ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಐತಿಹಾಸಿಕ ಆಯುರ್ವೇದ ವಿಶ್ವ ಸಮ್ಮೇಳನ ನಡೆಯಲಿದ್ದು, ರಾಜ್ಯ ರಾಜಧಾನಿಯಲ್ಲಿ ಪ್ರಾಚೀನ ಆಯುರ್ವೇದದ ಭವ್ಯಲೋಕ ಅನಾವರಣಗೊಳ್ಳಲಿದೆ.
ದಕ್ಷಿಣ ಭಾರತದ ಏಳು ರಾಜ್ಯಗಳನ್ನು ಸಂಚರಿಸಿ ಬಂದಿರುವ ಧನ್ವಂತರಿ ಜ್ಯೋತಿ ಯನ್ನು ಬೆಳಗುವುದರ ಮೂಲಕ ಐತಿಹಾಸಿಕ ವಿಶ್ವ ಸಮ್ಮೇಳನಕ್ಕೆ ಚಾಲನೆ ದೊರೆಯಲಿದ್ದು, ಉದ್ಘಾಟನಾ ಸಭೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಪೇಜಾವರ ಮಠದ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು, ಸಿರಿಗೆರೆಯ ಶ್ರೀಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ, ಶ್ವಾಸಗುರು ಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳು, ಬಿಹಾರದ ಶ್ರೀಶ್ರೀ ಸ್ವಾಮಿ ವೆಂಕಟೇಶ ಪ್ರಪನ್ನಾಚಾರ್ಯ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಲಿದ್ದು, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಶ್ರೀ ಶಿವರಾಜ್ ಪಾಟೀಲ್, ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸಿ.ಟಿ. ರವಿ, ಹಿರಿಯ ಪತ್ರಕರ್ತ ರವಿ ಹೆಗಡೆ, ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ, ಕೇಂದ್ರ ಆಯುಷ್ ಮಂತ್ರಾಲಯದ ಸಲಹೆಗಾರ ಡಾ. ಕೌಸ್ತುಭ ಉಪಾಧ್ಯಾಯ, ಹಿಮಾಲಯ ಕಂಪನಿಯ ಸಿ.ಎಫ್.ಓ ಜಯಶ್ರೀ ಉಳ್ಳಾಲ್ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಅಮೇರಿಕಾದ ಆಯುರ್ವೇದ ತಜ್ಞೆ ಡಾ. ಭಾಸ್ವತಿ ಭಟ್ಟಾಚಾರ್ಯ ದಿಕ್ಸೂಚಿ ಭಾಷಣ ಮಾಡಲಿದ್ದು, ಶತಾವದಾನಿ ಆರ್ ಗಣೇಶ್, ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಎಮ್ ಪ್ರಸಾದ್, ಲಂಡನ್’ನ ಆಯುರ್ವೇದ ತಜ್ಞ ಡಾ. ವಿಜಯ್ ಮೂರ್ತಿ ಸೂರ್ತಿಯ ನುಡಿಗಳನ್ನು ಆಡಲಿದ್ದಾರೆ. ನವದೆಹಲಿಯ AIIA ನಿರ್ದೇಶಕ ಪ್ರೊಫೆಸರ್ ಪ್ರದೀಪ್ ಕುಮಾರ್ ಪ್ರಜಾಪತಿ, WHO ನ ಡಾ. ಪವನ್ ಕುಮಾರ್ ಆಯುರ್ವೇದ ಜಾಗೃತಿಯ ಸಂದೇಶವನ್ನು ನೀಡಲಿದ್ದಾರೆ. 100 ಆಯುರ್ವೇದ ಸಾಧಕರಿಗೆ ‘ ಆಯುರ್ವೇದ ವಿಶ್ವ ರತ್ನ’ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಡಾ| ಗುರುರಾಜ ಕರ್ಜಗಿ ಸೇರಿದಂತೆ ಗಣ್ಯರು ಈ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಿದ್ದಾರೆ.

ಸಂಜೆ ಆಳ್ವಾಸ್ ಸಾಂಸ್ಕೃತಿಕ ಸಂಭ್ರಮದಲ್ಲಿ 350 ವಿದ್ಯಾರ್ಥಿಗಳು ವಿಶಿಷ್ಟ ರೂಪಕವನ್ನು ಪ್ರದರ್ಶಿಸಲಿದ್ದು, ಆಯುರ್ವೇದ ಲೇಸರ್ ಬೀಮ್ ಶೋ ನಡೆಯಲಿದೆ. ಚರಕ ಸಭಾದಲ್ಲಿ ದೇಶ ವಿದೇಶಗಳ ಹಲವಾರು ಆಯುರ್ವೇದ ತಜ್ಞರು ವೈಜ್ಞಾನಿಕ ಪ್ರಬಂಧ ಮಂಡನೆಯನ್ನು ಮಾಡಲಿದ್ದಾರೆ.
ವಿಶ್ವದ ನಾನಾ ಭಾಗಗಳ 6000+ ಪ್ರತಿನಿಧಿಗಳು ಈಗಾಗಲೇ ರಾಜಧಾನಿಗೆ ಆಗಮಿಸುತ್ತಿದ್ದು, ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ವಸ್ತು ಪ್ರದರ್ಶನ, ಧನ್ವಂತರಿ ರಥೋತ್ಸವ, ಆಯುರ್ವೇದ ಆಹಾರ ಪ್ರದರ್ಶನಿ, ಆಯುರ್ವೇದ ಪಾಕೋತ್ಸವ, ಮೆಗಾ ಆಯುರ್ವೇದ ಎಕ್ಸ್ಪೋ, ಔಷಧೀಯ ಸಸ್ಯಗಳ ಉಚಿತ ವಿತರಣೆ, ಸ್ವದೇಶಿ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ವಿಶಿಷ್ಟವಾದ ಆಯುರ್ವೇದ ಲೋಕವನ್ನು ನಾಡಿನ ಜನತೆಗೆ ತೆರೆದಿಡಲಿವೆ.








