1971ರ ಯುದ್ಧದಲ್ಲಿ ತನ್ನ ದೇಶ ಎರಡು ಹೋಳಾಗುವುದನ್ನು ಕಣ್ಣಾರೆ ಕಂಡಿದ್ದರೂ, ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನ ಇಂದಿಗೂ ತಾನೇ ವಿಜಯಶಾಲಿ ಎಂದು ಸುಳ್ಳು ಪ್ರತಿಪಾದನೆ ಮಾಡುತ್ತಲೇ ಬಂದಿದೆ. ಇದೇ ಕಾರಣಕ್ಕೆ ಪಾಕಿಸ್ತಾನದಿಂದ ಸತ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತದ ವಿರುದ್ಧ ಸದಾ ವಿಷ ಕಾರುವ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಈಗ ಕದನ ವಿರಾಮದ (Ceasefire) ಕುರಿತು ಹಸಿ ಸುಳ್ಳನ್ನು ಹೇಳಿದ್ದಾರೆ. ಆದರೆ, ಅಮೆರಿಕದ ವಿದೇಶಿ ಏಜೆಂಟ್ ನೋಂದಣಿ ಕಾಯ್ದೆ (FARA) ಅಡಿಯಲ್ಲಿ ಬಹಿರಂಗವಾಗಿರುವ ದಾಖಲೆಗಳು ಮುನೀರ್ ವಾದಕ್ಕೆ ತದ್ವಿರುದ್ಧವಾದ ಸತ್ಯವನ್ನು ಬಿಚ್ಚಿಟ್ಟಿವೆ.
ದಾಖಲೆಗಳ ಪ್ರಕಾರ, 2025ರ ಮೇ 6 ಮತ್ತು ಮೇ 9 ರ ನಡುವೆ ಭಾರತದ ‘ಆಪರೇಷನ್ ಸಿಂದೂರ್’ ನಡೆಯುತ್ತಿದ್ದಾಗ, ಪಾಕಿಸ್ತಾನವು ವಾಷಿಂಗ್ಟನ್ನಲ್ಲಿ ರಾಜಕಾರಣಿಗಳು, ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ತೀವ್ರವಾದ ಸಂಪರ್ಕದಲ್ಲಿತ್ತು. ಈ ಅವಧಿಯಲ್ಲಿ ಪಾಕಿಸ್ತಾನವು ವಾಷಿಂಗ್ಟನ್ನಿಂದ 60ಕ್ಕೂ ಹೆಚ್ಚು ದೂರವಾಣಿ ಕರೆಗಳನ್ನು ಮಾಡಿತ್ತು ಎಂಬುದು ಸಾಬೀತಾಗಿದೆ.
ಅಸಿಮ್ ಮುನೀರ್ ನಾಚಿಕೆಯಿಲ್ಲದೆ ಸುಳ್ಳು ಹೇಳಿದ್ದೇಕೆ?
ಸುದ್ದಿ ಸಂಸ್ಥೆ ಎಎನ್ಐ (ANI) ಪರಿಶೀಲಿಸಿದ ದಾಖಲೆಗಳ ಪ್ರಕಾರ, ಪಾಕಿಸ್ತಾನವು ಅಮೆರಿಕದ ಸಂಸದರು, ಕಾಂಗ್ರೆಸ್ ಅಧಿಕಾರಿಗಳು, ಖಜಾನೆ ಅಧಿಕಾರಿಗಳು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ರಕ್ಷಣಾ ಸಿಬ್ಬಂದಿ ಮತ್ತು ಪತ್ರಕರ್ತರೊಂದಿಗೆ ಸುಮಾರು 60 ಬಾರಿ ಮಾತುಕತೆ ನಡೆಸಿರುವುದು ಅಧಿಕೃತ ದಾಖಲೆಗಳಲ್ಲಿ ದಾಖಲಾಗಿದೆ. ಕಳೆದ ವರ್ಷ ‘ಆಪರೇಷನ್ ಸಿಂದೂರ್’ ನಂತರ ಉಂಟಾದ ಸಂಘರ್ಷದ ಬಳಿಕ, ನವದೆಹಲಿಯೇ ಸಂಧಾನ ಮತ್ತು ಕದನ ವಿರಾಮಕ್ಕಾಗಿ ಅಮೆರಿಕವನ್ನು ಸಂಪರ್ಕಿಸಿತ್ತು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಸತ್ಯಾಂಶಗಳು ಹೊರಬಂದಿವೆ.
ರಾವಲ್ಪಿಂಡಿಯ ಜನರಲ್ ಹೆಡ್ ಕ್ವಾರ್ಟರ್ಸ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅಸಿಮ್ ಮುನೀರ್, ಯುದ್ಧದ ಸಮಯದಲ್ಲಿ ಪಾಕಿಸ್ತಾನದ ತಂತ್ರಗಾರಿಕೆಯು ಭಾರತಕ್ಕಿಂತ “ಉನ್ನತ”ವಾಗಿತ್ತು ಎಂದು ಪ್ರತಿಪಾದಿಸಿದ್ದಾರೆ. “ಭಾರತವು ಅಮೆರಿಕದ ನಾಯಕತ್ವದ ಮೂಲಕ ಸಂಧಾನದ ಬಯಕೆಯನ್ನು ವ್ಯಕ್ತಪಡಿಸಿತ್ತು, ಪ್ರಾದೇಶಿಕ ಶಾಂತಿಯ ಹಿತದೃಷ್ಟಿಯಿಂದ ಪಾಕಿಸ್ತಾನ ಅದನ್ನು ಒಪ್ಪಿಕೊಂಡಿತು” ಎಂದು ಮುನೀರ್ ಹೇಳಿದ್ದಾರೆ.
