ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಮಂಡಿಸಿದ ಬಜೆಟ್ನಲ್ಲೇ ಅನೇಕ ಘೋಷಣೆಗಳನ್ನು ಕಾರ್ಯರೂಪಕ್ಕೆ ತಂದಿಲ್ಲ. ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ ಹಣವನ್ನು ದುರ್ಬಳಕೆ ಮಾಡಲಾಗಿದೆ. ಓಲೈಕೆ ರಾಜಕಾರಣವನ್ನು ಮಾಡಲಾಗಿದೆ. ಈ ಎಲ್ಲಕ್ಕೂ ಸರ್ಕಾರ ಉತ್ತರ ನೀಡಬೇಕು. ಮುಂದಿನ ಒಂದು ವರ್ಷ ಯಾವುದೇ ರೀತಿಯ ತೆರಿಗೆಗಳನ್ನು ಜನರ ಮೇಲೆ ಹೇರಬಾರದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದು ದೂರದೃಷ್ಟಿಯ ಬಜೆಟ್ ಅಲ್ಲ. ಬದಲಾಗಿ ತುರ್ತಾಗಿ ರೂಪಿಸಿರುವ ಬಜೆಟ್. ಇದರಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ಆರ್ಥಿಕಾಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಒಂದು ಗುಟುಕು ನೀರು ಕೊಡಿ ಎಂದು ಬಜೆಟ್ನಲ್ಲಿ ಕವನ ಉಲ್ಲೇಖಿಸಲಾಗಿದೆ. ಆದರೆ ವಿಶ್ವವಿದ್ಯಾಲಯಗಳಿಗೆ ಅನುದಾನವಿಲ್ಲದೆ ವಿದ್ಯಾರ್ಥಿಗಳು ವಿಷ ಕೊಡಿ ಎಂದು ಕೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಅನುದಾನವಿಲ್ಲದೆ ವಿಷ ಕೊಡಿ ಎಂದು ಹೇಳುತ್ತಿದ್ದಾರೆ. ಶಾಸಕ ರಾಜು ಕಾಗೆ ವಿಧಾನಸೌಧದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕೂಡ ಇದನ್ನೇ ಹೇಳುತ್ತಿದ್ದಾರೆ ಎಂದರು.
ಬಂಡವಾಳ ವೆಚ್ಚಕ್ಕೆ 17.8% ಖರ್ಚು ಮಾಡಲಾಗುತ್ತಿದೆ. ಪ್ರತಿ ವರ್ಷ 26,474 ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದೆ. ರಾಜಸ್ವ ಕೊರತೆ 19,262 ಕೋಟಿ ರೂ. ಇದೆ. ಅಂದರೆ 0.63% ಇದೆ. ಸಾಲದ ಹೊರೆ 7,64,655 ಕೋಟಿ ರೂ. ಇದೆ. ಅಂದರೆ 24% ಇದೆ. ಬಿಜೆಪಿ ಸರ್ಕಾರವಿದ್ದಾಗ 2021-22 ರಲ್ಲಿ 80,641 ಕೋಟಿ ರೂ. ಸಾಲ ಪಡೆಯಲಾಗಿತ್ತು. ಆಗ ಕೋವಿಡ್ ಸಮಯಯವಾಗಿದ್ದು, 50% ಆದಾಯ ಕುಸಿತವಾಗಿತ್ತು. 2022-23 ರಲ್ಲಿ 44,549 ಕೋಟಿ ರೂ. ಸಾಲ ಪಡೆಯಲಾಯಿತು. ಸಿದ್ದರಾಮಯ್ಯನವರು ಬಂದ ನಂತರ ಮೊದಲಿಗೆ 90,280 ಕೋಟಿ ರೂ., ನಂತರ 1,07,006 ಕೋಟಿ ರೂ. ಹಾಗೂ ಈಗ 1,16,000 ಕೋಟಿ ರೂ. ಸಾಲ ಪಡೆಯಲಾಗಿದೆ. ಒಟ್ಟು 7,81,095 ಕೋಟಿ ರೂ. ಸಾಲವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬರೇ 4,91,000 ಕೋಟಿ ರೂ. ಸಾಲ ಮಾಡಿದ್ದಾರೆ. ಆರ್ಥಿಕ ತಜ್ಞರಾದ ಸಿಎಂ ಸಿದ್ದರಾಮಯ್ಯನವರ ಪಾಲು 63% ರಷ್ಟಿದೆ ಎಂದರು.
ಆದಾಯ ಇಲ್ಲ, ಮದ್ಯ ಸೇವನೆಗೆ ಪ್ರೋತ್ಸಾಹ
ಬಂಡವಾಳ ವೆಚ್ಚ ಕ್ರಮೇಣ ಕಡಿಮೆಯಾಗಿದೆ. ಕಳೆದೆರಡು ವರ್ಷಗಳಲ್ಲಿ ಅಭಿವೃದ್ಧಿಗಾಗಿ ಅನುದಾನ ನೀಡಿಲ್ಲ. ಕಳೆದ ಬಾರಿ 1.89 ಲಕ್ಷ ಕೋಟಿ ರೂ. ಆದಾಯ ಅಂದಾಜು ಮಾಡಿದ್ದರೂ ಅಷ್ಟು ಬರಲಿಲ್ಲ. ಈ ಬಾರಿ 2.08 ಲಕ್ಷ ಕೋಟಿ ರೂ. ಗುರಿ ಇದೆ. ಅಷ್ಟು ಬರಲು ಸಾಧ್ಯವೇ ಇಲ್ಲ. ಅಬಕಾರಿ ಇಲಾಖೆಗೆ 40,000 ಕೋಟಿ ರೂ. ಗುರಿ ನೀಡಿದ್ದು, ಮದ್ಯ ಸೇವಿಸುವವರು ಹೆಚ್ಚಾಗಲಿ ಎಂಬುದು ಇದರ ಆಶಯ. ಸಾಲ ಮಾಡುವುದು ಸಮಸ್ಯೆ ಅಲ್ಲ. ಆದರೆ ಮಾಡಿದ ಸಾಲವನ್ನು ಹೇಗೆ ಬಳಸುತ್ತೀರಿ ಎಂಬುದು ಮುಖ್ಯ ಎಂದರು.
2017 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಭಾಷಣ ಮಾಡಿದ್ದರು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ಪಡೆಯಬೇಕು. ತೆಗೆದುಕೊಂಡ ಸಾಲವನ್ನು ಆಸ್ತಿ ಸೃಜನೆಗೆ ಖರ್ಚು ಮಾಡಬೇಕು ಎಂದು ಅವರು ಹೇಳಿದ್ದರು. ಆದರೆ ಈಗ ಕಾಂಗ್ರೆಸ್ ಸಾಲ ಪಡೆದು ಆ ಹಣವನ್ನು ರಾಜಕೀಯಕ್ಕೆ ಬಳಸುತ್ತಿದೆ, ಪ್ರಣಾಳಿಕೆಗೆ ಬಳಸುತ್ತಿದೆ. ಅಭಿವೃದ್ಧಿಯೇತರ ಖರ್ಚು ಮಾಡಬಾರದು ಎಂದೂ ಹೇಳಿದ್ದರು. ಆದರೆ ಈಗ ಸಾಲವನ್ನು ಫ್ರೀ ಯೋಜನೆಗಳಿಗೆ ಬಳಸಲಾಗುತ್ತಿದೆ. ಸಾಲವನ್ನು ಅಭಿವೃದ್ಧಿ ಅಲ್ಲ ವಿಚಾರಗಳಿಗೆ ಖರ್ಚು ಮಾಡಬಾರದು ಎಂದು ಆಗ ಹೇಳಿ ಈಗ ಉಲ್ಟಾ ಆಗಿ ನಡೆದುಕೊಳ್ಳಲಾಗಿದೆ ಎಂದರು.
