ಬೆಂಗಳೂರು: ಒಳ ಮೀಸಲಾತಿ ಸಂಬಂಧಿತ ಕಾಯ್ದೆಗೆ ಕೋರ್ಟ್ ಒಪ್ಪಿಗೆ ಇಲ್ಲದ ಕಾರಣ ಮಾನ್ಯ ರಾಜ್ಯಪಾಲರಿಂದ ಅಂಕಿತ ಪಡೆಯಬಾರದಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಒಳ ಮೀಸಲಾತಿ ಶೇ 15ರಿಂದ 17ಕ್ಕೆ ಏರಿಸಲಾಗಿತ್ತು. ನ್ಯಾ.ನಾಗಮೋಹನ್ದಾಸ್ ಅವರ ವರದಿಯನ್ನೂ ಪಡೆದರು. ಅದರ ಪ್ರಕಾರವೇ 6, 6, 5 ಎಂದು ಹಂಚಿಕೆ ಮಾಡಿದ್ದರು. ಕಾಯ್ದೆ ಅನುಮೋದಿಸಿ ಮಾನ್ಯ ರಾಜ್ಯಪಾಲರಿಂದ ಅಂಕಿತವನ್ನೂ ಪಡೆದಿದ್ದರು ಎಂದು ಗಮನಕ್ಕೆ ತಂದರು.
ನೀವ್ಯಾಕೆ ಗೌರವಾನ್ವಿತ ರಾಜ್ಯಪಾಲರ ಅಂಕಿತ ತೆಗೆದುಕೊಂಡಿರಿ? ನಿಮಗೆ ಪ್ರಜ್ಞೆ, ಬುದ್ಧಿ ಇಲ್ಲವೇ ಎಂದು ಕೇಳಿದರು. ಅಂಕಿತ ಪಡೆದ ಮೇಲೆ ಅದನ್ನೇ ಜಾರಿಗೊಳಿಸಬೇಕಿತ್ತು ಎಂದು ಆಗ್ರಹಿಸಿದರು. ಶೇ 15 ರ ಮೇಲೆ ಹಂಚಿಕೆ ಮಾಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದೀರಿ. ಹಾಗಾಗಿ ಈ ಕಾಯ್ದೆ ಅನೂರ್ಜಿತ. ಅದು ತಿಪ್ಪೆಗುಂಡಿಗೆ ಹೋದಂತೆ ಎಂದು ನುಡಿದರು.
ನೀವು ಯಾವ ರೀತಿ 56 ಸಾವಿರ ಹುದ್ದೆಗಳನ್ನು ತುಂಬುತ್ತೀರಿ? ಎಸ್ಸಿ, ಎಸ್ಟಿಗಳ ಪಾಲು ಏನು? ಎಂದು ಕೇಳಿದರು. 24ರಂದು ಅಂಕಿತ ಹಾಕಿದ್ದಾರೆ. ಧಾರವಾಡ ವಿವಿ, ಬಿಡಿಎ, ಸಾರಿಗೆ ಇಲಾಖೆಯಲ್ಲಿ ಎ, ಬಿ, ಸಿ ಪ್ರವರ್ಗಗಳನ್ನು ಯಾಕೆ ಪ್ರಕಟಿಸಿದ್ದೀರಿ? ಎಂದು ಕೇಳಿದರು. ಗೊಂದಲ ಯಾಕೆ ಸೃಷ್ಟಿಸಿದ್ದೀರಿ. ಎಲ್ಲ ಹುದ್ದೆಗಳೂ ಪ್ರವರ್ಗ ಎ ಎಂದು ಬಂದಿವೆ ಎಂದರು.
ಈಗ ಜಾತಿ ಸಂಘರ್ಷಕ್ಕೆ ಸಿದ್ದರಾಮಯ್ಯನವರು ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನವರು ಒಂದು ಕಡೆ ಜಾತಿಗಳನ್ನು ಒಡೆದು ತಮ್ಮ ಮತದ ಬಲ ಹೆಚ್ಚಿಸಿಕೊಂಡಿದ್ದರು. ಇನ್ನೊಂದು ಕಡೆ ಜಾತಿಗಳ ಸಂಘರ್ಷಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಸರಕಾರ ಮಾಡಿದ ತಪ್ಪಿಗೆ ಜನಾಂಗಗಳು ಯಾಕೆ ತಮ್ಮ ತಮ್ಮಲ್ಲಿ ಹೋರಾಟ ಮಾಡಬೇಕು ಎಂದು ಕೇಳಿದರು. ಬಿಜೆಪಿ ಮುಖಂಡ ರುದ್ರಯ್ಯ ಅವರು ಭಾಗವಹಿಸಿದ್ದರು.








