ಬೆಳಗಾವಿ: ಪ್ರಿಯಕರನ ಜೊತೆ ಬಾಳಬೇಕೆಂಬ ಹಠಕ್ಕೆ ಬಿದ್ದ ಮಗಳನ್ನೇ ಹೆತ್ತವರು ಕ್ರೂರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿದೆ. ಕುಟುಂಬದ ಮರ್ಯಾದೆ ಉಳಿಸಿಕೊಳ್ಳಲು ಮಗಳಿಗೆ ವಿಷ ಕುಡಿಸಿ ಕೊಂದು, ಸಾಕ್ಷಿ ನಾಶಪಡಿಸಲು ಗಂಟೆಗಳಲ್ಲೇ ಮೃತದೇಹವನ್ನು ಸುಟ್ಟು ಹಾಕಿರುವ ಘೋರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ಮೃತ ಸತ್ಯವ್ವ ಹಾಗೂ ಹುಕ್ಕೇರಿ ತಾಲೂಕಿನ ನದಿಗುಡಿಕ್ಷೇತ್ರದ ಕೃಷ್ಣಾ ಪಾಟೀಲ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ನಾಲ್ಕು ವರ್ಷಗಳ ಹಿಂದೆ ಸತ್ಯವ್ವಳ ಇಚ್ಛೆಗೆ ವಿರುದ್ಧವಾಗಿ ಆಕೆಯ ಕುಟುಂಬಸ್ಥರು ಸಂತೋಷ್ ಹೆಳವಿ ಎಂಬುವವರ ಜೊತೆ ಬಲವಂತವಾಗಿ ಮದುವೆ ಮಾಡಿಸಿದ್ದರು. ಮದುವೆಯಾದರೂ ಪ್ರಿಯಕರನನ್ನು ಮರೆಯಲಾಗದ ಸತ್ಯವ್ವ, ಸಂಸಾರ ತೊರೆದು ಕೃಷ್ಣನ ಜೊತೆ ಹೋಗಲು ನಿರ್ಧರಿಸಿದ್ದಳು.
ಓಡಿ ಹೋದವಳ ಮೇಲೆ ಹಲ್ಲೆ:
ಕಳೆದ ಫೆಬ್ರವರಿ 17 ರಂದು ಪತಿಯ ಮನೆಯಿಂದ ಹೊರಬಂದ ಸತ್ಯವ್ವ, ಪ್ರಿಯಕರ ಕೃಷ್ಣನ ಜೊತೆ ಸೇರಿ ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಳು. ಈ ವಿಷಯ ತಿಳಿದ ಸತ್ಯವ್ವಳ ಪೋಷಕರು ಮತ್ತು ಸಂಬಂಧಿಕರು, ಆಕೆಯನ್ನು ಪತ್ತೆಹಚ್ಚಿ ಬಲವಂತವಾಗಿ ಮನೆಗೆ ಕರೆತಂದಿದ್ದರು. ಈ ವೇಳೆ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.
ವಿಷವಿಕ್ಕಿ ಕೊಲೆ
ಮನೆಗೆ ಕರೆತಂದ ಬಳಿಕ ಕುಟುಂಬಸ್ಥರು ಆಕೆಗೆ ಬುದ್ಧಿವಾದ ಹೇಳಲು ಪ್ರಯತ್ನಿಸಿದ್ದರು. ಆದರೆ, “ನನಗೆ ಕೃಷ್ಣನೇ ಬೇಕು, ಅವನ ಜೊತೆಯೇ ಇರುತ್ತೇನೆ” ಎಂದು ಸತ್ಯವ್ವ ಹಠ ಹಿಡಿದಿದ್ದಾಳೆ. ಇದರಿಂದ ಆಕ್ರೋಶಗೊಂಡ ಕುಟುಂಬ ಸದಸ್ಯರು, ಮರ್ಯಾದೆಗೆ ಅಂಜಿ ಮಾರ್ಚ್ 21 ರಂದು ಆಕೆಗೆ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆ. ಕೊಲೆಯಾದ ಕೆಲವೇ ಗಂಟೆಗಳಲ್ಲಿ ಯಾರಿಗೂ ಅನುಮಾನ ಬರದಂತೆ ಶವವನ್ನು ಸುಟ್ಟು ಹಾಕಿದ್ದಾರೆ.
ಮೂವರ ಬಂಧನ:
ಘಟನೆ ನಡೆದು ಸುಮಾರು ಒಂದು ತಿಂಗಳ ಬಳಿಕ ಈ ಹತ್ಯೆಯ ರಹಸ್ಯ ಬಯಲಾಗಿದ್ದು, ಯಮಕನಮರಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಲೆ ಆರೋಪದ ಮೇಲೆ ಕುಟುಂಬದ ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.






