ಬೆಂಗಳೂರು: ಸಾರ್ವಜನಿಕ ಮಹತ್ತ್ವದ ಯೋಜನೆಗಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗಳು ಪೂರ್ವಾನ್ವಯವಾಗುವಂತೆ ಅನುಮೋದನೆಗಳನ್ನು ನೀಡಬಾರದೆಂದು ಈ ವರ್ಷದ ಮೇ ತಿಂಗಳಲ್ಲಿ ತಾನು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಹಿಂಪಡೆದುಕೊಂಡಿರುವುದು ಸ್ವಾಗತಾರ್ಹವಾಗಿದೆ. ಇದರಿಂದಾಗಿ, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಇದ್ದ ಅಡೆತಡೆ ಬಹುಮಟ್ಟಿಗೆ ನಿವಾರಣೆಯಾಗಿದ್ದು, ನಿರೀಕ್ಷೆಯಂತೆ ಎಲ್ಲವೂ ಸುಗಮವಾಗಿ ನಡೆದರೆ ಯುಗಾದಿ ವೇಳೆಗೆ ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ವಿಶ್ವಾಸ ಇದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿರುವ ಅವರು, `ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಆದರೆ, ಸುಪ್ರೀಂಕೋರ್ಟಿನಲ್ಲಿದ್ದ ಪರಿಸರ ಸಂಬಂಧಿ ಪ್ರಕರಣದಿಂದಾಗಿ ಏನೂ ಮಾಡುವಂತಿರಲಿಲ್ಲ. ಸುಪ್ರೀಂಕೋರ್ಟಿನ ನಿರ್ಧಾರದಿಂದ ಈಗ ಒಂದು ಹೆಜ್ಜೆ ಮುಂದಕ್ಕೆ ಬಂದಿದ್ದೇವೆ. ಈ ವಿಚಾರ ಈಗಲೂ ನ್ಯಾಯಾಂಗದ ವಿಚಾರಣೆಯಲ್ಲಿದೆ ಎನ್ನುವ ಅರಿವಿದೆ. ಆದರೂ ಇವತ್ತಿನ ನಿಲುವು ನಮ್ಮ ಕಿತ್ತೂರು ಕರ್ನಾಟಕ ಭಾಗಕ್ಕೆ ನಿರಾಳತೆ ತಂದಿದೆ ‘ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯಪುರ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, `ಈ ಹಿಂದಿನ ತೀರ್ಪಿನಿಂದ ವಿಮಾನ ನಿಲ್ದಾಣದ ಅಸ್ತಿತ್ವಕ್ಕೆ ಅಪಾಯ ಎದುರಾಗಿತ್ತು. ಆದರೆ, ಸಚಿವ ಎಂ ಬಿ ಪಾಟೀಲರು ತ್ವರಿತವಾಗಿ ಕ್ರಿಯಾಶೀಲರಾಗಿ, ಕಪಿಲ್ ಸಿಬಲ್ ಅವರಂತಹ ಹಿರಿಯ ನ್ಯಾಯವಾದಿಯನ್ನು ನೇಮಿಸಿಕೊಳ್ಳುವ ಮೂಲಕ ವಿಮಾನ ನಿಲ್ದಾಣಕ್ಕೆ ಪುನರ್ಜನ್ಮ ನೀಡಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಶೀಘ್ರದಲ್ಲೇ ಬಾಕಿ ಇರುವ 2 ತಿಂಗಳ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಪ್ರಿಯಾಂಕ್ ಖರ್ಗೆ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮ: ಛಲವಾದಿ ನಾರಾಯಣಸ್ವಾಮಿ








