ಬೆಂಗಳೂರು: ಕೇಂದ್ರ ಸರ್ಕಾರದ ‘ಜನಗಣತಿ-2027’ರ ಭಾಗವಾಗಿ ಕರ್ನಾಟಕದಲ್ಲಿ ಇಂದಿನಿಂದ (ಏಪ್ರಿಲ್ 16) ಅಧಿಕೃತವಾಗಿ ಮನೆಗಣತಿ ಹಾಗೂ ಮನೆಗಳ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 15ಕ್ಕೆ ಸ್ವಯಂ ಗಣತಿ ಅವಧಿ ಮುಕ್ತಾಯಗೊಂಡಿದ್ದು, ಈಗ ಗಣತಿದಾರರು ನೇರವಾಗಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ.
ಏಪ್ರಿಲ್ 16 ರಿಂದ ಮೇ 15 ರವರೆಗೆ (ಒಂದು ತಿಂಗಳು) ಈ ಪ್ರಕ್ರಿಯೆ ನಡೆಯಲಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಗಣತಿದಾರರನ್ನು ರಾಜ್ಯದ 31 ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.ಮನೆಯ ಸ್ಥಿತಿಗತಿ, ಲಭ್ಯವಿರುವ ಮೂಲಸೌಕರ್ಯಗಳು ಮತ್ತು ಆಸ್ತಿ ವಿವರಗಳ ಕುರಿತು ಗಣತಿದಾರರು ಮಾಹಿತಿ ಪಡೆಯಲಿದ್ದಾರೆ.
ಪ್ರಶ್ನೆಗಳು: ಮೊದಲ ಹಂತದ ಈ ಗಣತಿಗಾಗಿ ಒಟ್ಟು 33 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ.
ಗೌಪ್ಯತೆಗೆ ಆದ್ಯತೆ:
ಗಣತಿಯ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸುವ ವೈಯಕ್ತಿಕ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿ ಇಡಲಾಗುವುದು. ಈ ದತ್ತಾಂಶವನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಳಸಲಾಗುವುದಿಲ್ಲ ಅಥವಾ ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ನಿಖರ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಮುಂದಿನ ಹಂತ:
ಬರುವ ವರ್ಷ ಅಂದರೆ ಫೆಬ್ರವರಿಯಲ್ಲಿ ಎರಡನೇ ಹಂತದ ಗಣತಿ ನಡೆಯಲಿದ್ದು, ಆಗ ಜನಸಂಖ್ಯೆ ಎಣಿಕೆ ಕಾರ್ಯ ನಡೆಯಲಿದೆ. ಆ ಸಮಯದಲ್ಲಿ ಪ್ರತಿಯೊಬ್ಬರ ಜಾತಿ, ಸಾಮಾಜಿಕ-ಆರ್ಥಿಕ ಮತ್ತು ಇತರೆ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ.
ತರಬೇತಿ ವಿಚಾರದಲ್ಲಿ ಅಸಮಾಧಾನ:
ಮತ್ತೊಂದೆಡೆ, ಗಣತಿ ಕಾರ್ಯಕ್ಕಾಗಿ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ತರಬೇತಿ ಹಾಗೂ ಸ್ಥಳ ನಿಗದಿಯ ವಿಚಾರದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.ಅವೈಜ್ಞಾನಿಕವಾಗಿ ಸ್ಥಳ ನಿಗದಿ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.58 ವರ್ಷ ಮೇಲ್ಪಟ್ಟವರನ್ನೂ ಗಣತಿ ಕಾರ್ಯಕ್ಕೆ ನೇಮಿಸಿರುವುದು ಸಿಬ್ಬಂದಿಗಳ ಅಸಮಾಧಾನಕ್ಕೆ ಕಾರಣವಾಗಿದೆ.ಕೆಲವೆಡೆ ಗಣತಿ ತರಬೇತಿಗೆ ಹಾಜರಾಗದ ಶಿಕ್ಷಕರಿಗೆ ನೋಟಿಸ್ ನೀಡಲಾಗಿದ್ದು, ವೇತನ ಬಿಡುಗಡೆಯಲ್ಲೂ ವಿಳಂಬವಾಗುತ್ತಿದೆ ಎಂದು ಶಿಕ್ಷಕರು ದೂರಿದ್ದಾರೆ.








