ಶಿವಮೊಗ್ಗ: ಸಿನಿಮಾಗಳು ಕೇವಲ ದೃಶ್ಯ ಕಥಾನಕಗಳಲ್ಲ. ಅವು ಜೀವನದ ಸಣ್ಣ ತುಣುಕುಗಳು. ದೃಶ್ಯ, ಧ್ವನಿ, ಸಂಗೀತ, ಪಾತ್ರ ಮತ್ತು ದೃಶ್ಯ ಸಜ್ಜಿಕೆಯ ಮೂಲಕ ನಿರ್ದೇಶಕ ಕಟ್ಟಿಕೊಡುವ ವಾಸ್ತವಿಕ ಜಗತ್ತು. ಈ ನಿಟ್ಟಿನಲ್ಲಿ ಪ್ರೇಕ್ಷಕರ ಅಭಿರುಚಿ ಬೆಳೆಸುವ ಮತ್ತು ಕಲಾತ್ಮಕತೆಯನ್ನು ಅನಾವರಣಗೊಳಿಸುವ ಜಾಗತಿಕ ಗುಣಮಟ್ಟದ ಸಿನಿಮಾಗಳು ಇಂದಿನ ಅಗತ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿ ಆವರಣದಲ್ಲಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿರುವ 16ನೇ ವರ್ಷದ “ಸಹ್ಯಾದ್ರಿ ಸಿನಿಮೋತ್ಸವ”ವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಜಗತ್ತಿನ ಅತ್ಯುತ್ತಮ ಚಲನಚಿತ್ರಗಳು ಪೂರ್ವ ಏಷ್ಯಾದ ಜಪಾನ್, ಹಾಂಕಾಂಗ್, ಕೊರಿಯಾ ದೇಶಗಳಲ್ಲಿ ನಿರ್ಮಾಣವಾಗುತ್ತಿವೆ. ಇನ್ನು ಭಾರತೀಯ ಸಿನಿಮಾರಂಗದಲ್ಲಿ ಮಲಯಾಳಂ, ಬೆಂಗಾಲಿ ಮತ್ತು ಸ್ವಲ್ಪಮಟ್ಟಿಗೆ ತಮಿಳು ಚಿತ್ರರಂಗ ಎಲ್ಲಾ ಆಯಾಮಗಳಲ್ಲಿಯೂ ಉತ್ತಮ ಎಂದು ಪರಿಗಣಿಸಬಹುದಾದ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸುತ್ತಿವೆ. ಆದರೆ ಕನ್ನಡ ಚಿತ್ರರಂಗ ದಿನೇ ದಿನೇ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಡಿ.ಎಸ್ ಪೂರ್ಣಾನಂದ ಮಾತನಾಡಿ, ಪೂರ್ವ ಏಷಿಯಾ ಸಿನಿಮಾದ ಮಹತ್ವ, ಪ್ರಸ್ತುತ ದಿನಗಳಲ್ಲಿ ಜಪಾನ್, ಕೊರಿಯಾ, ಚೀನಾ, ಹಾಂಕಾಂಗ್ ಸಿನಿಮಾಗಳ ಪ್ರಾಮುಖ್ಯತೆ ಹಾಗೂ ಈ ಪ್ರದೇಶಗಳ ಸಾಂಸ್ಕೃತಿಕ ಮತ್ತು ಭೌಗೋಳಿಕತೆಯ ವಿಶಿಷ್ಠತೆಯ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ವರ್ಗೀಸ್ ಪಿ.ಎ , ಪ್ರೊ.ಸತೀಶ್ ಕುಮಾರ್, ಪ್ರೊ. ಸತ್ಯಪ್ರಕಾಶ್. ಎಂ. ಆರ್, ಡಾ. ರುಮಾನ ತನ್ವೀರ್, ವರ್ಣಶ್ರೀ, ರಾಸುಮ, ದೊರೆಸ್ವಾಮಿ, ಸುನಿಲ್ ಮತ್ತು ವಿವಿಧ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಈ ಸಲದ ವಿಶೇಷ: ಪ್ರತಿ ವರ್ಷ ಪ್ರೇಕ್ಷಕರ ಸಿನಿಜ್ಞಾನವನ್ನು ವಿಸ್ತರಿಸುವ ಜೊತೆಗೆ ಮನರಂಜನೆ ಮತ್ತು ಮಾಹಿತಿ ನೀಡುವ ಉದ್ದೇಶದಿಂದ ವಿವಿಧ ವಿಚಾರಗಳನ್ನು ಒಳಗೊಂಡ ಸಿನಿಮಾಗಳನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ಪತ್ರಿಕೋದ್ಯಮ ವಿಭಾಗವು ಮಾಡುತ್ತಿದ್ದು, ಈ ಬಾರಿ ಪೂರ್ವ ಏಷಿಯಾ ಭೂ ಭಾಗದ ಚಿತ್ರಗಳನ್ನು ಸಿನಿ ಹಬ್ಬದ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಅವುಗಳಲ್ಲಿ ಹಾಂಗ್- ಕಾಂಗ್ನ ‘ಇನ್ ದಿ ಮೂಡ್ ಫಾರ್ ಲವ್’, ದಕ್ಷಿಣ ಕೋರಿಯಾದ ‘ಮೆಮೊರೀಸ್ ಆಫ್ ಮರ್ಡರ್’, ‘ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್ ಆಂಡ್ ಸ್ಪ್ರಿಂಗ್,” ಜಪಾನಿನ “ಥ್ರೋನ್ ಆಫ್ ಬ್ಲಡ್,” ಮತ್ತು ‘ಪರ್ಫೆಕ್ಟ್ ಡೇಸ್,’ ಸಿನಿಮಾಗಳು ಜೂನ್ 30ರಿಂದ ಜುಲೈ 05ರವರೆಗೆ ಪ್ರದರ್ಶನಗೊಳ್ಳಲಿವೆ.
BREAKING: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವು ಪ್ರಕರಣ: 10 ದಿನಗಳಲ್ಲಿ ವರದಿ ನೀಡಲು ರಾಜ್ಯ ಸರ್ಕಾರ ಆದೇಶ