ಚನ್ನಪಟ್ಟಣ: ಇತ್ತೀಚಿಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಡಿಜಿಟಲ್ ಅರೆಸ್ಟ್ ಗೆ ಬಲಿಯಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ಸೈಬರ್ ವಂಚನೆ ಜಾಲಕ್ಕೆ ಸಿಲುಕಿದ ವ್ಯಕ್ತಿಯೊಬ್ಬ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆ. ಕುಮಾರ್ (48) ಮೃತ. ವಂಚನೆಯ ಬಗ್ಗೆ ಡೆತ್ ನೋಟ್ ಬರೆದಿಟ್ಟು, ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಮಾರ್ ಬೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ಗಂಡುಮಗು ವಿನೊಂದಿಗೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದರು. ‘ವಿಕ್ರಮ್ ಗೋಸ್ವಾಮಿ ಹೆಸರಿನ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಕರೆಮಾಡಿ, ನಿನ್ನ ಮೇಲೆ ಅರೆಸ್ಟ್ ವಾರಂಟ್ ಬಂದಿದೆ ಎಂದು ಹೆದರಿಸಿದ್ದ. ನಿನ್ನನ್ನು ಪ್ರಕರಣವೊಂದರಲ್ಲಿ ಬಂಧಿಸುತ್ತೇನೆ ಎಂಬ ಬೆದರಿಕೆ ಹಾಕಿ ನಂತರ ಸಹಾಯದ ನೆಪದಲ್ಲಿ 1.95 ಲಕ್ಷ ರೂ. ಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ಬಳಿಕ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 11 ಲಕ್ಷ ರೂ.ವರೆಗೂ ಹಾಕಿಸಿಕೊಂಡಿದ್ದನು. ಇಷ್ಟಕ್ಕೆ ಸುಮ್ಮನಾಗದೆ ಮತ್ತೆ 2.75 ಲಕ್ಷ ರೂ. ಹಾಕುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ಇದರಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡಿಜಿಟಲ್ ಅರೆಸ್ಟ್ ಹೇಗೆ ಸಂಭವಿಸುತ್ತದೆ?
• ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್ನಲ್ಲಿ ಕಾನೂನು ಬಾಹಿರ ವಸ್ತುಗಳು ಕಂಡುಬಂದಿದೆ ಅಥವಾ ನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿ ಎಂದು ಆರೋಪಿಸಿ ವಂಚಕರು ನಿಮ್ಮನ್ನು ಮೋಸಗೊಳಿಸಲು ಫೋನ್ ಕರೆಗಳನ್ನು ಮಾಡುತ್ತಾರೆ.
• ಪೊಲೀಸ್ ಅಧಿಕಾರಿಗಳಂತೆ ವೇಷ ಧರಿಸಿ, ನಿಮ್ಮನ್ನು ವಿಡಿಯೋ ಕಾಲ್ನಲ್ಲಿಯೇ ಇರುವಂತೆ ಒತ್ತಾಯಿಸುತ್ತಾರೆ.
• ನಿಮ್ಮನ್ನು ಬೆದರಿಸಿ, ಹಣ ಸುಲಿಗೆ ಮಾಡುತ್ತಾರೆ.
• ವಂಚಕರು ಆಂಗ್ಲಭಾಷೆಯಲ್ಲಿ ಸಂವಹಿಸಿ ಅಧಿಕಾರಿಗಳಂತೆಯೇ ಸೌಜನ್ಯದಿಂದ ಮಾತನಾಡುತ್ತಾರೆ.
• ವಿಡಿಯೋ ಕರೆ ಮಾಡಿ ನಕಲಿ ಗುರುತಿನ ಚೀಟಿಗಳನ್ನು ತೋರಿಸಿ ಭಯಪಡಿಸುತ್ತಾರೆ.
• ಅಪರಿಚಿತ ಕರೆಗಳನ್ನು ಸ್ವೀಕರಿಸಬೇಡಿ. ಕರೆ ಬಂದ ನಂಬರ್ ಅನ್ನು ಬ್ಲಾಕ್ ಮತ್ತು ರಿಪೋರ್ಟ್ ಮಾಡಿ.
• ಹಣ ವರ್ಗಾವಣೆ ವೇಳೆ ಎಚ್ಚರದಿಂದಿರಿ, ಸೈಬರ್ ರಕ್ಷಣಾ ಕ್ರಮ ಅನುಸರಿಸಿ
• ನಿಮ್ಮ ವೈಯಕ್ತಿಕ ಬ್ಯಾಂಕ್ ಮಾಹಿತಿಯನ್ನು ನೀಡಬೇಡಿ.
• ನೈಜತೆ ಪರಿಶೀಲಿಸಲು ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ.
• ಹಿಂಭಾಗದಲ್ಲಿ ಸರ್ಕಾರಿ ತನಿಖಾ ಸಂಸ್ಥೆ, ಸೈಬರ್ ಕ್ರೈಂ, ಪೊಲೀಸ್ ಇಲಾಖೆಯ ಲೋಗೋ ಬಳಸುತ್ತಾರೆ.
• ನ್ಯಾಯಾಲಯ ಕೊಠಡಿ, ಪೊಲೀಸ್ ಠಾಣೆಯ ವಾತಾವರಣವನ್ನು ಸೃಷ್ಟಿಸುತ್ತಾರೆ.
• ಹಿರಿಯ ನಾಗರಿಕರು, ನಿವೃತ್ತರು, ಉನ್ನತ ಶಿಕ್ಷಣ ಪಡೆದವರನ್ನು ಗುರಿಯಾಗಿಸಲಾಗುತ್ತದೆ.
• ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅದಕ್ಕೆ ಪೂರಕ ದಾಖಲೆಗಳನ್ನು ತೋರಿಸುತ್ತಾರೆ. ನಂತರ ಹಣಕ್ಕಾಗಿ ಬೇಡಿಕೆ ಇಡುತ್ತಾರೆ.
• ಡಿಜಿಟಲ್ ಅರೆಸ್ಟ್ ಬಗ್ಗೆ ಜಾಗೃತರಾಗಿರಿ.
• ಯಾವುದೇ ಕಾರಣಕ್ಕೂ ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು ವಿಡಿಯೋ ಕರೆ ಮಾಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ.
• ಯಾರಾದರೂ ಪೊಲೀಸರ ಸೋಗಿನಲ್ಲಿ ವಿಡಿಯೋ ಕರೆ ಮಾಡಿದ್ದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.