ಶಿವಮೊಗ್ಗ: ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ, ಸಮಯ ಪ್ರಜ್ಞೆ, ಆತ್ಮವಿಶ್ವಾಸ ಹಾಗೂ ನಿರ್ಭಯದಂತ ಪಂಚಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂಬುದಾಗಿ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಎಂ ಎಲ್ ಹಳ್ಳಿಯಲ್ಲಿ ಶ್ರೀ ರಾಮಕೃಷ್ಣ ವಿವೇಕಾನಂದ ವಸತಿ ವಿದ್ಯಾಲಯ, ಶ್ರೀ ರಾಮಕೃಷ್ಣ ಸಮೂಹ ಸಂಸ್ಥೆಗಳು ಹಾಗೂ ಚಿಕ್ಕಮಗಳೂರು ಯುವ ಸ್ಪೂರ್ತಿ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದಂತ ವ್ಯಕ್ತಿತ್ವ ವಿಕಸನ ಮತ್ತು ವಿದ್ಯಾರ್ಥಿ ಜಾಗೃತ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ವಿದ್ಯಾರ್ಥಗಳು ಇತಿಹಾಸ ಮತ್ತು ಸಂಸ್ಕೃತಿ ತಿಳಿದುಕೊಳ್ಳಬೇಕು. ರಾಮಕೃಷ್ಣ ಪರಮಹಂಸರ ಸಮನ್ವಯತೆಯನ್ನು ಅರಿಯಬೇಕು. ಮಹಾತ್ಮಾ ಗಾಂಧೀಜಿಯವರ ಕಲ್ಯಾಣ ರಾಜ್ಯ, ಸರ್ವೋದಯ ಉದಯದ ಬಗ್ಗೆ ಅರಿವಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವೆಂದರು.
ನನಗೆ ಕುವೆಂಪು ಅವರ ಸಮನ್ವಯತೆ, ಸರ್ವೋದಯ, ಪೂರ್ಣದೃಷ್ಠಿ ಪ್ರೇರಣೆ. ಆ ಮೂಲಕ ಮಾನವೀಯ ಗುಣಲಕ್ಷಣ ಬೆಳೆಸಿಕೊಳ್ಳುವಂತಾಗಬೇಕು. ಕಲಿಕೆಗೆ ವಿರಾಮವಿಲ್ಲ. ಅದೊಂದು ನಿರಂತರ ಪ್ರಕ್ರಿಯೆಯಾಗಿದೆ. ತಾಯಿಯ ಗರ್ಭಾಶಯದಿಂದ ಹೊರಬಂದಾಗಿನಿಂದ ಆರಂಭಗೊಂಡು, ಮಣ್ಣು ಸೇರುವವರೆಗೂ ಕಲಿಕೆ ಮುಂದುವರೆಯುತ್ತಲೇ ಇರುತ್ತದೆ ಎಂದರು.
ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ, ಸಮಯ ಪ್ರಜ್ಞೆ, ಆತ್ಮ ವಿಶ್ವಾಸ ಹಾಗೂ ನಿರ್ಭಯದಂತ ಪಂಚ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರೌಢ ಶಾಲಾ ಹಂತ, ಕಾಲೇಜು, ಪದವಿ ಹಂತಗಳು ಬದುಕಿಗೆ ಟರ್ನಿಂಗ್ ಪಾಯಿಂಟ್ಸ್. ಈಗ ನೀವು ಶಿಸ್ತಿನ್ನು ರೂಢಿಸಿಕೊಂಡು, ಪರಿಶ್ರಮದ ಮೂಲಕ, ಸಮಯ ಪ್ರಜ್ಞೆಯೊಂದಿಗೆ ಕಲಿತರೇ, ಆತ್ಮ ವಿಶ್ವಾಸ ಮೂಡಿ ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಗಳಿಸಲು ಸಾಧ್ಯವೆಂದರು.
ನಿರ್ಭಯ ಯಾವಾಗ ಇರುತ್ತದೆ ಎಂದರು ನೀವು ಪ್ರಾಮಾಣಿಕರಾಗಿದ್ದಾಗ ಮಾತ್ರ. ಇಂದಿನ ದಿನಗಳಲ್ಲಿ ಅದು ಕಡಿಮೆಯಾಗುತ್ತಿದೆ ಎಂಬ ಆತಂಕ ವ್ಯಕ್ತ ಪಡಿಸಿದಂತ ಅವರು, ಪ್ರಾಮಾಣಿಕರಾಗಿ, ಧೈರ್ಯ ತಾನಾಗಿಯೇ ಬರುತ್ತದೆ ಎಂದರು.
