ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಿ, ಮೊಬೈಲ್ ಬಳಕೆ ನಿಯಂತ್ರಿಸುವ ಉದ್ದೇಶದಿಂದ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಅಭಿಯಾನವನ್ನು ಅನುಷ್ಠಾನಗೊಳಿಸಿ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ವ್ಯವಸ್ಥಿತವಾಗಿ ಬೆಳೆಸಿ, ಕ್ರಿಯಾಶೀಲ, ವಿವೇಚನೆಯುಕ್ತ ಹಾಗೂ ಉನ್ನತ ಚಿಂತನಾ ಸಾಮರ್ಥ್ಯವನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದು ಶಿಕ್ಷಣ ಇಲಾಖೆಯ ಪ್ರಮುಖ ಉದ್ದೇಶವಾಗಿರುತ್ತದೆ. ಓದುವಿಕೆಯು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸ, ಮೌಲ್ಯಾಧಾರಿತ ಚಿಂತನೆ, ಆಲೋಚನಾ ಸಾಮರ್ಥ್ಯ ಹಾಗೂ ಜೀವನ ಕೌಶಲ್ಯಗಳ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ಗಳು ಹಾಗೂ ಇತರೆ ಡಿಜಿಟಲ್ ಸಾಧನಗಳ ಅತಿಯಾದ ಹಾಗೂ ಅನಿಯಂತ್ರಿತ ಬಳಕೆಯಿಂದಾಗಿ ಓದುವಿಕೆಯಲ್ಲಿ ಗಣನೀಯ ಕುಸಿತ ಉಂಟಾಗುತ್ತಿರುವುದು, ಕಲಿಕಾ ಆಸಕ್ತಿ ಗಂಭೀರವಾಗಿ ಕುಂಠಿತವಾಗುತ್ತಿರುವುದು, ಏಕಾಗ್ರತೆಯಲ್ಲಿ ಹಿನ್ನಡೆಯಾಗಿರುವುದು, ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿರುವುದು ಹಾಗೂ ಶೈಕ್ಷಣಿಕ ಸಾಧನೆಗೆ ಸ್ಪಷ್ಟ ಅಡ್ಡಿಯುಂಟಾಗುತ್ತಿರುವುದನ್ನು ಗಮನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಓದುವ ಅಭ್ಯಾಸವನ್ನು ಪುನಶ್ಚತನಗೊಳಿಸುವ ಮೂಲಕ ಜ್ಞಾನವೃದ್ಧಿಗೆ ಪೂರಕವಾದ ಕಲಿಕಾ ವಾತಾವರಣವನ್ನು ನಿರ್ಮಿಸಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸವನ್ನು ಸಾಧಿಸುವ ಉದ್ದೇಶದಿಂದ “ಮೊಬೈಲ್ ಬಿಡಿ – ಪುಸ್ತಕ ಹಿಡಿ” ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
“ಮೊಬೈಲ್ ಬಿಡಿ – ಪುಸ್ತಕ ಹಿಡಿ” ಅಭಿಯಾನದ ಅನುಷ್ಠಾನ ಕ್ರಮಗಳು
ಶಾಲಾ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳು:
2026-27ನೇ ಸಾಲಿಗೆ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನದ ಕುರಿತ ಉಲ್ಲೇಖ(1) ರ ಸರ್ಕಾರದ ಸುತ್ತೋಲೆಯಲ್ಲಿ ಶಾಲಾ ಹಂತದಲ್ಲಿ ಎಸ್ಡಿಎಂಸಿ ಮತ್ತು ಪೋಷಕರ ಸಭೆಗಳನ್ನು ನಿಯಮಿತವಾಗಿ ನಡೆಸಲು ತಿಳಿಸಲಾಗಿರುತ್ತದೆ. ಸದರಿ ಸಭೆಗಳಲ್ಲಿ ಮೊಬೈಲ್ ಬಳಕೆಯ ಪರಿಣಾಮಗಳ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿರುವ ತಜ್ಞರ ಮೂಲಕ ಜಾಗೃತಿಯನ್ನು ನೀಡಲು ಕ್ರಮವಹಿಸುವುದು. ಹಾಗೂ ಮನೆಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಕೆಳಕಂಡ ಅಂಶಗಳ ಬಗ್ಗೆ ಗಮನ ಹರಿಸಲು ತಿಳಿಸುವುದು.
ಮಕ್ಕಳು ಯಾವ ಉದ್ದೇಶಕ್ಕಾಗಿ ಮೊಬೈಲ್ ಅನ್ನು ಬಳಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಅರಿತುಕೊಳ್ಳುವುದು.
ಮೊಬೈಲ್ ಬಳಕೆಯ ಸಮಯವನ್ನು ಮಿತಿಗೊಳಿಸುವುದು.
ಊಟದ ಸಮಯದಲ್ಲಿ, ಮಲಗುವ ಮುನ್ನ ಹಾಗೂ ದೈನಂದಿನ ಇತರೆ ಚಟುವಟಿಕೆಗಳನ್ನು ಮಾಡುವಾಗ ಮೊಬೈಲ್ ಬಳಕೆ ಮಾಡದೆ ಇರುವಂತೆ ಗಮನಹರಿಸುವುದು.
ಓದುವಿಕೆ ಅಥವಾ ಇತರೆ ಆಫ್ಲೈನ್ ಚಟುವಟಿಕೆಗಳಾದ ಆಟಗಳು, ಮನೆಯ ಸದಸ್ಯರೊಂದಿಗೆ ಸಂವಹನ ಮಾಡುವುದು, ಮಕ್ಕಳ ಅಭಿರುಚಿಗೆ ಅನುಗುಣವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು.
ಪೋಷಕರ ಮಾದರಿ ನಡವಳಿಕೆ:
ಪೋಷಕರು ಸ್ವತಃ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಓದುವಿಕೆ ಹಾಗೂ ಇತರೆ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಮಾದರಿಯಾಗುವುದು.
ಪೋಷಕರು, ಮಕ್ಕಳೊಂದಿಗೆ ಕುಳಿತು ಓದುವುದು ಅಥವಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದು.
ಮಕ್ಕಳ ಮೊಬೈಲ್ ಬಳಕೆಯನ್ನು ಮೇಲ್ವಿಚಾರಣೆ ಮಾಡಿ, ಅದು ಅವರ ಕಲಿಕೆಗೆ ಅಡ್ಡಿಯಾಗದಂತೆ ಖಚಿತಪಡಿಸಿಕೊಳ್ಳುವುದು.
ಶಾಲಾ ಹಂತದ ಜಾಗೃತಿ ಕಾರ್ಯಕ್ರಮಗಳು.
ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುವ ಸಹಪಠ್ಯ ಚಟುವಟಿಕೆಗಳಾದ ಪ್ರತಿಭಾ ಕಾರಂಜಿ, ಕಲೋತ್ಸವ, ರಾಷ್ಟ್ರೀಯ ಹಬ್ಬಗಳು, ಸಮುದಾಯದತ್ತ ಶಾಲಾ ಕಾರ್ಯಕ್ರಮಗಳಲ್ಲಿ ಪಾತ್ರಾಭಿನಯ, ಪೋಸ್ಟರ್ ಮೇಕಿಂಗ್, ನೃತ್ಯ, ಭಾಷಣ ಮುಂತಾದ ಚಟುವಟಿಕೆಗಳ ಮೂಲಕ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಸುರಕ್ಷಿತ ಮತ್ತು ಮಿತ ಬಳಕೆಯ ಬಗ್ಗೆ ಅರಿವು ಮೂಡಿಸುವುದು.
ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಅದರ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ಮತ್ತು ಜವಾಬ್ದಾರಿಯುತ ಬಳಕೆಯನ್ನು ಪ್ರೋತ್ಸಾಹಿಸುವುದು.
ಹವ್ಯಾಸಾಧಾರಿತ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಒಳಾಂಗಣ/ಹೊರಾಂಗಣ ಕ್ರೀಡೆಗಳು, ಚಿತ್ರಕಲೆ, ಹಾಡು, ಕಥೆ/ಕವನ ಬರವಣಿಗೆ, ಕಸೂತಿ ಮುಂತಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು.
ಗ್ರಂಥಾಲಯ ಬಳಕೆಗೆ ಉತ್ತೇಜನ ನೀಡಿ ಉತ್ತಮ ಪುಸ್ತಕಗಳನ್ನು ಮಕ್ಕಳಿಗೆ ಪರಿಚಯಿಸಿ ಓದುವ ಹವ್ಯಾಸವನ್ನು ಬೆಳಸಲು ಶಿಕ್ಷಕರು ಕ್ರಮವಹಿಸುವುದು. ಶಾಲೆಯಲ್ಲಿ ಲಭ್ಯವಿರುವ ಭೂಪಟ, ಶಬ್ದಕೋಶ, ವಿಶ್ವಕೋಶ ಹಾಗೂ ಇತರೆ ಉಲ್ಲೇಖ ಗ್ರಂಥಗಳ ಬಳಕೆಯ ಬಗ್ಗೆ ಮಕ್ಕಳಿಗೆ ಪರಿಚಯಿಸುವುದು. ಓದಿದ ಪುಸ್ತಕದ ಪರಿಚಯ, ಕಥೆ ಹೇಳುವ ಸ್ಪರ್ಧೆ, ವಿಮರ್ಶೆ ಬರವಣಿಗೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
ಮೈಂಡ್ ಫುಲ್ನೆಸ್(Mindfulness) ತಂತ್ರಗಳ ಬಳಕೆಯ ಮೂಲಕ ವಿದ್ಯಾರ್ಥಿಗಳಿಗೆ ಉಸಿರಾಟ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಅರಿವನ್ನು ಮೂಡಿಸಿ, ಧ್ಯಾನ-ಯೋಗ ಮತ್ತು ಮೈಂಡ್ಫುಸ್ ಅಭ್ಯಾಸಗಳನ್ನು ಪರಿಚಯಿಸುವ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡುವುದು, ಏಕಾಗ್ರತೆ ಮತ್ತು ಓದುವ ಆಸಕ್ತಿ ಹೆಚ್ಚಿಸುವುದು ಹಾಗೂ ಮೊಬೈಲ್ ಬಳಕೆಯನ್ನು ನಿಯಂತ್ರಣಕ್ಕೆ ತರುವ ತಂತ್ರಗಳನ್ನು ಕಲಿಸುವುದು.
ಶಿಕ್ಷಣ ಸಂವಹನ ಸಾಮಗ್ರಿಗಳ ಬಳಕೆ :
ಡಿ.ಎಸ್.ಇ.ಆರ್.ಟಿ website ನಲ್ಲಿ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ (NPEP) ಪ್ರಕಟಿಸಲಾಗಿರುವ Safe Use of Internet and gadgets ಕುರಿತ ಪೋಸ್ಟರ್ನ ಮುದ್ರಿತ ಪ್ರತಿಯನ್ನು, ಈ ಕೆಳಗಿನ ವೆಬ್ಸೈಟ್ ಲಿಂಕ್ ಮೂಲಕ ಪಡೆದು, ಮುದ್ರಿಸಿ ಶಾಲಾ ಫಲಕದಲ್ಲಿ ಅಳವಡಿಸಿ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸುವುದು.









