮೇಲಿನ ದಾಳಿಯಾಗಿದೆ.
-
ನೇಮಕಾತಿ ಷಡ್ಯಂತ್ರ: ಪರೀಕ್ಷೆಯಲ್ಲಿ ಕನ್ನಡವನ್ನು ಕೈಬಿಟ್ಟಿರುವುದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಿತ್ತುಕೊಂಡು ಹಿಂದಿ ಭಾಷಿಕರಿಗೆ ನೀಡುವ ವ್ಯವಸ್ಥಿತ ಹುನ್ನಾರವಾಗಿದೆ.
-
ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ: ಕನ್ನಡ ಮಾಧ್ಯಮದಲ್ಲಿ ಓದಿ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮೀಣ ಹಿನ್ನೆಲೆಯ ನೌಕರರು ಇಂಗ್ಲಿಷ್-ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದೆ ಪದೋನ್ನತಿಯಿಂದ ವಂಚಿತರಾಗುತ್ತಿದ್ದಾರೆ.
ಸರ್ಕಾರ ಮತ್ತು ಸಂಸದರಿಗೆ ಒತ್ತಾಯ: ಕನ್ನಡಿಗರ ಈ ಸ್ಥಿತಿಗೆ ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಸಂಸದರ ಮೌನವೇ ಕಾರಣ ಎಂದು ನಾರಾಯಣಗೌಡ ದೂರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಕ್ಷಣ ಕೇಂದ್ರದ ಮೇಲೆ ಒತ್ತಡ ಹೇರಬೇಕು. ವಿಶೇಷವಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಮಧ್ಯಪ್ರವೇಶಿಸಿ ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹೋರಾಟದ ಎಚ್ಚರಿಕೆ: “ರೈಲ್ವೆ ಇಲಾಖೆ ತಕ್ಷಣವೇ ಈ ಮೂರು ನೋಟಿಫಿಕೇಶನ್ಗಳನ್ನು ತಿದ್ದುಪಡಿ ಮಾಡಿ, ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಒಂದು ವೇಳೆ ಕನ್ನಡವನ್ನು ಕಡೆಗಣಿಸಿದರೆ, ಇಡೀ ಕರ್ನಾಟಕದಲ್ಲಿ ರೈಲ್ವೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತಹ ನಿರ್ಣಾಯಕ ಹೋರಾಟವನ್ನು ಕರವೇ ಹಮ್ಮಿಕೊಳ್ಳಲಿದೆ,” ಎಂದು ಅವರು ಎಚ್ಚರಿಸಿದ್ದಾರೆ.
ಕನ್ನಡಿಗರನ್ನು ಅವರದೇ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುವ ಕೇಂದ್ರ ಸರ್ಕಾರದ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ತಮ್ಮ ಎಕ್ಸ್ (ಟ್ವಿಟರ್) ಸಂದೇಶದಲ್ಲಿ ಗುಡುಗಿದ್ದಾರೆ.
ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರಿಗೆ ಕೇಂದ್ರದ ಬಂಪರ್ ಗಿಫ್ಟ್: ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ








