ಆನಂದಪುರ: ಸಾಗರ ತಾಲೂಕಿನ ರಾಜಕೀಯ ರಂಗದಲ್ಲಿ ವಾಕ್ಸಮರ ತಾರಕಕ್ಕೇರಿದೆ. ಕಾಂಗ್ರೆಸ್ ಮುಖಂಡ ಸೋಮಶೇಖರ್ ಲಾವಿಗೆರೆ ಅವರು ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರತ್ನಾಕರ ಅವರು “ತರ್ಡ್ ಕ್ಲಾಸ್” ಹಾಗೂ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆನಂದಪುರದ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಗದ್ದಲ ಆರಂಭವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಾವಿಗೆರೆ, “ಯಾವುದೇ ಒಂದು ದೊಡ್ಡ ಜಾತ್ರೆ ನಡೆಯುವಾಗ ಕ್ಷೇತ್ರದ ಶಾಸಕರಿಗೆ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಗುರುತರ ಜವಾಬ್ದಾರಿ ಇರುತ್ತದೆ. ಇದಕ್ಕಾಗಿ ಶಾಸಕರು ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆದು ಸಭೆ ನಡೆಸುವುದು ಶಿಷ್ಟಾಚಾರ ಮತ್ತು ಕರ್ತವ್ಯ. ಇಂತಹ ಜನಪರ ಕೆಲಸಕ್ಕೆ ‘ಧಿಕ್ಕಾರ’ ಎಂದು ಹೇಳಿರುವ ರತ್ನಾಕರ ಹೊನಗೋಡಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯೇ?” ಎಂದು ಕಟುವಾಗಿ ಪ್ರಶ್ನಿಸಿದರು.
“ನಾನೇ ನಾಯಕ” ಎಂಬ ಭ್ರಮೆಯಲ್ಲಿ ಹೊನಗೋಡು
ಅಧಿಕಾರ ಎನ್ನುವುದು ಶಾಶ್ವತವಲ್ಲ ಎಂಬುದನ್ನು ರತ್ನಾಕರ ಅವರು ಮರೆತಿದ್ದಾರೆ ಎಂದು ಲಾವಿಗೆರೆ ಕುಟುಕಿದರು. “ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು ಸಂಸದರವರೆಗೂ ಅಧಿಕಾರದ ಅವಧಿ ಕೇವಲ ಐದು ವರ್ಷ ಮಾತ್ರ. ಮಾಜಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ರತ್ನಾಕರ ಅವರಿಗೆ ತಾನು ಈಗ ‘ಮಾಜಿ’ ಎಂಬ ಅರಿವೇ ಇಲ್ಲದಂತಾಗಿದೆ. ಇಂದಿಗೂ ಅವರು ಹಾಲಿ ಸದಸ್ಯನಂತೆ ವರ್ತಿಸುತ್ತಾ, ಮಾಧ್ಯಮಗಳ ಮುಂದೆ ಹೋಗಿ ‘ನಾನೇ ಸ್ವಯಂ ಘೋಷಿತ ನಾಯಕ’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದು ಲಾವಿಗೆರೆ ಖಂಡಿಸಿದರು.
ಹಳೆಯ ಹಗರಣಗಳ ನೆನಪು: ಭ್ರಷ್ಟಾಚಾರದ ಆರೋಪ
ರತ್ನಾಕರ ಹೊನಗೋಡು ಅವರ ಭೂತಕಾಲದ ವಿಚಾರಗಳನ್ನು ಪ್ರಸ್ತಾಪಿಸಿದ ಲಾವಿಗೆರೆ, ಅವರ ನೈತಿಕತೆಯನ್ನು ಪ್ರಶ್ನಿಸಿದರು. “ಇರುವಕ್ಕಿಯ ಕೃಷಿ ವಿಶ್ವವಿದ್ಯಾಲಯದ ಒಂದೊಂದು ಬೇಲಿ ಕಂಬ ಮತ್ತು ಮರದ ಮುಂಡುಗಳು ರತ್ನಾಕರ ಅವರ ದುರಾಡಳಿತ ಮತ್ತು ಭ್ರಷ್ಟಾಚಾರದ ಕಥೆಯನ್ನು ಹೇಳುತ್ತವೆ. ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ನಾಟಾ ಕಳ್ಳತನ ಮಾಡಿ ಜೈಲಿಗೆ ಹೋದ ಇತಿಹಾಸ ಹೊಂದಿರುವ ವ್ಯಕ್ತಿಗೆ ನಮ್ಮ ಶಾಸಕರ ಬಗ್ಗೆ ಮಾತನಾಡುವ ಯಾವ ಅರ್ಹತೆ ಇದೆ?” ಎಂದು ಕಿಡಿಕಾರಿದರು.
ಸಾಗರ ಮಾರಿಕಾಂಬ ದೇವಸ್ಥಾನದ ಗೌರವ ಅಧ್ಯಕ್ಷರಾದ ಶಾಸಕರು, ಜಾತ್ರಾ ಸಮಿತಿಯ ವಿಚಾರ ನ್ಯಾಯಾಲಯದಲ್ಲಿದ್ದಾಗಲೂ ಎಲ್ಲಾ ಜಾತಿ-ಧರ್ಮದವರನ್ನು ಒಗ್ಗೂಡಿಸಿ ಅದ್ದೂರಿಯಾಗಿ ಜಾತ್ರೆ ನಡೆಸಿದ್ದರು. ಅವರ ಕೆಲಸವನ್ನು ಮಾಜಿ ಶಾಸಕ ಹಾಲಪ್ಪನವರೇ ಪ್ರಶಂಸಿಸಿದ್ದಾರೆ. ಇಂತಹ ಸತ್ಯಗಳನ್ನು ಅರ್ಥಮಾಡಿಕೊಳ್ಳದ ರತ್ನಾಕರ ಒಬ್ಬ ‘ಮುಟ್ಟಾಳ’ನಂತೆ ವರ್ತಿಸುತ್ತಿದ್ದಾರೆ ಎಂದು ಲಾವಿಗೆರೆ ಟೀಕಿಸಿದರು.
ಫ್ಲೆಕ್ಸ್ ಪಾಲಿಟಿಕ್ಸ್ ಮತ್ತು ಅಸ್ತಿತ್ವದ ಹೋರಾಟ
ಸಾಗರ ಜಾತ್ರೆಯ ಸಂದರ್ಭದಲ್ಲಿ ಹಾಕಲಾದ ಫ್ಲೆಕ್ಸ್ ವಿಚಾರವಾಗಿಯೂ ಸ್ಪಷ್ಟನೆ ನೀಡಿದ ಮುಖಂಡರು, “ನಾವು ಸಾಗರ ಜಾತ್ರೆಗೆ ಫ್ಲೆಕ್ಸ್ ಹಾಕಿದ್ದೇವೆ, ನೀವೇನು ಆ ಕಮಿಟಿಯಲ್ಲಿ ಇದ್ದೀರಾ? ಶಾಸಕರ ಅಭಿಮಾನಿಗಳು ಪ್ರೀತಿಯಿಂದ ಫ್ಲೆಕ್ಸ್ ಹಾಕಿದ್ದಕ್ಕೆ ಕ್ಯಾತೆ ತೆಗೆಯುವುದು ಸರಿಯಲ್ಲ. ಶಾಸಕರಿಗೆ ಪ್ರಚಾರದ ಹಂಗಿಲ್ಲ, ಅವರಿಗೆ ಕ್ಷೇತ್ರದ ಸಮಸ್ಯೆಗಳ ಅರಿವಿದೆ. ನೀವು ಕೆಡಿಪಿ ರಾಜ್ಯ ಸದಸ್ಯರಾದ ಮೇಲೆ ಆನಂದಪುರಕ್ಕೆ ನೀಡಿದ ಕೊಡುಗೆ ಶೂನ್ಯ” ಎಂದು ಸವಾಲು ಹಾಕಿದರು.
ಒಟ್ಟಾರೆಯಾಗಿ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬಿಟ್ಟು ಜನರ ಸಮಸ್ಯೆಗಳತ್ತ ಗಮನಹರಿಸಲಿ. ಕೇವಲ ಮಾಧ್ಯಮದ ಮುಂದೆ ಬೈದಾಡುವುದರಿಂದ ಯಾರೂ ದೊಡ್ಡ ನಾಯಕರಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ ಮುಖಂಡರು ಈ ಮೂಲಕ ರತ್ನಾಕರ ಹೊನಗೋಡು ಅವರಿಗೆ ರವಾನಿಸಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಸಾಗರ ಮತ್ತು ಆನಂದಪುರ ಭಾಗದ ಪ್ರಮುಖ ಕಾಂಗ್ರೆಸ್ ಮುಖಂಡರಾದಂತ ರಮಾನಂದ ಸಾಗರ್, ಕಲೀಮುಲ್ಲಾ, ಉಮೇಶ್ ಎನ್., ಬಾಬುಲ್ ಸಾಬ್ರು, ರಮತುಲ್ಲಾ, ಗಜೇಂದ್ರ, ಲಿಂಗರಾಜ್, ಅಮೀರ್, ಅರುಣ್ ಗೌಡ್ರು, ವಿಜಯ್ ಗೌಡ್ರು, ಬಸವರಾಜ್, ಎಂಎಲ್ಎಶ್ವರ, ಸಿರಿಜಾನ್, ಮೋಹನ್, ಆಸಿಫ್, ಲೋಕೇಶ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯದ ‘ಸರ್ಕಾರಿ PU ಕಾಲೇಜು ವಿದ್ಯಾರ್ಥಿ’ಗಳಿಗೆ ಸಿಹಿಸುದ್ದಿ: ಮುಂದಿನ ವರ್ಷದಿಂದ ಉಚಿತವಾಗಿ ‘ಪಠ್ಯಪುಸ್ತಕ’ ವಿತರಣೆ
SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಮಂಡಳಿಯ ಅಧಿಕೃತ ಮಾಹಿತಿ