ಟ್ರಂಪ್ ಆಡಳಿತದ ಮೊರೆ ಹೋಗಿದ್ದ ಪಾಕಿಸ್ತಾನ
ಸಂದಾನದ ಬಗ್ಗೆ ಸುಳ್ಳು ಹೇಳುವ ಮೊದಲು ಮುನೀರ್ ಭಾರತದ ವಿರುದ್ಧ ಹಲವು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದರು. ಡೊನಾಲ್ಡ್ ಟ್ರಂಪ್ ಸಂಧಾನಕ್ಕೆ ಅನುವು ಮಾಡಿಕೊಟ್ಟರು ಎಂದು ಪಾಕಿಸ್ತಾನ ಈ ಹಿಂದೆ ಪ್ರತಿಪಾದಿಸಿತ್ತು. ಆದರೆ FARA ದಾಖಲೆಗಳ ಪ್ರಕಾರ, ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತವು ಬಲವಾದ ತಿರುಗೇಟು ನೀಡಲಿದೆ ಎಂದು ಅರಿತ ಪಾಕಿಸ್ತಾನವು ವಾಷಿಂಗ್ಟನ್ನತ್ತ ದೌಡಾಯಿಸಿತ್ತು. ಇದಕ್ಕಾಗಿ ಹಲವಾರು ಲಾಬಿ ಸಂಸ್ಥೆಗಳನ್ನು ನೇಮಿಸಿಕೊಂಡು ಟ್ರಂಪ್ ಆಡಳಿತದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿತ್ತು.
ಪಾಕಿಸ್ತಾನದೊಳಗೆ ಭಾರತ ದಾಳಿ ನಡೆಸಿದ್ದು ಹೇಗೆ?
ಆಪರೇಷನ್ ಆರಂಭವಾದ ನಂತರ ಪ್ರತಿಕ್ರಿಯಿಸಿದ್ದ ಭಾರತ, ಇದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಲು ನಡೆಸಿದ ತ್ರಿವಳಿ ಸೇನಾ (ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ) ಕಾರ್ಯಾಚರಣೆ ಎಂದು ತಿಳಿಸಿತ್ತು. 2025ರ ಮೇ 6 ಮತ್ತು 7ರ ಮಧ್ಯರಾತ್ರಿ ರಕ್ಷಣಾ ಸಚಿವಾಲಯವು ಪ್ರಕಟಣೆ ಹೊರಡಿಸಿ, ಭಯೋತ್ಪಾದನೆಗೆ ಸಂಬಂಧಿಸಿದ ಒಂಬತ್ತು ಸ್ಥಳಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿರುವುದಾಗಿ ಘೋಷಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲು ಪಾಕಿಸ್ತಾನ ಪ್ರಯತ್ನಿಸಿತು; ಆದರೆ ಮೇ 10ರಂದು ಭಾರತವು ಕ್ಷಿಪಣಿ ದಾಳಿಗಳ ಮೂಲಕ ಪಾಕಿಸ್ತಾನದ 11 ವಾಯುನೆಲೆಗಳನ್ನು ಧ್ವಂಸಗೊಳಿಸಿತು. ಭಾರತದ ಕ್ಷಿಪಣಿಗಳನ್ನು ತಡೆಯಲು ಪಾಕಿಸ್ತಾನಕ್ಕೆ ಸಾಧ್ಯವೇ ಆಗಲಿಲ್ಲ.
ಸಿಎನ್ಎನ್ (CNN) ವರದಿಯ ಪ್ರಕಾರ, ಕದನ ವಿರಾಮದ ಮಾತುಕತೆಗಳು ಹಲವಾರು ದಿನಗಳಿಂದ ನಡೆಯುತ್ತಿದ್ದವು. ಅಂತಿಮವಾಗಿ ಎರಡೂ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ (DGMOs) ನಡುವೆ ಹಾಟ್ಲೈನ್ ಸಂಭಾಷಣೆ ನಡೆದ ನಂತರವಷ್ಟೇ ಕದನ ವಿರಾಮದ ಅಧಿಕೃತ ಒಪ್ಪಂದಕ್ಕೆ ಬರಲಾಯಿತು. ಭಾರತದ ಭೀಕರ ದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನದ ಡಿಜಿಎಂಒ ಅವರೇ ಭಾರತೀಯ ಕೌಂಟರ್ ಪಾರ್ಟ್ಗೆ ಕರೆ ಮಾಡಿದ್ದರು. ಈ ಇಡೀ ಅವಧಿಯಲ್ಲಿ ಭಾರತವು ವಾಷಿಂಗ್ಟನ್ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಪರ್ಕವನ್ನು ಆರಂಭಿಸಿರಲಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ.








