ನವದೆಹಲಿ: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಸಂವಹನ ತೀವ್ರಗೊಳಿಸಿದ್ದಾರೆ. ಗುರುವಾರ ಕತಾರ್, ಓಮನ್, ಜೋರ್ಡಾನ್ ಮತ್ತು ಫ್ರಾನ್ಸ್ ನಾಯಕರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ಅವರು, ಈ ಪ್ರಾಂತ್ಯದಲ್ಲಿ ಶಾಂತಿ ಮರುಸ್ಥಾಪಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಯುದ್ಧದ ನೆಪದಲ್ಲಿ ತೈಲ ಮತ್ತು ಅನಿಲ ಕೇಂದ್ರಗಳ (Energy Infrastructure) ಮೇಲೆ ನಡೆಯುತ್ತಿರುವ ದಾಳಿಗಳನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. “ಇಂತಹ ದಾಳಿಗಳು ಜಾಗತಿಕ ಇಂಧನ ಮಾರುಕಟ್ಟೆಯನ್ನು ಅಸ್ಥಿರಗೊಳಿಸುತ್ತವೆ ಮತ್ತು ಇದು ಒಪ್ಪಲಾಗದ ಸಂಗತಿ” ಎಂದು ಅವರು ತಿಳಿಸಿದ್ದಾರೆ.
ಕತಾರ್ನ ರಾಸ್ ಲಫಾನ್ ಅನಿಲ ಕೇಂದ್ರದ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ, ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ ಭಾರತದ ಬೆಂಬಲ ಸೂಚಿಸಿದ ಮೋದಿ, ಈ ಬಿಕ್ಕಟ್ಟನ್ನು ರಾಜತಾಂತ್ರಿಕತೆಯ ಮೂಲಕ ಬಗೆಹರಿಸಿಕೊಳ್ಳಲು ಕರೆ ನೀಡಿದರು.
ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ ನಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಯಾವುದೇ ಅಡ್ಡಿಯಾಗಬಾರದು ಎಂದು ಮೋದಿ ಆಶಿಸಿದ್ದಾರೆ. ಭಾರತದ ಶೇ. 85ರಷ್ಟು ಕಚ್ಚಾ ತೈಲ ಆಮದು ಈ ಮಾರ್ಗವಾಗಿಯೇ ಬರುವುದರಿಂದ ಇದು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ.
ಸಂಘರ್ಷ ಪೀಡಿತ ದೇಶಗಳಲ್ಲಿರುವ ಸಾವಿರಾರು ಭಾರತೀಯ ಮೂಲದ ನಾಗರಿಕರ ಸುರಕ್ಷತೆಯ ಬಗ್ಗೆ ಓಮನ್ ಮತ್ತು ಜೋರ್ಡಾನ್ ನಾಯಕರೊಂದಿಗೆ ಚರ್ಚಿಸಿದ ಪ್ರಧಾನಿ, ಭಾರತೀಯರ ಸ್ಥಳಾಂತರಕ್ಕೆ ಅವರು ನೀಡುತ್ತಿರುವ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು.
ಫ್ರಾನ್ಸ್ ಸಹಯೋಗ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದ ಮೋದಿ, ಶಾಂತಿ ಸ್ಥಾಪನೆಗಾಗಿ ಉಭಯ ದೇಶಗಳು ನಿಕಟವಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.








