ಶಿವಮೊಗ್ಗ: “ನಗರಸಭೆಯಲ್ಲಿ ಚುನಾಯಿತ ಸದಸ್ಯರು ಇಲ್ಲ ಎಂದು ಅಧಿಕಾರಿಗಳು ಬೀಗಬಾರದು. ಬಡವರ ಕೆಲಸಗಳನ್ನು ಮಾಡಿಕೊಡಲು ವಿಳಂಬ ಮಾಡಿದರೆ ಅಥವಾ ಜನರನ್ನು ಪದೇಪದೇ ಅಲೆಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು” ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲಸದಲ್ಲಿ ವಿಳಂಬ: ಕಂದಾಯ ನಿರೀಕ್ಷಕಿಗೆ ತರಾಟೆ
ಕಳೆದ ಎರಡೂವರೆ ವರ್ಷಗಳಿಂದ ಸಾರ್ವಜನಿಕರಿಗೆ ‘ಈ-ಸ್ವತ್ತು’ ಮಾಡಿಕೊಡದೆ ಸತಾಯಿಸುತ್ತಿದ್ದ ಕಂದಾಯ ನಿರೀಕ್ಷಕಿ ಮಮತಾ ಅವರನ್ನು ಶಾಸಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. “ಬಡವರ ಕೆಲಸಗಳನ್ನು ಮಾಡುವಲ್ಲಿ ಇಂತಹ ವಿಳಂಬ ನೀತಿ ಅನುಸರಿಸಿದರೆ ಸುಮ್ಮನಿರುವುದಿಲ್ಲ” ಎಂದು ಎಚ್ಚರಿಸಿದರು.
ರಸ್ತೆ ಅಗಲೀಕರಣಕ್ಕೆ ಕಟ್ಟುನಿಟ್ಟಿನ ಸೂಚನೆ
ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಹಣ ಬಿಡುಗಡೆಯಾಗಿದ್ದರೂ ಜಾಗ ಬಿಟ್ಟುಕೊಡಲು ಕೆಲವರು ಹಿಂದೇಟು ಹಾಕುತ್ತಿರುವ ಬಗ್ಗೆ ಅಧಿಕಾರಿಗಳು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು:
-
ಕಾನೂನು ಪ್ರಕಾರ ತಕ್ಷಣವೇ ನೋಟಿಸ್ ನೀಡಿ.
-
ಕೊನೆಯ ಬಾರಿಗೆ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿ.
-
ಬಗ್ಗದಿದ್ದಲ್ಲಿ ‘ದಂಡಂ ದಶಗುಣಂ’ ಎಂಬಂತೆ ಅತಿಕ್ರಮಣ ತೆರವುಗೊಳಿಸಿ ರಸ್ತೆ ಕಾಮಗಾರಿ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ವೇಗ
-
ಒಳಚರಂಡಿ ಯೋಜನೆ: ಈ ಹಿಂದೆ ಮಂಜೂರಾಗಿದ್ದ 70 ಕೋಟಿ ರೂ.ಗಳಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗ ಮತ್ತೆ 35 ಕೋಟಿ ರೂ. ಮಂಜೂರು ಮಾಡಿಸಲಾಗಿದ್ದು, ತಕ್ಷಣವೇ ಅಪೂರ್ಣ ಕಾಮಗಾರಿಗಳನ್ನು ಮುಗಿಸಬೇಕು.
-
ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್: 4.80 ಕೋಟಿ ರೂ. ವೆಚ್ಚದ ರಂಗಮಂದಿರ ನಿರ್ಮಾಣ ಕುರಿತು ಕಲಾವಿದರು ಮತ್ತು ಸಂಘ-ಸಂಸ್ಥೆಗಳ ಸಭೆ ಕರೆದು ಚರ್ಚಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು.
-
ಆಶ್ರಯ ನಿವೇಶನ: 20 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ನಿವೇಶನಗಳಾಗಿ ಪರಿವರ್ತಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು.
ಜನ್ನತ್ ನಗರ ನಿವಾಸಿಗಳ ಸಮಸ್ಯೆಗೆ ಸ್ಪಂದನೆ
ಇಕ್ಕೇರಿ ಅಘೋರೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ 136 ಕುಟುಂಬಗಳಿಗೆ ಈ-ಸ್ವತ್ತು ಸಿಗದಿರುವ ಬಗ್ಗೆ ಶಾಸಕರು ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಜಾಗದ ಸರ್ವೇ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಕುರಿತು ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ
ಬಿಸಿಲು ಹೆಚ್ಚಿರುವುದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ವಹಿಸಿ. ಅವಶ್ಯಕತೆ ಇರುವ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ. ಅಷ್ಟೇ ಅಲ್ಲದೆ, ಎಲ್ಲಾ 31 ವಾರ್ಡ್ಗಳಲ್ಲಿ ಸ್ವಚ್ಛತಾ ಲೋಪವಾಗದಂತೆ ಗಮನ ಹರಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ನಗರಸಭೆ ಯೋಜನಾಧಿಕಾರಿ ರಂಗಸ್ವಾಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಶೀಲ್ದಾರ್ ಪ್ರದೀಪ್, ಶಾಸಕರ ಆಪ್ತ ಕಾರ್ಯದರ್ಶಿಗಳಾದ ಶ್ರೀನಿವಾಸ್, ರಮೇಶ್ ಟಿ.ಪಿ., ಮದನ್, ಬಾಲಚಂದ್ರ, ಸುರೇಶ್ ಬಾಬು, ಗಣಪತಿ ಮಂಡಗಳಲೆ, ಮಧುಮಾಲತಿ, ಮಕ್ಬೂಲ್ ಇತರರು ಉಪಸ್ಥಿತರಿದ್ದರು.
BIG NEWS: ‘ಸಕಾಲ’ ಸೇವೆಗೆ ಸಚಿವ ಕೃಷ್ಣ ಬೈರೇಗೌಡ ‘ಡಿಜಿಟಲ್’ ಬಲ: ಲಂಚದ ಹಾವಳಿ ಮತ್ತು ವಿಳಂಬಕ್ಕೆ ಬ್ರೇಕ್
Rain In Karnataka: ಮುಂದಿನ ಎರಡು ದಿನ ರಾಜ್ಯಾಧ್ಯಂತ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ








