ಶಿವಮೊಗ್ಗ: ಒಂದು ಮಗುವನ್ನು ದತ್ತು ತೆಗೆದುಕೊಂಡಲ್ಲಿ ಜಗತ್ತು ಬದಲಾಗುವುದಿಲ್ಲ. ಆದರೆ ಆ ಮಗುವಿನ ಜಗತ್ತು ಬದಲಾಗುತ್ತದೆ… ಪ್ರತಿಯೊಂದು ಮಗುವೂ ಕುಟುಂಬ ಹೊಂದಲು ಅರ್ಹ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕಾನೂನು ಬದ್ದ ದತ್ತು ಯೋಜನೆಯನ್ನು ರೂಪಿಸಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಈ ಯೋಜನೆಯನ್ನು ಜಾರಿಗೊಳಿಸುತ್ತಾ ಬಂದಿದೆ.
ಈ ಯೋಜನೆಯ ಭಾಗವಾಗಿ ನವೆಂಬರ್ ಮಾಸ ಪೂರ್ತಿ ದತ್ತು ಮಾಸಾಚರಣೆಯನ್ನು ಆಚರಿಸುವ ಮೂಲಕ ದತ್ತು ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ವಿಶೇಷ ಮಕ್ಕಳು ಸೇರಿದಂತೆ ಮಕ್ಕಳು ಹುಟ್ಟಿದಾಗ ಎಲ್ಲೆಂದರಲ್ಲಿ ಬಿಟ್ಟು ಹೋಗದೆ, ಬಿಸಾಡದೇ ಸರ್ಕಾರಿ ಆಸ್ಪತ್ರೆಗಳು, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ ಸಂಪರ್ಕಿಸಿ ಒಪ್ಪಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮಾಸಾಚರಣೆ ಮಾಡಲಾಗುತ್ತದೆ.
ಈ ವರ್ಷ ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ದತ್ತು ನೀಡುವ ಕುರಿತು ಅರಿವು ಮೂಡಿಸಲಾಗುತ್ತಿದೆ. ವಿಶೇಷ ಅಗತ್ಯವಿರುವ ಮಕ್ಕಳಿಗೆ ಕುಟುಂಬ ಆಧಾರಿತ ಆರೈಕೆ ನೀಡಿ, ಕಾಳಜಿಯಿಂದ ಭವಿಷ್ಯವನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
ಪ್ರತಿಯೊಂದು ಮಗುವೂ ಒಂದು ಕುಟುಂಬ ಅಥವಾ ಕುಟುಂಬದಂತಹ ವಾತಾವರಣಕ್ಕೆ ಅರ್ಹವಾಗಿದೆ ಎಂಬ ನಂಬಿಕೆಯಲ್ಲಿ ನೆಲೆಗೊಂಡಿರುವ ಈ ವರ್ಷದ ಅಭಿಯಾನವು, ವಿಶೇಷ ಅಗತ್ಯವಿರುವ ಮಕ್ಕಳ ಸಾಂಸ್ಥಿಕವಲ್ಲದ ಪುನರ್ವಸತಿಯನ್ನು ಉತ್ತೇಜಿಸುವಲ್ಲಿ ಎಲ್ಲರೂ ಸಹಯೋಗದಿಂದ ಕೆಲಸ ಮಾಡಲು ಕರೆ ನೀಡಿದೆ.
ಈ ಮಕ್ಕಳು ಪ್ರೀತಿ, ಆರೈಕೆ ಮತ್ತು ಬೆಳವಣಿಗೆಯ ಅವಕಾಶಗಳಿಗೆ ಎಲ್ಲರಂತೆ ಅರ್ಹರಾಗಿದ್ದು, ಒಂದು ಕುಟುಂಬವು ಮಗುವಿನ ಸಮಗ್ರ ಬೆಳವಣಿಗೆಗೆ ಅನುಕೂಲಕರವಾದ ಪೋಷಣೆಯ ವಾತಾವರಣವನ್ನು ಒದಗಿಸುತ್ತದೆ ಮತ್ತು ಇದು ವಿಶೇಷ ಅಗತ್ಯವಿರುವ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೆ ಅವಶ್ಯಕವಾಗಿದೆ.