ಬಜೆಟ್ ಪುಸ್ತಕದಲ್ಲಿ ತೆರಿಗೆಗಳನ್ನು ತೋರಿಸಿಲ್ಲ. ಕಳೆದ ಸಲ ಬಜೆಟ್ ಮಂಡನೆ ನಂತರ, ದಿಢೀರನೆ ತೆರಿಗೆಗಳನ್ನು ಏರಿಸಲಾಗಿದೆ. ನಾನು ಹಿಂದೆ ಕಂದಾಯ ಇಲಾಖೆಯಲ್ಲಿ ಕೆಲ ತೆರಿಗೆಗಳನ್ನು ಕಡಿಮೆ ಮಾಡಿದ್ದರಿಂದಲೇ 1,500 ಕೋಟಿ ರೂ. ಆದಾಯ ಬಂತು. ಈ ಬಾರಿ ಮತ್ತೆ ತೆರಿಗೆಗಳು ಏರಿಕೆಯಾಗಲಿವೆ. ಬಜೆಟ್ನಲ್ಲಿ 17.4% ಮಾತ್ರ ಅಭಿವೃದ್ಧಿಗೆ ಖರ್ಚು ಮಾಡುವುದರಿಂದ ಆರ್ಥಿಕ ಸ್ಥಿತಿ ಕುಸಿಯಲಿದೆ ಎಂದರು.
ಎಸ್ಸಿಎಸ್ ಪಿ, ಟಿಎಸ್ಪಿ ಹಣ ದುರ್ಬಳಕೆ
ಬಜೆಟ್ನ 24% ಹಣ ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡಬೇಕು. ಮುಸ್ಲಿಮರು 14% ಇದ್ದು, 60,000 ಕೋಟಿ ರೂ. ನೀಡಬೇಕೆಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಜನಸಂಖ್ಯೆಯನ್ನೇ ಪರಿಗಣಿಸುವುದಾದರೆ ಪರಿಶಿಷ್ಟ ಜಾತಿ/ವರ್ಗದ 24% ಜನರಿಗೆ 98,701 ಕೋಟಿ ರೂ. ನೀಡಬೇಕು. ಸದ್ಯ 42,017 ಕೋಟಿ ರೂ. ನೀಡಲಾಗುತ್ತಿದೆ ಎಂದರು.
ಪರಿಶಿಷ್ಟ ಸಮುದಾಯಕ್ಕೆ ಹೆಚ್ಚು ಅನುದಾನ ನೀಡಬೇಕೆಂದು ಈ ಹಿಂದೆಯೇ ಯೋಜನಾ ಆಯೋಗ ಹೇಳಿದೆ. ಪರಿಶಿಷ್ಟರಲ್ಲಿ ಲಿಂಗಾನುಪಾತ ಕಡಿಮೆಯಾಗುತ್ತಿದೆ. ಸಾಕ್ಷರತೆ, ಶಿಶು ಮರಣ, ಲಸಿಕೆ, ಕೆಲಸ, ವಿದ್ಯುತ್ ಸೌಲಭ್ಯ, ಕುಡಿಯುವ ನೀರು, ಜಮೀನು ಒಡೆತನ ಮೊದಲಾದವುಗಳಲ್ಲಿ ಅವರು ಹಿಂದುಳಿದಿದ್ದಾರೆ. ಇಂದಿನ ಪರಿಶಿಷ್ಟರ ಪರಿಸ್ಥಿತಿ ಹೇಗಿದೆ ಎಂದು ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದರು.
42,000 ಕೋಟಿ ರೂ. ಹಣವನ್ನು ಎಸ್ಸಿಎಸ್ಪಿ/ಟಿಎಸ್ಪಿ ಗೆ ನೀಡಲಾಗಿದೆ. ಅಂಗನವಾಡಿ ಕಟ್ಟಡ ನಿರ್ಮಿಸಲು ಪರಿಶಿಷ್ಟರಿಗೆ ಸೇರಿದ 4 ಕೋಟಿ ರೂ. ಖರ್ಚು ಮಾಡಲಾಗಿದೆ. ಪ್ರವಾಸೋದ್ಯಮಕ್ಕೂ ಈ ಹಣ ಬಳಸಲಾಗಿದೆ. ಆದರೆ ಇದರಿಂದ ಯಾವ ಪರಿಶಿಷ್ಟರಿಗೆ ಅನುಕೂಲವಾಗಿದೆ? ಅರಣ್ಯ ಇಲಾಖೆಯಡಿ ಹುಲಿ ಹಾಗೂ ಆನೆ ಯೋಜನೆಗೆ ಈ ಹಣವನ್ನು ಬಳಸಲಾಗಿದೆ. ಗ್ರೀನ್ ಇಂಡಿಯಾ ಮಿಶನ್ಗೆ 34 ಕೋಟಿ ರೂ. ನೀಡಲಾಗಿದೆ ಎಂದು ಕಿಡಿಕಾರಿದರು.
ಪರಿಶಿಷ್ಟರಿಗೆ ಮಾತ್ರ ಹಣ ಮೀಸಲಿಡಬೇಕು ಎಂದು ಕೇಂದ್ರ ಸರ್ಕಾರ ಬಹಳ ಹಿಂದೆಯೇ ಹೇಳಿದೆ. ಈ ಸ್ವಾತಂತ್ರ್ಯವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಬೇಕು. ಆದರೆ ಇಲಾಖೆಗೆ ಆ ಸ್ವಾತಂತ್ರ್ಯವೇ ಇಲ್ಲ. ಈ ಕುರಿತು ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ ಪತ್ರ ಬರೆದು ಸೂಚನೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಸ್ವಲ್ಪ ಗೌರವ ತನ್ನಿ ಎಂದರು.
ಬಸ್ ಯೋಜನೆಗೆ ಹಣ
34.25 ಕೋಟಿ ರೂ. ಬಿಎಂಟಿಸಿಗೆ, 42 ಕೋಟಿ ರೂ. ಕೆಎಸ್ಆರ್ಟಿಸಿಗೆ ನೀಡಲಾಗಿದೆ. ಶಕ್ತಿ ಯೋಜನೆಗೆ ಒಟ್ಟು 800 ಕೋಟಿ ರೂ. ನೀಡಲಾಗಿದೆ. ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸುವ ಪರಿಶಿಷ್ಟರನ್ನು ಕಂಡುಹಿಡಿಯುವುದು ಹೇಗೆ? ಅಂದಾಜಿನ ಮೇಲೆ ಈ ಹಣವನ್ನು ಹಂಚಿಕೆ ಮಾಡುವುದು ಅಸಾಧ್ಯ. ಇದು ಪರಿಶಿಷ್ಟರಿಗೆ ಮಾಡಿದ ಮೋಸ. ಪರಿಶಿಷ್ಟರು ಕೂಡ ನಮ್ಮ ಹಕ್ಕು ನಮ್ಮ ಹಣ ಎಂದು ಘೋಷಣೆ ಕೂಗಿದರೆ ಸರ್ಕಾರ ಏನು ಮಾಡುತ್ತದೆ? ಎಂದು ಪ್ರಶ್ನೆ ಮಾಡಿದರು.
ಓಲೈಕೆ ರಾಜಕಾರಣ
ವಕ್ಫ್ ಆಸ್ತಿ ದುರಸ್ತಿಗೆ 150 ಕೋಟಿ ರೂ., ಉರ್ದು ಶಾಲೆಗಳಿಗೆ 500 ಕೋಟಿ ರೂ,, ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಗೆ 1,000 ಕೋಟಿ ಅನುದಾನ ನೀಡಲಾಗಿದೆ. ಇದರ ಜೊತೆಗೆ ಮುಸ್ಲಿಮರಿಗೂ ಧರ್ಮದ ಆಧಾರದಲ್ಲಿ ಮೀಸಲು ನೀಡಲಾಗಿದೆ. ಇದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಅವಕಾಶ ಇಲ್ಲ. ಇದರ ಜೊತೆಗೆ ಮೀಸಲು ಹೆಚ್ಚಿಸಲು ಸಚಿವ ಜಮೀರ್ ಅಹ್ಮದ್ ಪ್ರಯತ್ನ ಮಾಡಿದ್ದಾರೆ. ಇದನ್ನು ಖಂಡಿಸಿ ಜೈನ ಸಮುದಾಯದವರು ಹೋರಾಟ ರೂಪಿಸುತ್ತಿದ್ದಾರೆ. ಜೈನ, ಬೌದ್ಧ, ಸಿಖ್ ಸೇರಿ ಒಟ್ಟು 10 ಕೋಟಿ ರೂ. ಮಾತ್ರ ನೀಡಲಾಗಿದೆ. ಇದು ಅಲ್ಪಸಂಖ್ಯಾತರೊಳಗೆ ಮಾಡಿದ ತಾರತಮ್ಯ ಎಂದರು.
