ಶಿವಮೊಗ್ಗ: ನನ್ನ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿವರ ಮಾತು ಕೇಳಿಕೊಂಡು ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಜಮೀನಿಗೆ ದಾಖಲೆಯಿದೆ. ನನ್ನ ಅಂಗಡಿ ಸುಟ್ಟು ಹೋಗಿದ್ದಕ್ಕೆ ಎಫ್ಎಸ್ಎಲ್ ತಂಡ ನೀಡಿದಂತ ವರದಿಯ ಆಧಾರದಲ್ಲಿ ನನಗೆ ಗ್ರಾಹಕರ ನ್ಯಾಯಾಲಯದಿಂದ ಪರಿಹಾರ ಕೂಡ ಬಂದಿದೆ. ಹೀಗಿದ್ದರೂ ಮಾಜಿ ಸಚಿವರು ಸುಖಾ ಸುಮ್ಮನೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೇ ಅವರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಸಾಗರದ ಪ್ರಗತಿಪರ ಕೃಷಿಕ ಹಮೀದ್.ಎಎ ಎಚ್ಚರಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರ ತಾಲ್ಲೂಕು ಆವಿನಹಳ್ಳಿ ಗ್ರಾಮದ ಸ.ನಂ. 60ಎ ನಲ್ಲಿ 2.20 ಎಕರೆ ಜಮೀನು ಇದ್ದು, 1998ರಲ್ಲಿ ಅರ್ಜಿ ಸಲ್ಲಿಸಿದ್ದು 2016ರಲ್ಲಿ ಬಗರ್ ಹುಕುಂನಡಿ ಮಂಜೂರಾಗಿದೆ. ಶಹನಾಜ್ ನನ್ನ ಧರ್ಮಪತ್ನಿಯಾಗಿದ್ದು, ಅವರ ಹೆಸರಿನಲ್ಲಿ ಜಾಗ ಮಂಜೂರಾಗಿರುತ್ತದೆ ಎಂದರು.
ಈ ಜಾಗದಲ್ಲಿ ನಾವು ನೀಲಗಿರಿ, ಗೇರು, ಪಲೋಟ ಇನ್ನಿತರೆ ಬೆಳೆ ಕೃಷಿ ಮಾಡಿಕೊಂಡು ಬಂದಿದ್ದು, ಸ್ಥಳೀಯ ಕಂದಾಯ ಇಲಾಖೆಗೆ ವರ್ಷ ಪ್ರತಿ ಕಂದಾಯ ಪಾವತಿ ಮಾಡಿಕೊಂಡು ಬಂದಿರುತ್ತೇವೆ. ಜಮೀನಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು ನಮ್ಮ ಬಳಿ ಇರುತ್ತದೆ ಎಂದು ತಿಳಿಸಿದರು.
ಪಕ್ಕದ ಗೆಣಿಸಿಕುಣಿ ಗ್ರಾಮದ ಕೇಶವ ಬಿನ್ ಸಣ್ಣಪ್ಪ ಎಂಬುವವರು ನಮ್ಮ ಜಮೀನಿನಿಂದ ಅರ್ಧ ಕಿ.ಮೀ. ದೂರದಲ್ಲಿ ಸ್ವಲ್ಪ ಜಮೀನು ಹೊಂದಿದ್ದು, ಇದರ ಜೊತೆಗೆ ಹತ್ತಾರು ಎಕರೆ ಸರ್ಕಾರಿ ಜಮೀನು ಅತಿಕ್ರಮಣ ಮಾಡಿದ್ದಾರೆ. ಕೇಶವ ಬಿನ್ ಸಣ್ಣಪ್ಪ ಜೋಗಿ ಎಂಬುವವರು ನಮ್ಮ ಜಮೀನನ್ನು ಅತಿಕ್ರಮಣ ಮಾಡಲು ಬಂದಿದ್ದು, ಈ ಸಂಬಂಧ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವ್ಯಾಜ್ಯ ವಜಾ ಆಗಿ ಜಮೀನು ನಮ್ಮಂತೆ ಆಗಿದ್ದು, ಕೇಶವ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದರು.
ಹಿಂದಿನ ಶಾಸಕರಾದ ಹರತಾಳು ಹಾಲಪ್ಪ ಅವರ ಬೆಂಬಲಿಗರಾದ ಗುಳೆಹಳ್ಳಿ ಗಿರೀಶ್ (ಗಣಿ) ಮತ್ತು ಮಣಿ ಎಂಬುವವರು ಕೇಶವ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡು ನಮಗೆ ತೊಂದರೆ ಕೊಡುತ್ತಿದ್ದಾರೆ. ನಾವು ಕಾನೂನು ರೀತಿಯಲ್ಲಿ ಸರಿ ಇದ್ದುದ್ದರಿಂದ ಹಾಲಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ನಮಗೆ ರಕ್ಷಣೆ ನೀಡಿದ್ದಾರೆ. ಆದರೆ ಮಾಜಿ ಸಚಿವ ಹರತಾಳು ಹಾಲಪ್ಪ ತಮ್ಮ ಬೆಂಬಲಿಗರ ಮಾತು ಕೇಳಿ ನಮಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಜಮೀನು ವಿಷಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕ ವಲಯದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿದರು.
2004ರಲ್ಲಿ ಸಾಗರದಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಅಶೋಕ ರಸ್ತೆಯಲ್ಲಿದ್ದ ನಮ್ಮ ಚಪ್ಪಲಿ ಅಂಗಡಿ ಸ್ಟಾರ್ ಎಂಡ್ ಸ್ಟೈಲ್ ಬಟ್ಟೆ ಅಂಗಡಿ, ವಾಸದ ಮನೆ, ಸ್ಟಾರ್ ಶೂ ಕಲೆಕ್ಷನ್ಗೆ ಬೆಂಕಿ ಬಿದ್ದಿತ್ತು. ನಮ್ಮ ಅಂಗಡಿಗೆ ಬೆಂಕಿ ಬಿದ್ದು ಕೋಟ್ಯಾಂತರ ರೂಪಾಯಿ ನಷ್ಟವಾಗಿತ್ತು. ಈ ಸಂಬಂಧ ಎಫ್.ಐ.ಆರ್. ದಾಖಲಾಗಿ ವಿಚಾರಣೆ ನಡೆದು ಗ್ರಾಹಕರ ನ್ಯಾಯಾಲಯದಲ್ಲಿ 2010ರಲ್ಲಿ ತೀರ್ಮಾನವಾಗಿ 1.50 ಕೋಟಿ ರೂ. ನಷ್ಟಕ್ಕೆ ನಮಗೆ 14 ಲಕ್ಷದ 76 ಸಾವಿರ ರೂ. ಅತಿ ಕಡಿಮೆ ಪರಿಹಾರ ಬಂದಿದೆ. ನಾವು ಕಳೆದುಕೊಂಡಿದ್ದಕ್ಕಿಂತ ಅತಿ ಕಡಿಮೆ ಪರಿಹಾರ ಪಡೆದು ನಾವು ದೊಡ್ಡಮಟ್ಟದ ನಷ್ಟ ಅನುಭವಿಸಿದ್ದೇವೆ. ಬೆಂಕಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಎಸ್ಐಎಲ್ ವರದಿ ಸಹ ಇದ್ದು, ಅದು ಬೆಂಕಿ ಬಿದ್ದಿರುವುದನ್ನು ಖಚಿತ ಪಡಿಸಿದೆ. ಆದರೆ ಮಾಜಿ ಸಚಿವರು ಇನ್ಸೂರೆನ್ಸ್ಗಾಗಿ ಬೆಂಕಿ ಹಾಕಿಕೊಂಡಿದ್ದೇವೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದರು.
2022ರಲ್ಲಿ ನಾನು ದುಬೈನಲ್ಲಿ ಇದ್ದೇನೆ, ನನ್ನ ಕುಟುಂಬ ಬೆಂಗಳೂರಿನಲ್ಲಿ ವಾಸ ಮಾಡುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. 1996ರ ಹಿಂದೆ ಮೂತ್ನಾಲ್ಕು ವರ್ಷ ದುಬೈನಲ್ಲಿ ಇದ್ದದ್ದು ಹೌದು. 1996ರಿಂದ ನಾನು ಆವಿನಹಳ್ಳಿಯಲ್ಲಿಯೆ ಕುಟುಂಬಸಹಿತ ವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಮಾಜಿ ಸಚಿವರು ಸರಿಯಾದ ಮಾಹಿತಿಯನ್ನು ತಿಳಿದು ಕೊಳ್ಳದೆ ನನ್ನ ಹಾಗೂ ನಮ್ಮ ಕುಟುಂಬದ ವಿರುದ್ಧ ಸುಳ್ಳು ಸುದ್ದಿಯನ್ನು ಹರಡಿ ನಮಗೆ ಮಾನಸಿಕ ಹಿಂಸೆ ನೀಡಿದ್ದಾರೆ. ನಾವು ಅಲ್ಪಸಂಖ್ಯಾತರು ಎಂದು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಮಾಜಿ ಸಚಿವರು ತಕ್ಷಣ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ನಾವು ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸುದ್ದಿಗೋಷ್ಠಿಯ ವೇಳೆ ಶಹನಾಜ್, ಸ್ವಾಮಿ ಮತ್ತಿಕೊಪ್ಪ ಅವಿನಹಳ್ಳಿ, ಶ್ರೀಕಾಂತ್ ಕುರುವರಿ, ಶಫಿಯಾ ಅಬೂಬಕರ್, ಮಂಜು ಚಿಕ್ಕಮತ್ತೂರು ಅವಿನಹಳ್ಳಿ ಉಪಸ್ಥಿತರಿದ್ದರು.
BREAKING : 43 ಕ್ರಿಮಿನಲ್ ಕೇಸ್ ಹಿಂಪಡೆಯುವ ರಾಜ್ಯ ಸರ್ಕಾರದ ಕ್ರಮಕ್ಕೆ ಹಿನ್ನಡೆ: ಹೈಕೋರ್ಟ್ ನಿಂದ ಆದೇಶವೇ ರದ್ದು.!
BIG NEWS: ನನ್ನ ಸೂಚನೆಯನ್ನು ಕಡೆಗಣಿಸಿ ಆದೇಶ ಹೊರಡಿಸಿದ್ದನ್ನು ಆಕ್ಷೇಪಿಸುತ್ತೇನೆ: ಸಿಎಂ ವಿರುದ್ಧ ಡಿಕೆಶಿ ಕಿಡಿ