ಹಾಗೂ ಕಾಳಜಿ, ಸಹಾನುಭೂತಿ ಮತ್ತು ಸ್ಪಂದಿಸುವ ಈ ದತ್ತು ಪರಿಸರ ವ್ಯವಸ್ಥೆಯನ್ನು ಕಾನೂನು ರೀತಿಯಲ್ಲಿ ಭದ್ರಪಡಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾದ್ಯಂತ ರಾಷ್ಟ್ರೀಯ ದತ್ತು ಮಾಚರಣೆಯ ಪ್ರಯುಕ್ತ ಸಂಕಲ್ಪ ಸಂದೇಶದ ಮೂಲಕ ಅರಿವು ಕಾರ್ಯಕ್ರಮವಗಳನ್ನು ಆಯೋಜಿಸಿದೆ.
2018-19 ರಿಂದೀಚೆಗೆ ದತ್ತು ಮಾಸಾಚರಣೆಗಳು, ಗ್ರಾ.ಪಂ ಆಶಾ, ಅಂಗನವಾಡಿ ಕಾರ್ಯಕರ್ತೆರಯರು ಮಕ್ಕಳ ರಕ್ಷಣಾ ಘಟಕ, ವಿವಿಧ ಇಲಾಖೆಗಳು, ದೃಶ್ಯ ಮತ್ತು ಸುದ್ದಿ ಮಾಧ್ಯಮಗಳ ಮೂಲಕ ಮೂಡಿಸಲಾದ ಜಾಗೃತಿಯಿಂದಾಗಿ ಮಕ್ಕಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಇಲಾಖೆಗೆ ಒಪ್ಪಿಸುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಜಾಗೃತಿಯ ಯಶಸ್ಸನ್ನು ಕಾಣಬಹುದಾಗಿದೆ.
ದತ್ತು ಪಡೆಯುವುದು ಹೇಗೆ :
ಅನಾಥ, ಪರಿತ್ಯಕ್ತ, ಸ್ವಇಚ್ಛೆಯಿಂದ ಒಪ್ಪಿಸಲ್ಪಟ್ಟ ಮಕ್ಕಳನ್ನು ದತ್ತು ಪಡೆಯಬಹುದಾಗಿದ್ದು ದತ್ತು ಪಡೆಯಲು www.cara.wcd.gov.in ನಲ್ಲಿ ನೋಂದಣಿಯಾಗುವುದು ಕಡ್ಡಾಯವಾಗಿದೆ. ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣಕ್ಕೆ ಪೂರಕವಾದ ದಾಖಲೆಗಳು, ವೈದ್ಯಕೀಯ ತಪಾಸಣಾ ದಾಖಲೆಗಳು, ವಿವಾಹ ದೃಢೀಕರಣ ಪತ್ರ, ಆದಾಯ ದೃಢೀಕರಣಕ್ಕೆ ಸಂಬಧಿಸಿದ ದಾಖಲೆಗಳು, ಏಕಪೋಷಕರಾಗಿದ್ದಲ್ಲಿ ಸಂಬಂಧಿಸಿದ ದಾಖಲೆಗಳು, ಪಾನ್ಕಾರ್ಡ್ ಪೋಸ್ಟ್ ಕಾರ್ಡ್ ಭಾವಚಿತ್ರ ನೀಡಬೇಕು. ಕೇರಿಂಗ್ಸ್ನಲ್ಲಿ ನೋಂದಣಿಯಾದ ನಂತರ ಗೃಹ ಅಧ್ಯಯನ ವರದಿ ತಯಾರಿಸುವ ಸಂದರ್ಭದಲ್ಲಿ ನಿಗದಿತ ಮೊತ್ತ ಪಾವತಿಸಬೇಕು.
ಉತ್ತಮ ಆರೋಗ್ಯ, ಆರ್ಥಿಕ ಹಿನ್ನೆಲೆ ಹೊಂದಿದ ದಂಪತಿಗಳ ಒಟ್ಟಾರೆ ಸರಾಸರಿ 110ಕ್ಕೆ ಮೀರದ ಅನ್ಯೋನ್ಯತೆಯ ಜೀವನ ನಡೆಸುತ್ತಿರುವ ಜೈವಿಕ ಮಕ್ಕಳನ್ನು ಹೊಂದಿರುವ/ಹೊಂದಿಲ್ಲದ ದಂಪತಿಗಳು ದತ್ತು ಪಡೆಯಬಹುದು. ಇದಕ್ಕೆ ಕುಟುಂಬದ ಇತರೆ ಸದಸ್ಯರ ಅನುಮತಿ ಇರಬೇಕು.
ದತ್ತು ಪಡೆಯುವ ಪೋಷಕರು ಹಾಗೂ ಮಗುವಿನ ನಡುವೆ 25 ವರ್ಷಗಳ ಅಂತರವಿರಬೇಕು. ಏಕಪೋಷಕ ಪುರುಷ/ಮಹಿಳೆ ಸಂದರ್ಭದಲ್ಲಿ ಕನಿಷ್ಠ 40 ಮತ್ತು ಗರಿಷ್ಠ 55 ವರ್ಷ ವಯೋಮಿತಿಯೊಳಗಿನ ವ್ಯಕ್ತಿಗಳು ದೈಹಿಕ, ಮಾನಸಿಕವಾಗಿ ಆರೋಗ್ಯವಂತರಾಗಿದ್ದು ಆರ್ಥಿಕ ಹಿನ್ನೆಲೆಯುಳ್ಳ ಬಂಧು ಬಾಂಧವರ ಉತ್ತಮ ಸಹಕಾರ ಇರುವವರು ಪಡೆಯಬಹುದು. ಆದರೆ ಅವಿವಾಹಿತ ಅಥವಾ ಏಕಪೋಷಕ ಪುರುಷರು ಹೆಣ್ಣು ಮಗುವನ್ನು ದತ್ತು ಪಡೆಯಲು ಅವಕಾಶವಿಲ್ಲ.
ಜೈವಿಕ ಮಕ್ಕಳನ್ನು ಹೊಂದಿರುವ ದಂಪತಿಗಳು ಮಕ್ಕಳನ್ನು ದತ್ತು ಪಡೆಯಬಹುದಾಗಿದ್ದು ಎರಡು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ದಂಪತಿಗಳು ದತ್ತು ಪಡೆಯುವ ಸಂದರ್ಭದಲ್ಲಿ ಅವರಿಗೆ ವಿಶೇಷ ಅಗತ್ಯವಿರುವ ಮಕ್ಕಳಿಗೆ ಮಾತ್ರ ಪರಿಗಣಿಸಲಾಗುತ್ತದೆ.
ದತ್ತು ಪಡೆಯಲು ನಿರೀಕ್ಷಿಸುವ ದಂಪತಿಗಳ ವರಮಾನವು ಮಗುವನ್ನು ಉತ್ತಮವಾಗಿ ಬೆಳೆಸಲು ಪೂರಕವಾದ ಉತ್ತಮವಾದ ಆದಾಯದ ಮೂಲಗಳನ್ನು ಹೊಂದಿರಬೇಕು.
ದತ್ತು ಪಡೆಯುವ ಸಂಭವನೀಯ ದತ್ತು ಪೋಷಕರು ದತ್ತು ಪಡೆಯಲು ನೋಂದಣಿಯಾಗುವ ಸಂದರ್ಭದಲ್ಲಿ ಮಗುವಿನ ಲಿಂಗ ಆಯ್ಕೆ ಮಾಡುವ ಅವಕಾಶವಿದ್ದು ಎರಡು ಅವಳಿ ಮಕ್ಕಳು, ಸೋದರಿ/ಸೋದರರಿದ್ದಾಗ ಮೂರು ಮಕ್ಕಳನ್ನು ದತ್ತು ಪಡೆಯಬಹುದು.