ಮೈಕ್ರೋ ಫೈನಾನ್ಸ್ ಹಾವಳಿಯಿಂದ 30 ಜನರು ಸತ್ತಿದ್ದಾರೆ. ನಿಗಮಗಳ ಮೂಲಕ ಕೊಡಬೇಕಿದ್ದ ಸಾಲದ ಪ್ರಮಾಣ ಕಡಿತವಾಗಿದ್ದರಿಂದ ಜನರು ಮೈಕ್ರೋ ಫೈನಾನ್ಸ್ ಮೊರೆ ಹೋಗಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣಕ್ಕೆ 60 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ಸರ್ಕಾರ 40 ಕೋಟಿ ರೂ. ನೀಡಿದೆ. ಸ್ವಯಂ ಉದ್ಯೋಗಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 45 ಕೋಟಿ ರೂ. ನೀಡಿದೆ. ತಾಂಡಾಗಳ ಅಭಿವೃದ್ಧಿಗೆ ಬಿಜೆಪಿ 110 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 60 ಕೋಟಿ ರೂ. ಗೆ ಇಳಿಸಿದೆ. ಮಠ, ದೇವಾಲಯಗಳಿಗೆ ಬಿಜೆಪಿ 154 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 30 ಕೋಟಿ ರೂ. ನೀಡಿದೆ. ನೇಕಾರರ ಯೋಜನೆಗೆ ಬಿಜೆಪಿ 125 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 10 ಕೋಟಿ ರೂ. ಗೆ ಇಳಿಸಿದೆ ಎಂದರು.
ತೋಟಗಾರಿಕೆ ಇಲಾಖೆಗೆ ಬಿಜೆಪಿ 1,374 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 1,207 ಕೋಟಿ ರೂ. ನೀಡಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಿಜೆಪಿ 20,784 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 20,397 ಕೋಟಿ ರೂ. ನೀಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಜೆಪಿ 333 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 254 ಕೋಟಿ ರೂ. ನೀಡಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆಗೆ ವೇಳೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಏಕೆಂದರೆ ಇಲಾಖೆಯ ಪ್ರಗತಿ ಕೇವಲ 22% ಆಗಿತ್ತು. ಅಲೆಮಾರಿ ಸಮುದಾಯದ ಉತ್ಸವ ನಡೆಸುವ ಬಗ್ಗೆ ಕಳೆದ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಆದರೆ ಬಳಿಕ ಇದನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ಆಕ್ಷನ್ ಟೇಕನ್ ವರದಿಯಲ್ಲಿ ಬರೆದಿದ್ದಾರೆ. ಮಾಜಿ ಸಿಎಂ ಬಂಗಾರಪ್ಪನವರ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಒಂದು ವರ್ಷವಾದರೂ ಇದು ಇನ್ನೂ ಪರಿಶೀಲನೆಯಲ್ಲಿದೆ. ಲೆಕ್ಕಪತ್ರ ಪರಿಶೋಧನೆ ಕಾಯ್ದೆ ಜಾರಿ ತರುವುದಾಗಿ ಹೇಳಲಾಗಿತ್ತು. ಒಂದು ವರ್ಷವಾದರೂ ಇದು ಆಡಳಿತ ಇಲಾಖೆಯಲ್ಲಿ ಪರಿಶೀಲನೆಯಲ್ಲಿದೆ. ಯಾವುದೂ ಜಾರಿಯಾಗದೇ ಇದ್ದಲ್ಲಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದೇಕೆ ಎಂದು ಆರ್.ಅಶೋಕ ಪ್ರಶ್ನೆ ಮಾಡಿದರು.
ರಾಜ್ಯದ ಸೂಪರ್ ಸ್ಪೆಷಾಲಿಟಿ ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಚಿಂತನೆ: ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್