ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನರ್ಸ್ನ ಬೇಜವಾಬ್ದಾರಿತನಕ್ಕೆ ಎಳೆಯ ಕಂದಮ್ಮನೊಬ್ಬನ ಬೆರಳು ತುಂಡಾಗಿರುವ ಘನಘೋರ ಘಟನೆ ಇಂದಿರಾನಗರದಲ್ಲಿ ನಡೆದಿದೆ.
ಘಟನೆಯ ವಿವರ:
ಜ್ವರ ಮತ್ತು ಕಫದ ಸಮಸ್ಯೆಯಿಂದ ಬಳಲುತ್ತಿದ್ದ 6 ತಿಂಗಳ ಗಂಡು ಮಗುವನ್ನು ಪೋಷಕರು ಕಳೆದ ಫೆಬ್ರವರಿ 19ರಂದು ಇಂದಿರಾನಗರದ ಚಿನ್ಮಯ್ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದರು. ಸತತ ಐದು ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ, ಮಗು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ಡಿಸ್ಚಾರ್ಜ್ ಮಾಡಲು ವೈದ್ಯರು ಸೂಚಿಸಿದ್ದರು.
ಮಗುವಿನ ತಂದೆ ವಿಜಯ್ ಕುಮಾರ್ ಅವರು ಬಿಲ್ಲಿಂಗ್ ಕೌಂಟರ್ನಲ್ಲಿ ಹಣ ಪಾವತಿಸಲು ಹೋಗಿದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ. ಮಗುವಿನ ಕೈಗೆ ಹಾಕಲಾಗಿದ್ದ ಡ್ರಿಪ್ಸ್ನ ಬ್ಯಾಂಡೇಜ್ (ಡ್ರೆಸ್ಸಿಂಗ್) ತೆಗೆಯುವಾಗ, ನರ್ಸ್ ಕತ್ತರಿಯನ್ನು ಅಜಾಗರೂಕತೆಯಿಂದ ಬಳಸಿದ್ದಾರೆ. ಈ ವೇಳೆ ಮಗುವಿನ ಎಡಗೈ ಕಿರುಬೆರಳಿನ ಅರ್ಧ ಭಾಗ ಕಟ್ ಆಗಿದೆ.
ದೂರಿನಲ್ಲಿ ಏನಿದೆ?
ಘಟನೆ ಸಂಬಂಧ ಮಗುವಿನ ತಂದೆ ವಿಜಯ್ ಕುಮಾರ್ ಪೊಲೀಸ್ ದೂರು ದಾಖಲಿಸಿದ್ದು, ಡ್ರೆಸ್ಸಿಂಗ್ ತೆಗೆಯುವಾಗ ನರ್ಸ್ ತೋರಿದ ಅತಿಯಾದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಬೆರಳು ಕಟ್ ಆದ ತಕ್ಷಣ ಮಗುವನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಡ್ರೆಸ್ಸಿಂಗ್ ಮಾಡಲಾಗಿದೆ. ಆದರೆ ಆಸ್ಪತ್ರೆ ಮಂಡಳಿಯು “ಇದೊಂದು ಸಣ್ಣ ಗಾಯ, ಮಗು ಬೆಳೆದಂತೆ ತಾನಾಗಿಯೇ ವಾಸಿಯಾಗುತ್ತದೆ” ಎಂದು ಹಾರಿಕೆ ಉತ್ತರ ನೀಡುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ
ಘಟನೆಗೆ ಕಾರಣರಾದ ನರ್ಸ್, ಸಂಬಂಧಪಟ್ಟ ವೈದ್ಯರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಸದ್ಯ ನೋವಿನಿಂದ ನರಳುತ್ತಿರುವ ಕಂದಮ್ಮನ ಸ್ಥಿತಿ ಕಂಡು ಪೋಷಕರು ಕಣ್ಣೀರು ಹಾಕುತ್ತಿದ್ದು, ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








