ಬೆಂಗಳೂರು: ಸಾಮಾಜಿಕ ನ್ಯಾಯದ ನೆಪದಲ್ಲಿ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಯನ್ನು ಎಳೆದು ತರುವುದು ಸರಿಯಲ್ಲ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಟೀಕಿಸಿದರು.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು; ಸಿದ್ದರಾಮಯ್ಯ ಅವರು ಒಂದು ಸಮುದಾಯದ ಬೆಂಬಲದಿಂದ ಅಷ್ಟೇ ಸಿಎಂ ಆಗಿದ್ದಲ್ಲ. ರಾಜ್ಯದ ಎಲ್ಲಾ ಸಮುದಾಯಗಳು ಬೆಂಬಲಿಸಿವೆ ಎಂಬುದನ್ನು ಮರೆಯಬಾರದು. ಅವರು ಮೊದಲು ಹಣಕಾಸು ಸಚಿವರಾದಾಗ, ಡಿಸಿಎಂ ಆದಾಗ ಯಾವೆಲ್ಲಾ ಸಮುದಾಯಗಳು ಬೆಂಬಲ ನೀಡಿದ್ದವು ಎಂಬುದು ಅವರಿಗೆ ಗೊತ್ತಿಲ್ಲವೇ? ಅವರಿಗೆ ರಾಜಕೀಯ ಶಕ್ತಿ ತುಂಬಿದವರು ಅವರ ಸಮುದಾಯಕ್ಕೆ ಸೇರಿದವರೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ತಮ್ಮ ಜಾತಿಯನ್ನು ಎಳೆದು ತರುವ ಮೂಲಕ ಸಿದ್ದರಾಮಯ್ಯನವರು ಕಾಂಗ್ರೆಸ್ ನವರಿಗೆ ಸಂದೇಶ ಕೊಟ್ಟಿದ್ದಾರೋ? ಅಥವಾ ಸಿಎಂ ಸ್ಥಾನ ತೆಗೆಯಲು ನಿಂತಿರುವವರಿಗೆ ಸಂದೇಶ ಕೊಟ್ಡಿದ್ದಾರೋ ಗೊತ್ತಿಲ್ಲ. ಇಂತಹ ಸಮಯದಲ್ಲಿ ಅವರು ತಾವು ಹುಟ್ಟಿದ ಸಮಾಜವನ್ನು ಎಳೆದು ತರುವುದು ಯಾವ ಮಟ್ಟಕ್ಕೆ ಸರಿ? ಇದು ಅವರ ಹೃದಯದ ಭಾವನೆ ಇದೆ ಎಂತಹುದು ಎಂಬುದು ಗೊತ್ತಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜಾತಿ ಹೆಸರು ಇಟ್ಟುಕೊಂಡು ಸಾಮಾಜಿಕ ನ್ಯಾಯ, ಜಾತ್ಯಾತೀತ ಅಂತ ಹೇಳುತ್ತಾರೆ. ನಾನು ಕುರುಬ ಸಮಾಜದವನು, ನನ್ನನ್ನು ಅಸೂಯೆಯಿಂದ ತೆಗೆಯಲು ಹೊರಟಿದ್ದಾರೆ ಎಂದು ಹೇಳುತ್ತಿದ್ದಾರೆ. ಮಾತೆತ್ತಿದರೆ ಉತ್ತಮ ಬಜೆಟ್ ಕೊಟ್ಟವನು ನಾನು ಅಂತಾರೆ. ಸಿದ್ದರಾಮಯ್ಯ ಬೆಳೆಯೋಕೆ ಕುರುಬ ಸಮಾಜ ಮಾತ್ರವಲ್ಲ, ಎಲ್ಲಾ ಸಮುದಾಯ ಬೆಂಬಲ ಕೊಟ್ಟಿವೆ. ಇಂತಹ ಜಾತಿ ಮನೋಭಾವ ಹೊಂದಿರುವ ಅವರು ತಾವು ಜಾತ್ಯತೀತ ಎಂದು ಬೇರೆ ಹೇಳಿಕೊಳ್ಳುತ್ತಾರೆ. ಸಾಮಾಜಿಕ ನ್ಯಾಯ ಎಂದು ಭಾಷಣ ಮಾಡುತ್ತಾರೆ. ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರುಗಳ ಹೆಸರು ಹೇಳುತ್ತಾರೆ. ಆದರೆ, ತಾವು ಎಂಬ ಜ್ಞಾನೋದಯ ಸಿದ್ದರಾಮಯ್ಯನವರಿಗೆ ಆಗಿದೆ. ಅವರನ್ನು ರಾಜಕೀಯವಾಗಿ ಬೆಳೆಸಿದವರಿಗೆ ಅವ a ನಡವಳಿಗೆ ಅಘಾತಕಾರಿ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಸಿದ್ದರಾಮಯ್ಯನವರು ಕುರ್ಚಿ ಬಿಟ್ಟು ಕೊಡುವ ಜಾಯಮಾನದವರಲ್ಲ
ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ. ಕುರ್ಚಿ ಬಿಡುವುದು ಅವರ ಜಾಯಮಾನದಲ್ಲಿಯೇ ಇಲ್ಲ. ನಮ್ಮ ಪಕ್ಷದಲ್ಲೇ ಇದ್ದರಲ್ಲ, ನೋಡಿದ್ದೇನೆ ನಾನು. ರಾಜ್ಯದ ಜನತೆ ಸೇವೆ ಮಾಡಲು, ಅಹಿಂದ ಜನರಿಗಾಗಿ ಕೆಲಸ ಮಾಡಲು ಇವರು ಅಧಿಕಾರಕ್ಕೆ ಬಂದಿಲ್ಲ. ಅವರಿಗೆ ವೈಯಕ್ತಿಕ ಅಧಿಕಾರವೇ ಮುಖ್ಯ. ನಮ್ಮ ಪಕ್ಷದಲ್ಲಿ ಇದ್ದಾಗಲೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು. ಇವತ್ತು ಆಶ್ರಯ ಕೊಟ್ಟ ಪಕ್ಷವನ್ನೇ ಆವರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಳಬರನ್ನ ಮೂಲೆಗುಂಪು ಮಾಡಿದ್ದಾರೆ. ನಾನು ಇದ್ದರೆ ಕಾಂಗ್ರೆಸ್, ನಾನು ಇಲ್ಲ ಅಂದರೆ ಕಾಂಗ್ರೆಸ್ ಇಲ್ಲ ಎನ್ನುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬಿಡಲು ಆಗಲ್ಲ ಎನ್ನುವ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎಂದು ಅವರು ಹೇಳಿದರು.
ಬಾಗಲಕೋಟೆ ಕಲ್ಲು ತೂರಾಟ ವಿಚಾರ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕಲ್ಲು ಹೊಡೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಈ ಸರ್ಕಾರ ಬಂದ ಮೇಲೆ ಮದ್ದೂರು, ನಾಗಮಂಗಲ ಸೇರಿ ಅನೇಕ ಕಡೆ ಮೆರವಣಿಗೆ ಮಾಡುವಾಗಾ ಗಲಭೆಗಳು ನಡೆದವು. ಈಗ ಬಾಗಲಕೋಟೆಯಲ್ಲಿ ಆಗಿದೆ. ಪೊಲೀಸರ ಮೇಲೆ ಕಲ್ಲು ಹೊಡೆದಿದ್ದಾರೆ. ಈ ಘಟನೆ ಖಂಡನೀಯ. ಕಠಿಣ ಕ್ರಮ ಕೈಗೊಳ್ಳುವ ಕೆಲಸ ಆಗಬೇಕು ಎಂದು ಕೇಂದ್ರ ಸಚಿವರು ಹೇಳಿದರು.
ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚನೆ ಶೀಘ್ರ:
ಸಮನ್ವಯ ಸಮಿತಿ ಆಗಬೇಕು ಅಂತ ಬಜೆಪಿ ಕಾರ್ಯಕಾರಣಿಯಲ್ಲಿ ಚರ್ಚೆ ಆಗಿದೆ. ಗೊಂದಲ ಸರಿಪಡಿಸಲು ಸಮಿತಿ ಅಗಬೇಕು ಅಂತ ನಾನು ಮೊದಲಿಂದ ಹೇಳಿದ್ದೇನೆ. ಅವರಲ್ಲಿ ಸಮಿತಿ ಮಾಡಬೇಕು ಅಂತ ಅವರ ಭಾವನೆ ಇದೆ. ನಮ್ಮ ಪಕ್ಷದಿಂದ ಮೈತ್ರಿಯ ಹೊಂದಾಣಿಕೆಗೆ ಚ್ಯುತಿ ಬಾರದಂತೆ ನಾವು ನಡೆದುಕೊಳ್ತೀವಿ. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಕುಮಾರಸ್ವಾಮಿ ಅವರು ಹೇಳಿದರು.