ಮೊದಲನೇ ಹಂತದ ಸಂಬಂಧಿಕರ ಮಕ್ಕಳನ್ನು ಸಹ ಪರಸ್ಪರ ಒಪ್ಪಿಗೆಯನುಸಾರ ದತ್ತು ಪಡೆಯಲು ಅವಕಾಶವಿದ್ದು, ಸದರಿ ಸಂಬಂಧಿತ ಪೋಷಕರು ಮಕ್ಕಳ ಕಲ್ಯಾಣ ಸಮಿತಿಯ ಅನುಮೋದನೆ ಪಡೆದು ಕೇರಿಂಗ್ಸ್ನಲ್ಲಿ ನೋಂದಣಿ ಮಾಡಿಕೊಂಡು ದತ್ತು ಪಡೆಯಬಹುದಾಗಿದೆ. ಹಾಗೂ ವಿಕಲಚೇತನ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪೋಷಕರು ಮುಂದೆ ಬಂದರೆ ಅಂತಹ ಮಕ್ಕಳನ್ನು ಸ್ವದೇಶಿ/ವಿದೇಶಿ ದತ್ತು ಸಂಸ್ಥೆಗಳ ಮೂಲಕ ದತ್ತು ನೀಡಲು ಅವಕಾಶವಿದೆ.
ಮಕ್ಕಳು ಬೇಡವಾದಲ್ಲಿ ತೊಟ್ಟಿಲಿಗೆ ಹಾಕಿ
ನವಜಾತ ಶಿಶುಗಳು ಬೇಡವಾದಲ್ಲಿ ನಿರ್ಜನ ಪ್ರದೇಶಗಳ ಪೊದೆಗಳು, ಚರಂಡಿ ಮತ್ತಿತರೆಡೆ ಎಸೆಯುವ ಬದಲು ಜಿಲ್ಲೆಯ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ಸರ್ಕಾರಿ ಬಾಲಕಿಯರ, ಬಾಲಕರ ಬಾಲಮಂದಿರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಆವರಣದಲ್ಲಿರುವ ವಿಶೇಷ ಸರ್ಕಾರಿ ದತ್ತು ಕೇಂದ್ರ ಇಲ್ಲಿ ಅಳವಡಿಸಲಾಗಿರುವ ಮಮತೆಯ ತೊಟ್ಟಿಲುಗಳಿಗೆ ಹಾಕಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನವಿ ಮಾಡಿದೆ.
151 ಮಕ್ಕಳ ಕಾನೂನುಬದ್ದ ದತ್ತು : 2015 ರಿಂದ 2025 ನೇ ಸಾಲಿನವರೆಗೆ ಇಲಾಖೆಗೆ 174 ಪರಿತ್ಯಕ್ತ, ಅನಾಥ, ಒಪ್ಪಿಸಲ್ಪಟ್ಟ ಮಕ್ಕಳು ದಾಖಲಾಗಿದ್ದು 151 ಮಕ್ಕಳನ್ನು ಕಾನೂನುಬದ್ದವಾಗಿ ದತ್ತು ನೀಡಲಾಗಿದೆ.
2015-16 ಸಾಲಿನಲ್ಲಿ 10 ಪರಿತ್ಯಕ್ತ(ಬೀದಿ ಬದಿ, ನಿರ್ಜನ ಪ್ರದೇಶ, ಬಸ್ಸ್ಟಾö್ಯಂಡ್, ಪೊದೆಗಳಲ್ಲಿ ಬಿಸಾಡಿದ ಮಕ್ಕಳು) ಮತ್ತು 5 ಮಕ್ಕಳನ್ನು ನೇರವಾಗಿ ಇಲಾಖೆಗೆ ಒಪ್ಪಿಸಲಾಗಿದೆ. 2016-17 ರಲ್ಲಿ 18 ಪರಿತ್ಯಕ್ತ, 5 ಇಲಾಖೆಗೆ ಒಪ್ಪಿಸಿರುವ ಮಕ್ಕಳು. 2017-18 ರಲ್ಲಿ 25 ಪರಿತ್ಯಕ್ತ, 10 ಇಲಾಖೆಗೆ ಒಪ್ಪಿಸಲ್ಪಟ್ಟ ಮಕ್ಕಳು. 2018-19 ರಲ್ಲಿ 03 ಪರಿತ್ಯಕ್ತ, 15 ಇಲಾಖೆಗೆ ಒಪ್ಪಿಸಲ್ಪಟ್ಟ ಮಕ್ಕಳು. 2019-20 ರಲ್ಲಿ 2 ಪರಿತ್ಯಕ್ತ, 12 ಇಲಾಖೆಗೆ ಒಪ್ಪಿಸಲ್ಪಟ್ಟ ಮಕ್ಕಳು. 2020-21 ರಲ್ಲಿ 12 ಇಲಾಖೆಗೆ ಒಪ್ಪಿಸಲ್ಪಟ್ಟ ಮಕ್ಕಳು. 2021-22 ರಲ್ಲಿ 17 ಮಕ್ಕಳನ್ನು ಇಲಾಖೆಗೆ ಒಪ್ಪಿಸಿದ್ದು, 2022-23 ರಲ್ಲಿ 01 ಪರಿತ್ಯಕ್ತ, 07 ಇಲಾಖೆಗೆ, 2023-24 ರಲ್ಲಿ 01 ಪರಿತ್ಯಕ್ತ, 9 ಮಕ್ಕಳು ಇಲಾಖೆಗೆ, 2024-25 ರಲ್ಲಿ 01 ಪರಿತ್ಯಕ್ತ ಮತ್ತು 11 ಇಲಾಖೆಗೆ ಒಪ್ಪಿಸಲಾಗಿದೆ. ಹಾಗೂ 2025-26 ರಲ್ಲಿ 15 ಮಕ್ಕಳನ್ನೂ ನೇರವಾಗಿ ಇಲಾಖೆಗೆ ಒಪ್ಪಿಸಲಾಗಿದೆ.
ಅಕ್ರಮವಾಗಿ ಮಕ್ಕಳನ್ನು ದತ್ತು ಪಡೆಯುವುದು ಶಕ್ಷಾರ್ಹ ಅಪರಾಧ
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಕಾನೂನು ಬದ್ದ ದತ್ತು ಪ್ರಕ್ರಿಯೆ ಬಗ್ಗೆ ಜಿಲ್ಲೆಯಾದ್ಯಂತ ಹೆಚ್ಚಿನ ಅರಿವನ್ನು ಮೂಡಿಸಲಾಗುತ್ತಿದ್ದು ಈ ವರ್ಷ ವಿಶೇಷ ಅಗತ್ಯವುಳ್ಳ ಮಕ್ಕಳ ದತ್ತು ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಮಕ್ಕಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಶಿಕ್ಷೆ ನೀಡಲಾಗುವುದು. ಬೇಡವಾದ ಮಕ್ಕಳ ಮಾರಾಟ ಅಪರಾಧವಾಗಿದ್ದು, ಮಕ್ಕಳನ್ನು ಮಾರುವವರು ಹಾಗೂ ಕೊಳ್ಳುವವರಿಬ್ಬರಿಗೂ ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 81 ರನ್ವಯ 5 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ಅವರು, ಜಿಲ್ಲೆಯಲ್ಲಿ ದತ್ತು ಪ್ರಕ್ರಿಯೆ ಕುರಿತು ಹಾಗೂ ಮಕ್ಕಳ ಕುರಿತಾದ ಜಾಗೃತಿ ಹೆಚ್ಚುತ್ತಿರುವ ಕಾರಣ ಮಕ್ಕಳನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಇಲಾಖೆಗೆ ಒಪ್ಪಿಸುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈವರೆಗೆ 151 ಮಕ್ಕಳನ್ನು ಕಾನೂನುಬದ್ದ ದತ್ತು ನೀಡಲಾಗಿದೆ. 2025 ರಲ್ಲಿ 01 ವಿಶೇಷಚೇತನ ಮಗುವನ್ನು ಅಮೇರಿಕಾ ಮೂಲದ ಪೋಷಕರಿಗೆ ದತ್ತು ನೀಡಲಾಗಿದೆ ಎಂದಿದ್ದಾರೆ.
ವಿಶೇಷ ಲೇಖನ: ಭಾಗ್ಯ ಎಂ ಟಿ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ, ಶಿವಮೊಗ್ಗ
VTU ವಿದ್ಯಾರ್ಥಿಗಳ ಗಮನಕ್ಕೆ: ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ಶುಲ್ಕ ಪಾವತಿಗೆ ಸೂಚನೆ
BIG NEWS : `ಜಾತಿ ಗಣತಿ’ ಸಮೀಕ್ಷೆದಾರರು, ಮೇಲ್ವಿಚಾರಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ `ಗೌರವಧನ’ ಬಿಡುಗಡೆ








