ಬೆಂಗಳೂರು: ಗುಣಮಟ್ಟದ ಶಿಕ್ಷಣ ಎಂದರೆ ಕೇವಲ ಅಂಕಗಳಿಕೆಯಲ್ಲ, ವೈಜ್ಞಾನಿಕತೆ, ಸಾಮಾಜಿಕ ಸಮಾನತೆ, ನೈತಿಕ ಮೌಲ್ಯಗಳನ್ನು ಬಿತ್ತಬೇಕು. ಶಿಕ್ಷಣವನ್ನು ಪೆÇ್ರೀತ್ಸಾಹಿಸಲು ಸರ್ಕಾರವು ಎಲ್ಲಾ ರೀತಿಯ ನೆರವನ್ನು ನೀಡಲಿದೆ. ಖಾಸಗಿ ಶಾಲೆಗಳ ಭರಾಟೆಯ ನಡುವೆ ಸರ್ಕಾರಿ ವಸತಿ ಶಾಲೆಯಲ್ಲಿ ಓದಿದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಿಗಳಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಅಂತಹ ಪ್ರತಿಭಾವಂತ ಮಕ್ಕಳನ್ನು ರೂಪಿಸಿದ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಸಹಯೋಗದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂದು ಆಯೋಜಿಸಿದ್ದ 2024 ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಈ ಹಿಂದೆ ದಲಿತ ಸಂಘರ್ಷ ಸಮಿತಿಯು ರಾಜ್ಯದಲ್ಲಿ ಸಾರಾಯಿ ಅಂಗಡಿಗಳು ಬೇಡ, ವಸತಿ ಶಾಲೆಗಳು ಬೇಕು ಎಂದು ಒತ್ತಾಯಿಸಿತ್ತು ಅದರ ಪ್ರೇರಣೆಯಿಂದಾಗಿ 1994-95 ರಲ್ಲಿ ತಾವು ಹಣಕಾಸು ಸಚಿವರಾಗಿದ್ದಾಗ ಮಂಡಿಸಿದ ಮೊದಲ ಬಜೆಟ್ನಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸುವ ಘೋಷಣೆ ಮಾಡಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಯಿತು.
ಇಂದು ಸಮಾಜ ಕಲ್ಯಾಣ ಇಲಾಖೆಯಡಿ 833 ವಸತಿ ಶಾಲೆಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 123 ವಸತಿಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಕೆಲವೆಡೆ ಹೆಚ್ಚು ವಸತಿಶಾಲೆಗಳಿವೆ, ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ಸಮಾನವಾಗಿ ಶಾಲೆಗಳಿರಬೇಕು ಎಂಬ ಆಶಯದಿಂದ ಈ ಬಾರಿ 20 ವಸತಿಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಸಂವಿಧಾನ ಜಾರಿಗೆ ಬರುವ ಮುನ್ನ ಶಿಕ್ಷಣ ಕಡ್ಡಾಯವಿರಲಿಲ್ಲ, ಬಾಬಾಸಾಹೇಬ್ ಅಂಬೇಡ್ಕರರು ಸಂವಿಧಾನ ರಚಿಸಿಕೊಟ್ಟ ನಂತರ ಸಮಾಜದ ಎಲ್ಲ ವರ್ಗಗಳು ಶಿಕ್ಷಣ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಾಯಿತು. ಚಾತುರ್ವರ್ಣ ವ್ಯವಸ್ಥೆಯಿಂದಾಗಿ ಸಾವಿರಾರು ವರ್ಷಗಳಿಂದ ಕೆಲವು ವರ್ಗಗಳು ಅಕ್ಷರ ಕಲಿಯಲು ಸಾಧ್ಯವಾಗಿರಲಿಲ್ಲ, ಅವರು ಅವಕಾಶ ವಂಚಿತರಾದರು ಈ ಕಾರಣದಿಂದ ಸಾಮಾಜಿಕ, ಆರ್ಥಿಕ ಅಸಮಾನತೆ ನಿರ್ಮಾಣವಾಯಿತು. ಬುದ್ಧ, ಬಸವಣ್ಣನವರು ಸಾವಿರಾರು ವರ್ಷಗಳಿಂದ ಜಾತಿ ಪದ್ಧತಿ ಹೋಗಲಾಡಿಸಲು ಶ್ರಮಿಸಿದರೂ ಕೂಡ ಇಂದಿಗೂ ಸಂಪೂರ್ಣ ಸಮಾನತೆ ಬಂದಿಲ್ಲ ಎಂದರು.
ವಸತಿ ಶಾಲೆಗಳ ಶಿಕ್ಷಕರು ತಮ್ಮ ಪಾಠಗಳ ಜೊತೆಗೆ ಸಾಮಾಜಿಕ ಸಮಾನತೆಯ ನೈತಿಕ ಮೌಲ್ಯಗಳನ್ನು ಕೂಡ ಮಕ್ಕಳಲ್ಲಿ ಬಿತ್ತಬೇಕು. ಮೊದಲು ಶಿಕ್ಷಕರು ಸಂಕುಚಿತ ಭಾವನೆಗಳನ್ನು ಬಿಡಬೇಕು. ಅನೇಕರು ವೈದ್ಯರಾಗಿರುತ್ತಾರೆ, ಪಿಹೆಚ್ಡಿ ಮಾಡಿರುತ್ತಾರೆ ಆದರೆ ಮೌಢ್ಯ, ಕಂದಾಚಾರಗಳನ್ನೇ ಬಿಟ್ಟು ಹೊರ ಬಂದಿರುವುದಿಲ್ಲ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಮುಖ್ಯ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರ ವಿಚಾರಗಳನ್ನು ಪ್ರತಿಯೊಬ್ಬರು ಅರಿತುಕೊಂಡು ಆಚರಣೆಗೆ ತರಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ವೀರಮಕ್ಕಳ ಕುಣಿತ, ಎಮ್ಮೆ ಕಾಯ್ದ ದಿನಗಳ ನೆನಪುಗಳ ಮೆಲುಕು
ತಾವು ಬಾಲಕರಿದ್ದಾಗ ಶಾಲೆಗೆ ಸೇರದೇ ವೀರಮಕ್ಕಳ ಕುಣಿತ ಕಲಿಯಲು ಸೇರಿದ್ದೆ, ಎಮ್ಮೆ ಕಾಯಲು ಹೋಗುತ್ತಿದ್ದೆ ಅದೃಷ್ಟವಶಾತ್ ವೀರಮಕ್ಕಳ ಕುಣಿತ ಕಲಿಸುತ್ತಿದ್ದ ನಂಜೇಗೌಡರು ವಿದ್ಯಾವಂತರಾಗಿದ್ದರು, ಅವರು ನಮಗೆ ಮರಳಿನಲ್ಲಿ ಅಕ್ಷರಗಳು, ಮಗ್ಗಿಗಳು, ಲೆಕ್ಕಗಳನ್ನು ಕಲಿಸಿದ್ದರು. ರಾಜಪ್ಪ ಎನ್ನುವ ಶಿಕ್ಷಕರು ಬಂದು ಪರೀಕ್ಷಿಸಿ ನೇರವಾಗಿ ನನಗೆ ಐದನೇ ತರಗತಿ ಸೇರಿಸಿದ್ದರಿಂದಾಗಿ ಮುಂದೆ ವಕೀಲನಾಗಿ ಈ ಹಂತಕ್ಕೆ ಏರಲು ಸಾಧ್ಯವಾಯಿತು ಎಂಬ ನೆನಪುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಮೆಲುಕು ಹಾಕಿದರು.
ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ಪ್ರತಿಭೆ ಎನ್ನುವುದು ಯಾರೊಬ್ಬರ ಆಜನ್ಮ ಸಿದ್ಧ ಹಕ್ಕು ಅಲ್ಲ, ಕಷ್ಟಪಟ್ಟರೆ ಯಾರಾದರೂ ಉನ್ನತ ಸಾಧನೆ ಮಾಡಬಹುದು ಎಂಬುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರೇ ದೊಡ್ಡ ಉದಾಹರಣೆ. ಸಿದ್ದರಾಮಯ್ಯನವರು 1994 ರಲ್ಲಿ ಹಣಕಾಸು ಮಂತ್ರಿಗಳಾಗಿದ್ದಾಗ ಪ್ರತಿಭಾವಂತ ಮಕ್ಕಳಿಗಾಗಿ ವಸತಿಶಾಲೆಗಳನ್ನು ಸ್ಥಾಪಿಸಿ, ಗುಣಮಟ್ಟದ ಶಿಕ್ಷಣ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. 2013-14 ರಲ್ಲಿ ಅಧಿಕಾರಕ್ಕೆ ಬಂದಾಗ ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿಗೊಳಿಸಿ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಯಲ್ಲಿ ಸಮಪಾಲು ಸಿಗಬೇಕು ಎಂಬ ಐತಿಹಾಸಿಕ ನಿರ್ಧಾರ ಜಾರಿಗೊಳಿಸಿದ್ದು, ಸಂವಿಧಾನದ ನಿಜ ಆಶಯದ ಅನುμÁ್ಠನವಾಗಿದೆ. ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಸರ್ಕಾರದ ಕ್ರೈಸ್ ವಸತಿ ಶಾಲೆಗಳ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಂವಿಧಾನ ಪೀಠಿಕೆ ಆಶಯದ ಪ್ರತಿಪಾದನೆ ಮಾಡುವ ರೀತಿಯಲ್ಲಿ ಮಕ್ಕಳನ್ನು ನಾವು ಬೆಳೆಸಬೇಕಾಗಿದೆ. ಉತ್ತಮ ಸಾಂಸ್ಕøತಿಕ, ರಾಜಕೀಯ ಯುವನಾಯಕತ್ವವನ್ನು ಕೂಡ ರೂಪಿಸಿ, ಕೌಶಲ್ಯ ತರಬೇತಿಗೊಳಿಸುವ ಕಾರ್ಯಗಳನ್ನು ಕೈಗೊಳ್ಳಲು ಇಲಾಖೆಯು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ತಳವರ್ಗದ ಜನಸಮುದಾಯಗಳು ಅಧಿಕಾರದ ನಿರ್ಣಯ ಸ್ಥಾನಗಳಲ್ಲಿ ಕೂರುವಂತಾಗಬೇಕು ಎಂಬ ಡಾ.ಅಂಬೇಡ್ಕರ್ ಅವರ ಆಶಯ ಪರಿಣಾಮಕಾರಿಯಾಗಿ ಅನುμÁ್ಠನವಾಗಬೇಕು ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಮಾತನಾಡಿ, ಕರ್ನಾಟಕದಲ್ಲಿ ಕ್ರೈಸ್ ವಸತಿ ಶಾಲೆಗಳು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಸಮಾಜದ ತಳಹಂತದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಸರ್ಕಾರದ ಕ್ರೈಸ್ ವಸತಿಶಾಲೆಗಳಿಂದ ಸಾಧ್ಯವಾಗಿರುವುದು ಸಂತಸದ ಸಂಗತಿಯಾಗಿದೆ. ಶಿಕ್ಷಣದ ಮೂಲಕ ಸಮಾಜದಲ್ಲಿನ ಅಸಮಾನತೆ ತೊಡದೆ ಹಾಕಿ, ತಾರತಮ್ಯ ಹೋಗಲಾಡಿಸಲು ಸಾಧ್ಯ. ಸಮಾಜದ ಶೇ.70 ರಷ್ಟು ಸಂಪತ್ತು ಕೇವಲ ಶೇ.1 ರಷ್ಟು ಜನರ ಬಳಿ ಇದೆ ಇದರಲ್ಲಿ ಬದಲಾವಣೆ ತರಬೇಕಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಬಾಹ್ಯಾಕಾಶ ಹಾಗೂ ಖಗೋಳಶಾಸ್ತ್ರ ಪ್ರಯೋಗಾಲಯವನ್ನು ಕಾರ್ಯಕ್ರಮದಲ್ಲಿದ್ದ ಗಣ್ಯರು ಉದ್ಘಾಟಿಸಿದರು.
ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕಗಳಿಸಿದ ಬಾಗಲಕೋಟೆಯ ಮೆಳ್ಳಿಗೇರಿ ಮೊರಾರ್ಜಿ ವಸತಿಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರ ಗೆ 5 ಲಕ್ಷ ರೂ. ನಗದು ಹಾಗೂ ಆಕೆ ವ್ಯಾಸಂಗ ಮಾಡಿದ ಶಾಲೆಗೆ 1 ಕೋಟಿ ರೂ. ಅನುದಾನ ನೀಡಿ ಗೌರವಿಸಲಾಯಿತು. ಉನ್ನತ ಸ್ಥಾನ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ವಿಶೇಷ ತರಬೇತಿ ನೀಡಿ ಉತ್ತಮ ಸಾಧನೆಗೆ ಕಾರಣರಾದ ಶಾಲೆಗಳ ಪ್ರಾಚಾರ್ಯರು ಹಾಗೂ ಶಿಕ್ಷಕರಿಗೆ ವೇದಿಕೆಯಲ್ಲಿದ್ದ ಗಣ್ಯರು ಪುರಸ್ಕಾರ ನೀಡಿ ಗೌರವಿಸಿದರು.
ಸಮಾಜ ಕಲ್ಯಾಣ ಆಯುಕ್ತ ಡಾ.ರಾಕೇಶ್ಕುಮಾರ್ ಸ್ವಾಗತಿಸಿದರು, ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರವೀಣ ಬಾಗೇವಾಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಹೆಚ್.ಪಿ.ಸುಧಾಮದಾಸ್, ರೋಟರಿಯನ್ ಶ್ರೀನಿವಾಸ, ಸಿ.ರಾಮಣ್ಣ, ಎಸ್.ಸಿ.ಪಿ.ಟಿ.ಎಸ್.ಪಿ.ನೋಡಲ್ ಅಧಿಕಾರಿ ಡಾ.ವೆಂಕಟೇಶ, ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.