ನಾನು ಎಸ್ ಎಸ್ ಎಲ್ ಸಿ ಇಂಗ್ಲೀಷ್ ನಲ್ಲಿ ಫೇಲ್ ಆಗಿದ್ದಂತ ಕಾರಣವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, ಪಿಯುಸಿ ಕಲಿತು, ಐದು ವರ್ಷದ ಎಲ್ ಎಲ್ ಪಿ ವ್ಯಾಸಂಗ ಮಾಡಿದ್ದನ್ನು ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟರು. ಅಲ್ಲದೇ ಲಾ ಪ್ರಾಕ್ಟೀಸ್ ಮಾಡುವಾಗ ಮಸಾಲೆ ದೋಸೆ ಸವಿದ ವಿಚಾರ, ಬೆಂಗಳೂರಿಗೆ ಬಂದು ಲಾ ಪ್ರಾಕ್ಟೀಸ್ ಮುಂದುವರೆಸಿದಾಗ ಉಂಟಾದಂತ ಸಮಸ್ಯೆ, ಸವಾಲುಗಳನ್ನು ಮೆಟ್ಟಿನಿಂತ ಬಗೆಯನ್ನು ವಿವರಿಸಿದರು.
ನೀವು ಯಾವ ಶಾಲೆಯಲ್ಲಿ ಕಲಿತಿದ್ದೀರಿ ಎಂಬುದು ಮುಖ್ಯವಲ್ಲ. ಆ ಕಲಿತ ಶಿಕ್ಷಣದಿಂದ ಬದುಕನ್ನು ಸವಾಲುಗಳನ್ನು ಮೆಟ್ಟಿ ಜೀವನವನ್ನು ಅಚ್ಚುಕಟ್ಟಾಗಿ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕುವುದು ಮುಖ್ಯ. ಆ ಕೆಲಸ ನೀವು ಮಾಡಬೇಕು ಅಂದ್ರೇ ನಿಮ್ಮ ತಲೆಯಿಂದ ಆ ಶಾಲೆ, ಈ ಶಾಲೆ ಎಂಬ ಅಹಂ ಭಾವನೆಯನ್ನು ತೆಗೆದು, ಪಂಚಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗುವಂತೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗೆ 3Hs ಸೂತ್ರವನ್ನು ಬಿಚ್ಚಿಟ್ಟ ನ್ಯಾಯಮೂರ್ತಿಗಳು Head, Heart, Hand ಬಳಕೆಯ ಬಗ್ಗೆ ವಿವರಿಸಿ ಹೇಳಿದರು. ನಿಮ್ಮ ತಲೆಯಿಂದ ಅಹಂ ತೆಗೆದು ಹಾಕಿ, ಹೃದಯ ಶ್ರೀಮಂತಿಕೆಯನ್ನು ಬೆಳಸಿಕೊಳ್ಳಿ. ನೀವು ದುಡಿಯುವಂತ ಹತ್ತು ರೂಪಾಯಿಯಲ್ಲಿ 2-3 ರೂಗಳನ್ನು ಸಮಾಜಕ್ಕೆ ಸಹಾಯ ಮಾಡಿ. ಶಿಕ್ಷಣ ಅವಕಾಶ ವಂಚಿತರಿಗೆ ನೆರವು ನೀಡುವಂತೆ ಹುರುಪು ತುಂಬಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದಂತ ಶ್ರೀರಾಮಕೃಷ್ಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಿ.ಎಂ ದೇವರಾಜ್ ಅವರು ಈ ಶಾಲೆಯು 19 ವಿದ್ಯಾರ್ಥಿಗಳಿಂದ ಆರಂಭಗೊಂಡಿದ್ದು. ಇಲ್ಲಿಗೆ ದಾಖಲಾದಂತ ವಿದ್ಯಾರ್ಥಿಗಳಿಗೆ ಆರಂಭದಲ್ಲಿ ಎಬಿಸಿಡಿ ಕೂಡ ಗೊತ್ತಿರಲಿಲ್ಲ. ಅವರನ್ನು ತಿದ್ದಿ, ತೀಡಿ ಶೇ.100ರಷ್ಟು ಫಲಿತಾಂಶ ಶಾಲೆಗೆ ಬರುವಂತೆ ಮಾಡಿದ್ದರೊಂದಿಗೆ ಆರಂಭಗೊಂಡು ಇಂದು 1000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಓದಿದಂತ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿದ್ದಾರೆ. ಉತ್ತಮ ಕೆಲಸದಲ್ಲಿದ್ದಾರೆ. ಸ್ವಂತ ಕಂಪನಿ ನಿರ್ಮಿಸಿ ಹತ್ತಾರು, ನೂರಾರು ಜನರಿಗೆ ಕೆಲಸ ಕೊಟ್ಟಿದ್ದಾರೆ ಎಂದರು.
ಬೆಳಗ್ಗೆ ಯೋಗದಿಂದ ಇಲ್ಲಿನ ವಿದ್ಯಾರ್ಥಿಗಳ ವ್ಯಾಸಂಗ ಜೀವನ ಆರಂಭಗೊಳ್ಳುತ್ತೆ. ಆನಂತ್ರ ಜಪ, ಧ್ಯಾನ ಮುಂದುವರೆದು, ಮಾನಸಿಕ ಸದೃಢತೆಯೊಂದಿಗೆ ಕಲಿಕೆ ನಡೆಯುತ್ತದೆ. ಶೈಕ್ಷಣಿಕ ಕಲಿಕೆಯ ಜೊತೆಗೆ ಸಂಗೀತ, ಕರಾಟೆಯಂತ ಮೌಲ್ಯಯುತ ಶಿಕ್ಷಣವನ್ನು ನೀಡಲಾಗುವುದು ಎಂದು ತಿಳಿಸಿದರು.
