ಬೆಂಗಳೂರು: ಯುದ್ಧದ ಹಿನ್ನೆಲೆಯಲ್ಲಿ ಇಂಧನ ಬಿಕ್ಕಟ್ಟು ಮುಂದುವರಿದಿದ್ದು, ರಾಜ್ಯದಾದ್ಯಂತ ಪೆಟ್ರೋಲ್ ಮತ್ತು ಅಡುಗೆ ಅನಿಲಕ್ಕಾಗಿ (LPG) ಸಾರ್ವಜನಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ. ಕೊಪ್ಪಳ, ರಾಯಚೂರು, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್ಗಳ ಮುಂದೆ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದಾರೆ.
ರಾಯಚೂರಿನಲ್ಲಿರುವ 192 ಪೆಟ್ರೋಲ್ ಬಂಕ್ಗಳ ಪೈಕಿ ಬುಧವಾರದಿಂದಲೇ 8 ಬಂಕ್ಗಳು ಕಾರ್ಯನಿರ್ವಹಣೆ ನಿಲ್ಲಿಸಿವೆ. ಇದರಿಂದಾಗಿ ತೆರೆದಿರುವ ಬಂಕ್ಗಳ ಮುಂದೆ ವಿಪರೀತ ದಟ್ಟಣೆ ಉಂಟಾಗಿದ್ದು, ಪರಿಸ್ಥಿತಿ ನಿಭಾಯಿಸಲು ರಾಯಚೂರಿನ ರಾಮಮಂದಿರ ಪೆಟ್ರೋಲ್ ಬಂಕ್ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ನಯಾರಾ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ದರ ಏರಿಕೆ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಜನರು ಇತರ ಬಂಕ್ಗಳತ್ತ ಮುಗಿಬೀಳುತ್ತಿದ್ದಾರೆ. ಕೊಪ್ಪಳದ ಕಾರ್ಗಿಲ್ ಪೆಟ್ರೋಲ್ ಬಂಕ್ ಮುಂದೆ ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿದೆ.
ಅಡುಗೆ ಅನಿಲಕ್ಕಾಗಿ ‘ಕ್ಯೂ’ ನಿಂತ ಜನ
ಬೀದರ್, ಕೊಪ್ಪಳ, ನರಗುಂದ ಮತ್ತು ಕಂಪ್ಲಿ ಭಾಗಗಳಲ್ಲಿ ಅಡುಗೆ ಅನಿಲದ ಕೊರತೆ ತೀವ್ರವಾಗಿದೆ. ಗದಗ ಜಿಲ್ಲೆಯ ನರಗುಂದದಲ್ಲಿ ಜನರು ಸಿಲಿಂಡರ್ಗಳಿಗಾಗಿ ಬೆಳಗಿನ ಜಾವ 4 ಗಂಟೆಯಿಂದಲೇ ಸರತಿಯಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದವು. ಪೊಲೀಸರು ಮತ್ತು ಗೃಹರಕ್ಷಕ ದಳದವರ ಸಮ್ಮುಖದಲ್ಲಿ ಸಿಲಿಂಡರ್ ವಿತರಣೆ ಮಾಡಲಾಯಿತು.
ಹೋಟೆಲ್ ಉದ್ಯಮದ ಮೇಲೆ ಪರಿಣಾಮ
ವಾಣಿಜ್ಯ ಸಿಲಿಂಡರ್ಗಳ ಕೊರತೆಯಿಂದಾಗಿ ಕೊಪ್ಪಳದ ಹಲವು ಸಣ್ಣಪುಟ್ಟ ಹೋಟೆಲ್ಗಳು ಬಾಗಿಲು ಮುಚ್ಚಿವೆ. ಇನ್ನು ಕೆಲವು ಚಹಾ ಅಂಗಡಿಗಳಲ್ಲಿ ಹಾಲಿನ ಕೊರತೆ ಅಥವಾ ಇಂಧನದ ಸಮಸ್ಯೆಯಿಂದಾಗಿ ಕೇವಲ ಮಜ್ಜಿಗೆಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲೂ ಮುಂಜಾನೆ 5 ಗಂಟೆಯಿಂದಲೇ ಗ್ರಾಹಕರು ಗ್ಯಾಸ್ ಗಾಗಿ ಕಾದು ಕುಳಿತಿದ್ದಾರೆ.








