ಹಾವೇರಿ : ಹಾವೇರಿ ಜಿಲ್ಲೆಯ ಕುಸನೂರು ಗ್ರಾಮದಲ್ಲಿ ಕಾರ್ಮಿಕರಿಂದ ಶೌಚಾಲಯದ ಗುಂಡಿ ಸ್ವಚ್ಚ ಮಾಡಿಸುತ್ತಿದ್ದ ಘಟನೆ ನಡೆದಿದೆ.
ಕುಸನೂರು ಗ್ರಾಮದ ನಿವಾಸಿಗಳಾದ ಬಸವರಾಜ ಪೂಜಾರ ಮತ್ತು ಸುರೇಶ್ ಪೂಜಾರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಶೌಚ ಗೃಹದ ಗುಂಡಿ ತುಂಬಿದ್ದರಿಂದ ಮಾಲೀಕರು ಕಾರ್ಮಿಕರಿಂದ ಶೌಚಗುಂಡಿಯ ಮಲ ತೆರವು ಮಾಡಿಸಿರುವ ಆರೋಪ ಕೇಳಿಬಂದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಇಬ್ಬರು ಕಾರ್ಮಿರನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಮಾಲೀಕರ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸ್ಥಳಕ್ಕೆ ತಾಲೂಕು ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಮಲ ಹೊರುವ ಪದ್ದತಿ ಇನ್ನೂ ಜೀವಂತವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದ ಜನ ಆಕ್ರೋಶ ಹೊರ ಹಾಕಿದ್ದು, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಲ ಹೋರುವ ಪದ್ದತಿ’ಗೆ ಪ್ರೋತ್ಸಾಹ ನೀಡಿದ್ರೆ 1 ವರ್ಷ ಜೈಲು ಶಿಕ್ಷೆ, ದಂಡ ಫಿಕ್ಸ್
ತಲೆಮೇಲೆ ಮಲ ಹೊರುವುದು ಹಾಗೂ ತೆರೆದ ಚರಂಡಿಗೆ ಮಲ-ಮೂತ್ರ ವಿಸರ್ಜನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅದರಂತೆ ‘ದಿ ಎಂಪ್ಲಾಯ್ಮೆಂಟ್ ಆಫ್ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಆಂಡ್ ಡ್ರೈ ಲ್ಯಾಟ್ರಿನ್ ಆಕ್ಟ್ 2013 ರ ರೀತ್ಯಾ ಯಾವುದೇ ವ್ಯಕ್ತಿಯಿಂದ ಶೌಚಾಲಯದ ಪಿಟ್ನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ.
ಈ ಕಾಯ್ದೆಯನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿಯಿಂದ ಶೌಚಾಲಯದ ಪಿಟ್ನ್ನು ಸ್ವಚ್ಛಗೊಳಿಸಿದಲ್ಲಿ ಅಥವಾ ಮಲ ಹೊರುವ ಪದ್ಧತಿಗೆ ಪ್ರೋತ್ಸಾಹಿಸಿದಲ್ಲಿ ಕಾಯ್ದೆ ಅನುಸಾರ ಒಂದು ವರ್ಷದ ವರೆಗೂ ಜೈಲು ವಾಸ ಜೊತೆಗೆ ದಂಡ ಅಥವಾ ಎರಡು ರೀತಿಯಲ್ಲೂ ಕಾನೂನು ರೀತ್ಯಾ ಕ್ರಮಜರುಗಿಸಲಾಗುವುದು.