ದಿವ್ಯ ಸಾನಿದ್ಯ ವಹಿಸಿದ್ದ ಶಿವಮೊಗ್ಗ ಶ್ರೀ ದೊಡ್ಡಮ್ಮ ದೇವಿ ಉಪಾಸಕರಾದ ಸಿದ್ದಪ್ಪಾಜಿ ಮಾತನಾಡಿ ಸಂಸ್ಕೃತಿ ಸಂಸ್ಕಾರ ಪ್ರತಿಯೊಬ್ಬ ಮನುಷ್ಯನಿಗೂ ಮುಕ್ತವಾದದ್ದು. ಅದನ್ನು ಶಿಕ್ಷಣ ಜೊತೆ ಜೊತೆಯಲ್ಲಿಯೇ ಮಕ್ಕಳಿಗೆ ಕಲಿಸಬೇಕು. ದೇವಿಯನ್ನು ನಂಬಿ ಪೂಜಿಸಿದರೇ ಯಾವುದೇ ಕಷ್ಟ ಕಾರ್ಪಣ್ಯಗಳು ನಿಮಗೆ ಎದುರಾಗುವುದಿಲ್ಲ. ಮಾಡುವ ಕೆಲಸದಲ್ಲಿ ನಂಬಿಕೆ ಇರಬೇಕು. ಬಹು ಹಿಂದಿನಿಂದಲೂ ಗುರುಕುಲ ಶಿಕ್ಷಣ ಮಕ್ಕಳ ಬದುಕನ್ನೇ ರೂಪಿಸಿದೆ. ಅಂತಹ ಯಶಸ್ವಿಯ ಪ್ರಯತ್ನ ಇಲ್ಲಿ ಯಶಸ್ವಿಯಾಗುತ್ತಿದೆ ಎಂದರು.
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಾಧಕನ್ನು ಸನ್ಮಾನಿಸಿ ಮಾತನಾಡಿ, ಚಿಕ್ಕಂದಿನಿಂದಲೇ ಮಕ್ಕಳಿಗೆ ಮೊಬೈಲ್ ಮತ್ತು ಟಿವಿಯಂತಹ ಮನೋರಂಜನೆಗಳಿಂದ ಹೊರತರಬೇಕು. ಅವರಿಗೆ ಸಂಗೀತ, ಸಾಹಿತ್ಯದಂತ ವಿಚಾರಗಳಲ್ಲಿ ಆಸಕ್ತಿ ಬೆಳಸಿ. ಮಕ್ಕಳ ಜೊತೆಯಲ್ಲೇ ಕುಳಿತು ತಂದೆ-ತಾಯಿಗಳು ಧಾರವಾಹಿ ನೋಡುವ ಪರಿಪಾಟವನ್ನು ಮೊದಲು ಕೈ ಬಿಡಬೇಕು. ತಂದೆ-ತಾಯಿಗಳ ಜೊತೆಯಲ್ಲಿ ಕುಳಿತು ಮಾತನಾಡುವ ಮನೋಪ್ರವೃತ್ತಿಯನ್ನು ಪಾಲಕರು ಬೆಳಸಿಕೊಂಡಲ್ಲಿ ಮಕ್ಕಳು ಅದನ್ನು ಮುಂದುವರೆಸುತ್ತಾರೆ. ನಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಮಕ್ಕಳು ಅನುಸಿರಸುವುದರಿಂದ ಜಾಗೃತವಾಗಿ ನಾವು ವರ್ತಿಸಬೇಕು. ಇಂತಹ ವಸತಿ ವಿದ್ಯಾಲಯಗಳು ಶಿಕ್ಷಣ ಜೊತೆಯಲ್ಲಿ ಬದುಕನ್ನು ರೂಪಿಸುತ್ತದೆ ಎಂದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಡಿ ಮೋಹನ್ ಕುಮಾರ್, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಚಿಕ್ಕಮಗಳೂರಿನ ಯುವ ಸ್ಪೂರ್ತಿ ಅಕಾಡೆಮಿಯ ಅಧ್ಯಕ್ಷ ಸಿ.ಬಿ ಸುಂದರೇಶ್, ಸಮನ್ವಯಾಧಿಕಾರಿ ಅನ್ನಪೂರ್ಣ, ಪ್ರಾಂಶುಪಾಲೆ ಸರೀತಾ ದೇವರಾಜ್, ಎಸಿಎಫ್ ರವಿ, ಟಿಪಿ ರಮೇಶ್, ವೃಶಾಂಕ್ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು