ಚಿಕ್ಕಮಗಳೂರು : ಲೋಕಸಭೆಯಲ್ಲಿ ಹಿಂದುತ್ವದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಚಿಕ್ಕಮಂಗಳೂರಲ್ಲಿ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿಟಿ ರವಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ವಿಪಕ್ಷ ನಾಯಕ ಅನ್ನೋ ಜವಾಬ್ದಾರಿಯನ್ನು ಮರೆತಿದ್ದಾರೆ. ತಮ್ಮ ಅಯೋಗ್ಯತನವನ್ನ ಪ್ರದರ್ಶಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವಿಪಕ್ಷ ನಾಯಕ ಅನ್ನೋ ಜವಾಬ್ದಾರಿ ಮರೆತಿದ್ದಾರೆ. ಹಿಂದೂಗಳ ಮನಸ್ಸಿನಲ್ಲಿ ದ್ವೇಷ ಭಾವನೆ ಬಿತ್ತುವವರು ಇವರಾಗಿದ್ದಾರೆ. ಹಿಂದೂ ಧರ್ಮ ಸರ್ವೇ ಜನ ಸುಖಿನೋಭವಂತು ಅನ್ನೋದನ್ನ ಪ್ರತಿಪಾದಿಸಿದೆ. ಹಿಂದೂ ಅನ್ನೋದು ವಿಶ್ವವೇ ಒಂದು ಕುಟುಂಬ ಅಂತ ಭಾವಿಸೋದು ಎಂದಿದ್ದಾರೆ.

ಅನ್ನ ಬೆಂದಿದೆಯಾ ಅಂತ ನೋಡೋಕೆ ಎಲ್ಲಾ ಅಕ್ಕಿಯನ್ನ ಮುಟ್ಟಿ ನೋಡಬೇಕಿಲ್ಲ. ರಾಹುಲ್ ಗಾಂಧಿ ತಮ್ಮ ಚೊಚ್ಚಲ ಭಾಷಣದಲ್ಲಿಯೇ ನಾನು ಆ ಸ್ಥಾನಕ್ಕೆ ಯೋಗ್ಯನಲ್ಲ ಎಂಬುದನ್ನು ಪ್ರದರ್ಶನ ಮಾಡಿದ್ದಾರೆ. ನನಗೆ ಭಾರತ, ಭಾರತೀಯತೆ, ಹಿಂದೂ, ಹಿಂದುತ್ವದ ಬಗ್ಗೆ ಏನೂ ಗೊತ್ತಿಲ್ಲ ಎಂದು ಟ್ವೀಟ್ ಮಾಡಿಸಿದ್ದಾರೆ ಎನಿಸುತ್ತದೆ. ಸಂಸತ್ತಿನ ಕಲಾಪದಲ್ಲಿ ಮಾತನಾಡುವ ಮೂಲಕ ಸಹಸ್ರಾರು ವರ್ಷದ ಸನಾತನ ಪರಂಪರೆಗೆ ಅಪಮಾನದ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ತನ್ನ ಹೇಳಿಕೆಗೆ ರಾಷ್ಟ್ರದ ಕ್ಷಮೆಯಾಚನೆ ಮಾಡ್ಬೇಕು ಅಂತ ಆಗ್ರಹಿಸ್ತೇನೆ.

Share.
Exit mobile version