ಬೆಂಗಳೂರು: ದೇಶಾದ್ಯಂತ ಅನುಷ್ಠಾನಗೊಳ್ಳುತ್ತಿರುವ ‘ಮಿಷನ್ ಏಡ್ಸ್ ಸುರಕ್ಷಾ’ ಯೋಜನೆಯ ಭಾಗವಾಗಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು (NACO) ಬೆಂಗಳೂರಿನಲ್ಲಿ ನಾಳೆ ‘ಸುರಕ್ಷಾ ಸಂಕಲ್ಪ ಕಾರ್ಯಗಾರ’ವನ್ನು ಆಯೋಜಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ NACO ಮಹಾನಿರ್ದೇಶಕರಾದ ಡಾ.ರಾಕೇಶ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಗಾರ ಆಯೋಜಿಸಲಾಗಿದೆ.
ಪ್ರಮುಖ ಉದ್ದೇಶಗಳು: 1ನೇ ಡಿಸೆಂಬರ್ 2027 ರ ವೇಳೆಗೆ ಎಚ್ಐವಿ ಸಾಂಕ್ರಾಮಿಕದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಮತ್ತು 2030ರ ವೇಳೆಗೆ ಏಡ್ಸ್ ಅನ್ನು ಸಾರ್ವಜನಿಕ ಆರೋಗ್ಯದ ಭೀತಿಯಿಂದ ಮುಕ್ತಗೊಳಿಸುವ ವಿಶ್ವಸಂಸ್ಥೆಯ ಗುರಿಯನ್ನು ತಲುಪಲು ಭಾರತವು ಹೊಂದಿರುವ ಅಂತಾರಾಷ್ಟ್ರೀಯ ಬದ್ಧತೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಕಾರ್ಯಗಾರವು ಅತ್ಯಂತ ನಿರ್ಣಾಯಕವಾಗಿದೆ.
ದೇಶಾದ್ಯಂತ ಆಯೋಜಿಸಲಾಗುತ್ತಿರುವ 12 ಪ್ರಾದೇಶಿಕ ಕಾರ್ಯಾಗಾರಗಳ ಪೈಕಿ ಬೆಂಗಳೂರಿನ ಆಯೋಜಿಸುತ್ತಿರುವ ಈ ಕಾರ್ಯಕ್ರಮವು ಸರಣಿಯ ಭಾಗವಾಗಿದೆ. ಜಿಲ್ಲಾ ಮಟ್ಟದಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುವುದು ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯನ್ನು ಬಲಪಡಿಸುವುದು ಇದರ ಕಾರ್ಯಗಾರದ ಉದ್ದೇಶವಾಗಿದೆ. ಈ ಯೋಜನೆಯಡಿ ದೇಶದ 18 ರಾಜ್ಯಗಳ 219 ಜಿಲ್ಲೆಗಳನ್ನು ಆದ್ಯತೆಯ ಜಿಲ್ಲೆಗಳನ್ನಾಗಿ ಗುರುತಿಸಲಾಗಿದ್ದು, ಕ್ಷಿಪ್ರ ಕ್ರಮಕ್ಕಾಗಿ ಗುರುತಿಸಲಾಗಿದೆ.
ಕರ್ನಾಟಕದ ಹಿನ್ನಲೆ: ಕರ್ನಾಟಕದಲ್ಲಿ ಪ್ರಸ್ತುತ ವಯಸ್ಕರಲ್ಲಿ ಎಚ್ಐವಿ ಹರಡುವಿಕೆಯ ಪ್ರಮಾಣ ಶೇಕಡ 0.44 ರಷ್ಟಿದ್ದು, ಅಂದಾಜು 2,91,348 ಜನರು ಎಚ್ಐವಿಯೊಂದಿಗೆ ಜೀವಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಸೋಂಕಿನ ಹರಡುವಿಕೆ ಮತ್ತು ಸಾಂದ್ರತೆಯ ಆಧಾರದ ಮೇಲೆ ರಾಜ್ಯದ 27 ಜಿಲ್ಲೆಗಳನ್ನು ಆದ್ಯತೆಯ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಮೈಸೂರು, ರಾಯಚೂರು, ತುಮಕೂರು, ಚಾಮರಾಜನಗರ, ಕೋಲಾರ, ಮಂಡ್ಯ, ಗದಗ, ಕೊಪ್ಪಳ, ಚಿತ್ರದುರ್ಗ, ಕಲಬುರಗಿ, ಧಾರವಾಡ, ಹಾವೇರಿ, ವಿಜಯನಗರ, ಚಿಕ್ಕಬಳ್ಳಾಪುರ, ಹಾಸನ, ಯಾದಗಿರಿ, ಉಡುಪಿ, ಬೀದರ್, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿವೆ.
ಈ ಕಾರ್ಯಾಗಾರದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರದಾನ ಕಾರ್ಯದರ್ಶಿಗಳಾದ ಹರ್ಷ್ ಗುಪ್ತಾ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಕರ್ನಾಟಕ ವಿಭಾಗದ ಮಿಷನ್ ನಿರ್ದೇಶಕರು ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧಕ ಸೊಸೈಟಿಯ (KSAPS) ಯೋಜನಾ ನಿರ್ದೇಶಕರು ಭಾಗವಹಿಸಲಿದ್ದಾರೆ. ಜೊತೆಗೆ, ಈ 27 ಆದ್ಯತೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳು ಮತ್ತು NGO ಪಾಲುದಾರರು ಭಾಗವಹಿಸಿ, ಕಾರ್ಯಕ್ರಮದ ಪ್ರಗತಿ ಹಾಗೂ ಅನುಷ್ಠಾನದಲ್ಲಿರುವ ಸವಾಲುಗಳ ಬಗ್ಗೆ ಚರ್ಚಿಸಲಿದ್ದಾರೆ.
ಪ್ರತಿಯೊಂದು ಜಿಲ್ಲೆಗೆ ಪೂರಕವಾದ ನಿರ್ದಿಷ್ಟ ಕಾರ್ಯಯೋಜನೆಗಳನ್ನು ರೂಪಿಸುವ ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದ್ದು, ಎಲ್ಲಾ ಜಿಲ್ಲೆಗಳನ್ನು “ಸುರಕ್ಷಿತ್+” ಮಾಡುವ ಮೂಲಕ ಭಾರತವನ್ನು ಏಡ್ಸ್ ಮುಕ್ತವಾಗಿಸುವ ಸಂಕಲ್ಪವನ್ನು ಹೊಂದಲಾಗಿದೆ.
13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ: ಆಂಧ್ರ ಸರ್ಕಾರದಿಂದ ಮಹತ್ವದ ಘೋಷಣೆ







