ಎನ್ಸಿಇಆರ್ಟಿ (NCERT) 8ನೇ ತರಗತಿಯ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಕುರಿತ ಅಧ್ಯಾಯದ ಬಗ್ಗೆ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ, ‘ಇದಕ್ಕೆ ಕಾರಣರಾದವರ ಮೇಲೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು’ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
”ಇದೆಲ್ಲವನ್ನೂ ಯಾರು ನೋಡಿಕೊಳ್ಳುತ್ತಿದ್ದಾರೆ? (ಕೌನ್ ದೇಖ್ ರಹಾ ಹೈ ಯೆ ಸಬ್),” ಎಂದು ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿಯವರ ಮಾತನ್ನು ಉಲ್ಲೇಖಿಸಿ ಸರ್ಕಾರಿ ಮೂಲಗಳು ತಿಳಿಸಿವೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ವಿವಾದಿತ ಅಧ್ಯಾಯವನ್ನು ಪಠ್ಯದಲ್ಲಿ ಸೇರಿಸಿರುವುದಕ್ಕೆ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ.
”ನಾವು ನ್ಯಾಯಾಂಗವನ್ನು ಅತ್ಯಂತ ಉನ್ನತ ಗೌರವದಿಂದ ಕಾಣುತ್ತೇವೆ… ನ್ಯಾಯಾಂಗಕ್ಕೆ ಅಗೌರವ ತೋರುವ ಯಾವುದೇ ಉದ್ದೇಶ ಸರ್ಕಾರಕ್ಕಿರಲಿಲ್ಲ. ನಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ… ನ್ಯಾಯಾಂಗದ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಪಾಲಿಸುತ್ತೇವೆ. ನಡೆದಿರುವ ಘಟನೆಯಿಂದ ನನಗೆ ತೀವ್ರ ದುಃಖವಾಗಿದೆ ಮತ್ತು ನಾನು ವಿಷಾದ ವ್ಯಕ್ತಪಡಿಸುತ್ತೇನೆ,” ಎಂದು ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದರು.
ಅದಕ್ಕೂ ಮುನ್ನ, ಎನ್ಸಿಇಆರ್ಟಿ (NCERT) ಪುಸ್ತಕದಲ್ಲಿ “ನ್ಯಾಯಾಂಗದಲ್ಲಿನ ಭ್ರಷ್ಟಾಚಾರ” ಎಂಬ ಉಲ್ಲೇಖದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಕಾರ್ಯದರ್ಶಿ ಮತ್ತು ಎನ್ಸಿಇಆರ್ಟಿ ನಿರ್ದೇಶಕರಿಗೆ ಶೋ-ಕಾಸ್ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಿದೆ.
’ನ್ಯಾಯಾಂಗ ನಿಂದನೆ ಕಾಯ್ದೆ’ ಅಥವಾ ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ವಿವರಣೆ ಕೇಳಿದೆ.
”ನಾವು ಈ ಬಗ್ಗೆ ಆಳವಾದ ತನಿಖೆ ನಡೆಸಲು ಬಯಸುತ್ತೇವೆ. ಇದಕ್ಕೆ ಯಾರು ಜವಾಬ್ದಾರರು ಎಂಬುದನ್ನು ನಾವು ಪತ್ತೆಹಚ್ಚಬೇಕಿದೆ… ಇದಕ್ಕೆ ಕಾರಣರಾದವರು ಶಿಕ್ಷೆ ಅನುಭವಿಸಲೇಬೇಕು (Heads must roll)! ನಾವು ಈ ಪ್ರಕರಣವನ್ನು ಇಲ್ಲಿಗೆ ಮುಚ್ಚುವುದಿಲ್ಲ,” ಎಂದು ಎನ್ಸಿಇಆರ್ಟಿ ಪರ ವಾದ ಮಂಡಿಸುತ್ತಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸುವಾಗ ನ್ಯಾಯಾಲಯ ಹೇಳಿತು.
ಒಂದು ಪ್ರಮುಖ ಆದೇಶದಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಭಾರತ ಮತ್ತು ವಿದೇಶಗಳಲ್ಲಿ ಈ ಪುಸ್ತಕವನ್ನು ನಿಷೇಧಿಸಿದೆ ಮತ್ತು ಎಲ್ಲಾ ಪ್ರತಿಗಳನ್ನು ವಶಪಡಿಸಿಕೊಳ್ಳುವಂತೆ (Seizure) ನಿರ್ದೇಶಿಸಿದೆ. ಪುಸ್ತಕದ ಯಾವುದೇ ಭಾಗವನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಎನ್ಸಿಇಆರ್ಟಿ ಅಧ್ಯಕ್ಷ ಪ್ರೊಫೆಸರ್ ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ನೋಟಿಸ್ ನೀಡಿದೆ.
ಈ ವಿವಾದಿತ ಅಧ್ಯಾಯವನ್ನು ಅನುಮೋದಿಸಿದ ‘ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ’ಯ ಸದಸ್ಯರ ಸಮಗ್ರ ಪಟ್ಟಿ ಮತ್ತು ವಿವರಗಳನ್ನು ಸಲ್ಲಿಸುವಂತೆ ಎನ್ಸಿಇಆರ್ಟಿ ನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಅಲ್ಲದೆ, ಈ ವಿವಾದಿತ ಅಧ್ಯಾಯವನ್ನು ಸಿದ್ಧಪಡಿಸಿದ ‘ಪಠ್ಯಪುಸ್ತಕ ಅಭಿವೃದ್ಧಿ ತಂಡ’ದ (Textbook Development Team) ಸದಸ್ಯರ ನಿರ್ದಿಷ್ಟ ಹೆಸರುಗಳು ಮತ್ತು ಅವರ ಅರ್ಹತೆಗಳ ಬಗ್ಗೆಯೂ ಮಾಹಿತಿ ಕೇಳಿದೆ.
”ಈ ವಿವಾದಿತ ಅಧ್ಯಾಯದ ಬಗ್ಗೆ ಚರ್ಚಿಸಿ ಅಂತಿಮಗೊಳಿಸಲಾದ ಎಲ್ಲಾ ಸಭೆಗಳ ಮೂಲ ದಾಖಲೆಗಳನ್ನು (Minutes of meetings) ಮುಂದಿನ ವಿಚಾರಣೆಯ ದಿನಾಂಕದಂದು ಹಾಜರುಪಡಿಸಬೇಕು,” ಎಂದು ನ್ಯಾಯಾಲಯ ತಿಳಿಸಿದೆ.
ತನ್ನ ಪರವಾಗಿ ಸ್ಪಷ್ಟನೆ ನೀಡಿರುವ ಎನ್ಸಿಇಆರ್ಟಿ, ಇದೊಂದು “ನಿರ್ಣಯದ ತಪ್ಪು” (An error of judgement) ಎಂದು ಕರೆದಿದೆ ಮತ್ತು ಇದಕ್ಕಾಗಿ ಕ್ಷಮೆಯಾಚಿಸಿದೆ.








