ಬೆಂಗಳೂರು ಗ್ರಾಮಾಂತರ: ವಿದ್ಯಾದೇಗುಲವಾದ ಶಾಲೆಯಲ್ಲಿಯೇ ರಕ್ಷಕನಾಗಬೇಕಿದ್ದವನು ಭಕ್ಷಕನಾದ ಬೆಚ್ಚಿಬೀಳಿಸುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಖಾಸಗಿ ವಸತಿ ಶಾಲೆಯೊಂದರ (Residential School) ಮಾಲೀಕನೇ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾಗಿದ್ದಾನೆ. ಗಂಡನ ಈ ಕೀಚಕ ಕೃತ್ಯಕ್ಕೆ ಸಾಥ್ ನೀಡಿ, ಅದನ್ನು ಮುಚ್ಚಿಹಾಕಲು ಯತ್ನಿಸಿದ ಆತನ ಪತ್ನಿಯನ್ನೂ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ವಸತಿ ಶಾಲೆಯ ಮಾಲೀಕ ಧನಂಜಯ್ ಹಾಗೂ ಆತನ ಪತ್ನಿ ಶೈಲಜಾ ಬಂಧಿತ ಆರೋಪಿಗಳು.
ಪರೀಕ್ಷೆ ನೆಪದಲ್ಲಿ ಕೂಡಿಹಾಕಿ ಕಿರುಕುಳ: ಆರೋಪಿ ಧನಂಜಯ್ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದನು. ಗಂಡನ ಈ ನೀಚ ಕೃತ್ಯವನ್ನು ಮುಚ್ಚಿಹಾಕಲು ಪತ್ನಿ ಶೈಲಜಾ ಕೂಡ ಸಾಥ್ ನೀಡಿದ್ದಳು. ಪರೀಕ್ಷೆಯ ನೆಪವೊಡ್ಡಿ ಸತತ 15 ದಿನಗಳ ಕಾಲ ಮಕ್ಕಳನ್ನು ಪೋಷಕರನ್ನು ಭೇಟಿಯಾಗಲು ಬಿಡದೆ, ಫೋನ್ನಲ್ಲಿ ಮಾತನಾಡಲೂ ಅವಕಾಶ ನೀಡದೆ ವಸತಿ ಶಾಲೆಯಲ್ಲೇ ಕೂಡಿಹಾಕಲಾಗಿತ್ತು. ಅಲ್ಲದೆ, ದೌರ್ಜನ್ಯಕ್ಕೊಳಗಾದ ಬಾಲಕಿಗೆ ನಿತ್ಯವೂ ಪರಂಗಿ ಹಣ್ಣನ್ನು (ಪಪ್ಪಾಯಿ) ಬಲವಂತವಾಗಿ ತಿನ್ನಿಸಿ ಶೈಲಜಾ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.
ಶಿಕ್ಷಕಿಯ ಫೋನ್ನಿಂದ ಬಯಲಾದ ಕರಾಳ ಸತ್ಯ: ಕಳೆದ 15 ದಿನಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಮಕ್ಕಳಿಗೆ ಫೆಬ್ರವರಿ 28ರಂದು ಶಾಲೆಯ ಶಿಕ್ಷಕಿಯೊಬ್ಬರ ಮೊಬೈಲ್ ಫೋನ್ ಸಿಕ್ಕಿದೆ. ತಕ್ಷಣವೇ ಪೋಷಕರಿಗೆ ಕರೆ ಮಾಡಿದ ಮಕ್ಕಳು, ಅಳುತ್ತಲೇ ತಮ್ಮ ಮೇಲಾದ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ. ಗಾಬರಿಗೊಂಡ ಪೋಷಕರು ಕೂಡಲೇ ಶಾಲೆಗೆ ದೌಡಾಯಿಸಿದ್ದಾರೆ. ಮಕ್ಕಳಿಂದ ಸಂಪೂರ್ಣ ವಿಚಾರ ತಿಳಿದ ಪೋಷಕರು ಆಘಾತಕ್ಕೊಳಗಾಗಿದ್ದಾರೆ.
ಪೋಕ್ಸೊ (POCSO) ಕಾಯ್ದೆಯಡಿ ಇಬ್ಬರು ಜೈಲಿಗೆ: ಘಟನೆಯ ಕುರಿತು ಪೋಷಕರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿ ಧನಂಜಯ್ ಮತ್ತು ಆತನ ಪತ್ನಿ ಶೈಲಜಾ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ.
ವಾರ್ಡನ್ ರೂಮಿನಲ್ಲೇ ಕಾಮುಕನ ಅಡ್ಡೆ – ಅಧಿಕಾರಿಗಳ ಭೇಟಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ವಿಚಾರ ತಿಳಿಯುತ್ತಿದ್ದಂತೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ವೇಳೆ, ಶಾಲೆಯ ಮಾಲೀಕ ಧನಂಜಯ್ ವಾರ್ಡನ್ ಕೊಠಡಿಯನ್ನೇ ತನ್ನ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ. ಆ ಕೊಠಡಿಯಲ್ಲಿ ಮಂಚ ಹಾಕಿ, ಐಷಾರಾಮಿ (ಹೈಫೈ) ವ್ಯವಸ್ಥೆ ಮಾಡಿಕೊಂಡಿದ್ದ ಕಾಮುಕ, ಅದೇ ಕೊಠಡಿಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಮಾಹಿತಿ ಅಧಿಕಾರಿಗಳ ಪರಿಶೀಲನೆ ವೇಳೆ ತಿಳಿದುಬಂದಿದೆ.
ಬಂಜೆತನಕ್ಕೆ ಆಧುನಿಕ ಚಿಕಿತ್ಸೆಗಳ ಸ್ಪರ್ಶ: ಮಕ್ಕಳಿಲ್ಲದ ದಂಪತಿಗೆ ಆಶಾಕಿರಣವಾದ IVF | Treatments for Infertility
ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್: 30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಶುರು








