ಮಂಡ್ಯ : ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕುಮ್ಮಕ್ಕಿನಿಂದಲೇ ಮಾಜಿ ಸಂಸದ ಪ್ರಜ್ಜಲ್ ರೇವಣ್ಣ ಜೈಲಿಗೆ ಹೋಗಿದ್ದು ಎಂದು ಶಾಸಕ ಕೆ.ಎಂ.ಉದಯ್ ಅಚ್ಚರಿ ಹೇಳಿಕೆ ನೀಡಿದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ, ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮುಂದೆ ರಾಜಕೀಯವಾಗಿ ಯಾರು ಬೆಳೆಯಬಾರದು. ಹೀಗಾಗಿ ಅವರ ಅಣ್ಣನ ಮಗ ಪ್ರಜ್ಜಲ್ ರೇವಣ್ಣ ಅವರನ್ನೆ ಜೈಲಿಗೆ ಹಾಕಿಸಿದರು. ನಿಖಿಲ್ ಕುಮಾರಸ್ವಾಮಿಗೆ ಜನತೆ ಮೂರು ಬಾರಿ ತಿರಸ್ಕಾರ ಮಾಡಿದ್ದಾರೆ. ಹೀಗಾಗಿ ಪ್ರಜ್ಜಲ್ ಜನಪ್ರಿಯತೆ ಸಹಿಸದೆ ಕುಮಾರಸ್ವಾಮಿ ಅವರು ಚುನಾವಣಾ ವೇಳೆ ಪೆನ್ ಮತ್ತು ಡ್ರೈವ್ ಗಳನ್ನು ಸೃಷ್ಟಿಸಿ ಜೈಲಿಗೆ ಹಾಕಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಮನಸ್ಸು ಮಾಡಿದ್ದರೆ ಹೊರಗೆ ತರಬಹುದಿತ್ತು. ಆದರೆ, ಕುಮಾರಸ್ವಾಮಿ ಕುಮ್ಮಕ್ಕಿನಿಂದ ಪ್ರಜ್ಜಲ್ ರೇವಣ್ಣ ಜೈಲಿನಿಂದ ಹೊರ ಬರಲು ಆಗುತ್ತಿಲ್ಲ ಎಂದು ಕುಟುಕಿದರು.
ಜಿಲ್ಲಾ ಮತ್ತು ತಾಲೂಕಿನ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಹೋರಾಟಗಾರರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹೋರಾಟ ಮಾಡುವುದು ಎಷ್ಟು ಸರಿ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳ್ತಾರೆ. ಆದರೆ ಕುಮಾರಸ್ವಾಮಿ ಅವರು ಗ್ರಾಮೀಣ ಪ್ರದೇಶಗಳು ಉಳಿಯಬೇಕು ನಗರೀಕರಣ ಆಗಬಾರದೆಂದು ಪ್ರತಿಭಟನೆಗೆ ಬೆಂಬಲವಿದೆ ಎಂದು ಪ್ರಚೋದನೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ನನ್ನ ಮೇಲೆ ಅಪವಾದ ತರಲು ಈ ಹೋರಾಟ ಮುಂದಿಟ್ಟುಕೊಂಡು ವಿಪಕ್ಷಗಳು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಜನರ ಆಸೆ, ಒತ್ತಾಯ ಹಾಗೂ ಅಭಿಪ್ರಾಯದಂತೆ ನಗರಸಭೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ನನ್ನ ವೈಯಕ್ತಿಕವಾಗಿ ಅಲ್ಲ. ನಾನೇನು ಇಲ್ಲಿ ಬಂದು ವಾಸ ಮಾಡಲ್ಲ. ನನಗೇನು ಇದೇ ಬದುಕಲ್ಲ ನನಗೆ ಮುಂದೆ ಶಾಸಕ, ಮಂತ್ರಿಯಾಗುವ ಆಸೆ ಇಲ್ಲ. ಜನರ ಆಶೀರ್ವಾದದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜನರ ಆಸೆಯಂತೆ ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡ್ತಿದ್ದೇನೆ. ಬೇರೆ ನಗರಗಳ ರೀತಿ ಮದ್ದೂರು ನಗರ ಅಭಿವೃದ್ಧಿ ಆಗಬಾರದೇ ಇದಕ್ಕೆ ವಿರೋಧ ಮಾಡಿದರೇ ಏನರ್ಥ ಎಂದು ಪ್ರಶ್ನಿಸಿದರು.
ಈ ಹಿಂದೆ ಸಿಎಂ ಆಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ 8 ಸಾವಿರ ಕೋಟಿಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಲಿ. ಕೆಲ ದಿನಗಳ ಹಿಂದೆ ಜಿಲ್ಲಾಡಳಿತದ ಬಳಿ ಅಭಿವೃದ್ಧಿಯ ಅನುದಾನದ ದಾಖಲೆ ಕೇಳಿದ್ದಾರೆ. ದಾಖಲೆಯಲ್ಲಿ ಏನು ಇರುತ್ತೆ ಅಭಿವೃದ್ಧಿ ಕಾರ್ಯಗಳು ಜನರ ಮುಂದೆಯೇ ಸಾಕ್ಷಿ ಗುಡ್ಡೆಗಳಿವೆ. ನಿಮ್ಮ ಎರಡು ವರ್ಷಗಳ ಅವಧಿಯಲ್ಲಿ ಸಿಎಸ್ಆರ್, ಎಂಪಿ ಅನುದಾನದಲ್ಲಿ ಬಸ್ ನಿಲ್ದಾಣ, ಆಟೋ ನಿಲ್ದಾಣ ಮಾಡಿರೋದೆ ಕೇಂದ್ರ ಸಚಿವರ ಸಾಧನೆಯೇ. ನಾನು ಲೋಕಸಭಾ ಸದಸ್ಯನಾದರೇ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಚರ್ಚಿಸಿ ಮೇಕೆದಾಟು ಯೋಜನೆಗೆ ಕೇವಲ 5 ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದು ಜಿಲ್ಲೆಯ ಜನತೆಗೆ ವಾಗ್ದಾನ ಕೊಟ್ಟಿದ್ದರು. ಆದರೆ, ಎಲ್ಲಿ ಅನುಮತಿ ಕೊಡಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ನ್ಯಾಯಾಲಯದ ಮೂಲಕ ಹೋರಾಟ ಮಾಡಿ ಒಪ್ಪಿಗೆ ಪಡೆದಿದ್ದಾರೆ. ಮಾತೆತ್ತಿದರೆ ಮಣ್ಣಿನ ಮಗ ಅಂತಾರೆ ಎರಡು ಬಾರಿ ಸಿಎಂ ಆಗಿ ಜಿಲ್ಲೆಯ ಕೊನೆ ಭಾಗಕ್ಕೆ ಕೆಆರ್ಎಸ್ ಜಲಾಶಯದಿಂದ ನೀರು ಸರಾಗವಾಗಿ ಹರಿಯಲು ನಾಲೆಗಳ ಆಧುನಿಕರಣ ಮಾಡಿದ್ರಾ, ರೈತರ ಸಮಸ್ಯೆಗಳಿಗೆ ಏನಾದ್ರೂ ಶಾಶ್ವತ ಕೊಡುಗೆ ಏನಾದ್ರೂ ಕೊಟ್ಟಿದ್ದಿರಾ. ನಿಮ್ಮ ಬೂಟಾಟಿಕೆ ಎಲ್ಲವನ್ನು ಜನತೆ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಕ್ಷದ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತ ದಿವಂಗತ ಎಂ.ಎಸ್ ಸಿದ್ದರಾಜು ಅವರಿಗೆ ಡಬಲ್ ಬಿ.ಫಾರಂ ನೀಡಿ ಸೋಲಿಸಿದರು. ಬಳಿಕ ನಡೆದ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಅವರ ಬೀಗರನ್ನು ಗೆಲ್ಲಿಸಿ ಕೊಂಡರು ಇವರ ದೊಂಬರಾಟವನ್ನು ಕ್ಷೇತ್ರದ ಜನತೆ ಮರೆತಿಲ್ಲ. ಬೇರೆ ಒಕ್ಕಲಿಗ, ರೈತರ ಮಕ್ಕಳು ಯಾರು ಬೆಳೆಯಬಾರದು ಈಗಷ್ಟೆ ಅವರ ಕುಟುಂಬದಲ್ಲೊಂದು ಕೂಸು ಹುಟ್ಟಿದೆ ಅದಕ್ಕೂ ರಾಜಕೀಯವಾಗಿ ಜಾಗ ಹುಡುಕುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಮಾಜಿ ಸಚಿವರು ಮೊದಲು ಮದ್ದೂರು ನಗರದಲ್ಲಿ ಪಾದಯಾತ್ರೆ ಮಾಡಲಿ ನಿಮ್ಮ ಆಡಳಿತದಲ್ಲಿ ನಡೆದಿರುವ
ಕುಡಿಯುವ ನೀರು, ಒಳಚರಂಡಿ ಅವ್ಯವಸ್ಥೆ ಅವ್ಯವಹಾರಗಳ ಬಗ್ಗೆ ಜನರೇ ಹೇಳ್ತಾರೆ. ಹಳೇ ಪೈಪ್ ಗೆ ಕನೆಕ್ಷನ್ ಕೊಟ್ಟು ಬಿಲ್ ತಗೊಂಡಿದ್ದಾರೆ. ಇದರಲ್ಲಿ ಮಾಜಿ ಶಾಸಕರಿಗೆ ಲಕ್ಷಾಂತರ ರೂಪಾಯಿ ಲಂಚ ಪಡೆಯುವ ಮೂಲಕ ಪಾಲುದಾರರಾಗಿದ್ದಾರೆ. ಒಬ್ಬ ಅಧಿಕಾರಿಯಾಗಿ ಸಾವಿರಾರು ಕೋಟಿ ಆಸ್ತಿ ಎಲ್ಲಿಂದ ಬಂತು ಎಂದು
ಕೆಂಡಾಮಂಡಲರಾದರು.
ಮದ್ದೂರು ತಾಲೂಕಿನಲ್ಲಿ 70 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆ ನೀಡುತ್ತೇನೆ. ಯಾವ ಕೈಗಾರಿಕೆ ತರುತ್ತಾರೆ ಎಂಬುದನ್ನು ಕುಮಾರಸ್ವಾಮಿ ಅವರು ಹೇಳಲಿ. ಅಭಿವೃದ್ಧಿ ಮಾಡೋಕು ಆಸಕ್ತಿ, ಛಲ, ರೈತರ ಕಷ್ಟ ಗೊತ್ತಿರಬೇಕು ಬರಿ ಭಾಷಣ ಮಾಡೋದಲ್ಲ. ಜಿಲ್ಲೆಯ ಜನತೆಗೆ ಪ್ರಮಾಣಿಕವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಇದೇ ವೇಳೆ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಯುವ ಘಟಕದ ಅಧ್ಯಕ್ಷ ಹಿತೈಶ್, ಮುಖಂಡರಾದ ಕೆ.ಎಂ.ರವಿ, ಮಹಾಲಿಂಗಯ್ಯ, ವಿಜಯ್ ಕುಮಾರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BIG NEWS: ರಾಜ್ಯಾಧ್ಯಂತ ಇ-ಸ್ವತ್ತು ತಂತ್ರಾಂಶದಡಿ 1,14,907 ಅರ್ಜಿಗಳನ್ನು ಅನುಮೋದನೆ
ಸಿಗಂದೂರು ಸೇತುವೆ ಬಳಿ ರಸ್ತೆ ತಡೆ ನಡೆಸಿ ರೈತರು ಪ್ರತಿಭಟನೆ: ಜನಪ್ರತಿನಿಧಿಗಳಿಗೆ ತೀ.ನಾ.ಶ್ರೀನಿವಾಸ್ ಈ ಸವಾಲು








