ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿಂದು ಪ್ರಾಂತ ಅಡಿಕೆ ಬೆಳೆಗಾರರ ಸಂಘದಿಂದ ನಡೆಸಲಾಗಿದ್ದಂತ ಅಡಿಕೆ ಬೆಳೆಗಾರರ ಸಮಾವೇಶದ ಹಾಗೂ ಅಡಿಕೆ ಬೆಳೆಗಾರರಿಗೆ ಮಾಹಿತಿ ನೀಡುವಂತ ಐವತ್ತರ ಈ ಹೊತ್ತು ಸ್ಮರಣ ಸಂಚಿಕೆಯನ್ನು ಮಾಜಿ ಗೃಹ ಸಚಿವ, ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಬಿಡುಗಡೆ ಮಾಡಿದರು.
ಈ ಬಳಿಕ ಮಾತನಾಡಿದಂತ ಅವರು, ಮಲೆನಾಡಿನ ಜೀವನಾಡಿ ಅಡಿಕೆಯಾಗಿರುವಂತ ಪಾರಂಪರಿಕ ಅಡಿಕೆ ಬೆಳೆಗಾರರು ನಿರಂತರವಾಗಿ ಸಂಕಷ್ಟ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೇ ಸಂಘಟಿತರಾಗಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ. ಇಲ್ಲವಾದರೇ ಇಲ್ಲ ಎಂಬುದಾಗಿ ಹೇಳಿದರು.
ನಮ್ಮ ಮುಂದೆ ಅಡಿಕೆ ಹಾನಿಕಾರವಲ್ಲ ಎಂಬುದನ್ನು ಸಾಭೀತು ಪಡಿಸಬೇಕಾದಂತ ಸವಾಲುಗಳಿವೆ. ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ತೂಗುಗತ್ತಿ ಇದೆ. ನಿರಂತರವಾಗಿ ಸಮಸ್ಯೆಗಳ ವಿರುದ್ಧ ಅಡಿಕೆ ಬೆಳೆಗಾರರು ಹೋರಾಟ ಮಾಡಲು ಮಹಾ ಮಂಡಲವನ್ನು ರಚಿಸಲಾಗಿದೆ. ಎಲ್ಲಾ ಸಂಘಟನೆಗಳು ಇದಕ್ಕೆ ಸದಸ್ಯರಾಗಬೇಕು. ನಾವು ಈಗಾಗಲೇ ಈ ಮಹಾ ಮಂಡಲಕ್ಕೆ 1 ಕೋಟಿ ನಿಧಿ ಸಂಗ್ರಹಿಸಿದ್ದೇವೆ ಎಂದರು.
ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ, ಕೊಳೆ ರೋಗ ಸೇರಿದಂತೆ ಹಲವು ರೋಗಗಳು ತಗಲುತ್ತಿವೆ. ಈ ರೋಗಗಳ ಬಗ್ಗೆ ಇಂದಿಗೂ ವ್ಯವಸ್ಥಿತ ಸಂಶೋಧನೆಗಳು ನಡೆದಿಲ್ಲ. ಇದು ಮುಂದಿನ ದಿನಗಳಲ್ಲಿ ಆಗಬೇಕಿದೆ. ಅದಕ್ಕಾಗಿ ಸರ್ಕಾರದ ಗಮನಕ್ಕೂ ತರುವಂತ ಕೆಲಸವನ್ನು ನಾವು ನೀವೆಲ್ಲರೂ ಮಾಡಬೇಕು ಎಂದು ಹೇಳಿದರು.
ಮಾಜಿ ತಾಲ್ಲೂಕು ಪಂತಾಯ್ತಿ ಅಧ್ಯಕ್ಷ, ಸಾಗರ ಪ್ರಾಂತ ಅಡಿಕೆ ಬೆಳೆಗಾರರ ಸಮಾವೇಶದ ಸಹ ಸಂಚಾಲಕರಾಗಿದ್ದಂತ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ನಮಗೆ ಹೆಚ್.ಎಸ್ ಮಂಜಪ್ಪ ಅವರ ಶಕ್ತಿ, ಸಾಮರ್ಥ್ಯ ನೋಡಿದರೋ ಎಂದೋ ಕೇಂದ್ರದ ಮಂತ್ರಿಯಾಗಬೇಕಿತ್ತು. ಅದು ಆಗಲಿಲ್ಲ. ಅವರು ಅಡಿಕೆ ಬೆಳಗಾರರು ಸಂಕಷ್ಟ ಎದುರಿಸಿದಾಗಲೆಲ್ಲ ನೆರವಿಗೆ ಧಾವಿಸಿ ನಿಂತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸೋ ಕೆಲಸ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ ಎಂದರು.
ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎನ್ನುವುದನ್ನು ಸಾಭೀತುಪಡಿಸುವಂತ ಸವಾಲು ನಮ್ಮ ಮುಂದಿದೆ. ಈ ಕುರಿತಂತೆ 16 ಸಂಸ್ಥೆಗಳಿಂದ ಸಂಶೋಧನೆ ನಡೆಯುತ್ತಿದೆ. ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎನ್ನುವ ಬಗ್ಗೆ ಶೀಘ್ರವೇ ಉತ್ತರ ಸಿಗಲಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಭೂಮಿಯಲ್ಲಿ ಗುತ್ತಿಗೆ ಆಧಾರದಲ್ಲಿ ಪ್ಲಾಂಟೇಶನ್ ಬೆಳೆ ಬೆಳೆಯಲು ನೀಡಲಾಗುತ್ತಿದೆ. ಈ ಕೆಲಸ ಶಿವಮೊಗ್ಗ ಜಿಲ್ಲೆಯಲ್ಲೂ ಆಗಬೇಕು. ಅಡಿಕೆ ಬೆಳಎಗಾರರಿಗೆ ಗುತ್ತಿಗೆ ಆಧಾರದ ಮೇಲೆ ಕಾಳು ಮೆಣಸು ಬೆಳೆಯೋದಕ್ಕೆ ಅವಕಾಶ ಸಿಗಬೇಕು. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವಂತೆ ಶಾಸಕ ಅರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿದರು.
ಇನ್ನೂ ಸಾಗರ ಪ್ರಾಂತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವಾಶಂ ರಾಮಚಂದ್ರ ಭಟ್ ಮಾತನಾಡಿ, ಸಾಗರದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ ಯಶಸ್ಸಿಗೆ ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ವಿವಿಧ ಅಡಿಕೆ ಬೆಳೆಗಾರರ ಸಂಘಟನೆಗಳು ಕಾರಣ. ಇವುಗಳು ಸಮ್ಮೇಳನಕ್ಕೆ ಬೆನ್ನೆಲುಬಾಗಿ ನಿಂತಿದ್ದರಿಂದಲೇ ಸಮಾವೇಶ ಯಶಸ್ಸಿಗೆ ಕಾರಣವಾಯಿತು ಎಂದರು.
50 ವರ್ಷದ ಈ ಸಂದರ್ಭದಲ್ಲಿ ಸಮಾವೇಶದ ಮೂಲಕ 50 ಲಕ್ಷ ಹಣ ಸಂಗ್ರಹವಾಗಿತ್ತು. ಇದರಲ್ಲಿ ಎಲ್ಲಾ ಖರ್ಚು ಕಳೆದು 12 ಲಕ್ಷ ಹಣವನ್ನು ಸಂಸ್ಥೆ ಉಳಿಸಿದೆ. ನಮ್ಮ ಈ ಸಮಾವೇಶ ಆರಂಭ ಮಾಡುವ ಸಂದರ್ಭದಲ್ಲಿ ನಮ್ಮ ಖಾತೆಯಲ್ಲಿ ಕೇವಲ ರೂ.2,600 ಇತ್ತು. ನಮ್ಮ ಸಂಕಲ್ಪ ಸ್ಪಷ್ಟವಾಗಿದ್ದರೇ ಕೆಲಸಗಳು ಸಿದ್ಧಿಸುತ್ತವೆ ಎನ್ನುವುದಕ್ಕೆ ಸಮಾವೇಶವೇ ಒಂದು ಉದಾಹರಣೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತೋಟಗಾರ್ ಸೊಸೈಟಿಯ ಅಧ್ಯಕ್ಷ ಕೆ ಸಿ ದೇವಪ್ಪ, ಹಿರಿಯ ಸಹಕಾರಿ ಧುರೀಣ ಯು ಹೆಚ್ ರಾಮಪ್ಪ, ಅನಿಲ್ ಒಡೆಯರ್, ಕೆ.ಎಂ ಸೂರ್ಯನಾರಾಯಣ ಖಂಡಿಕಾ, ಆರ್ ಎಸ್ ಗಿರಿ, ಮಾವೆಂ ಸಾ ಪ್ರಸಾದ್, ರಾಜೇಂದ್ರ ಖಂಡಿಕಾ ಇತರರು ಹಾಜರಿದ್ದರು.