ಬೆಂಗಳೂರು: 2018ನೇ ಸಾಲಿನ ರೂ.1.00 ಲಕ್ಷ ಸಾಲ ಮನ್ನ ಯೋಜನೆಯಡಿ ರಾಮನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಡಿ.ಸಿ.ಸಿ. ಬ್ಯಾಂಕಿಗೆ ಆಧ್ಯರ್ಪಿತಗೊಂಡ ಮತ್ತು ಸ್ವಂತ ಬಂಡವಾಳದಲ್ಲಿ ಸಾಲ ನಿಡುವ ಸಹಕಾರ ಸಂಘಗಳಲ್ಲಿ 86,305 ರೈತ ಸದಸ್ಯರಿಗೆ ರೂ 359.52 ಕೋಟಿ ರೂ ಗಳ ಸಾಲ ಮನ್ನ ಮಾಡಲು ಅರ್ಹತೆಯನ್ನು ಗುರುತಿಸಿ ಹಸಿರು ಪಟ್ಟಿ ತಯಾರಿಸಿದ್ದು, ಈ ಪೈಕಿ 2018 -19, 2019-20 ಮತ್ತು 2020-21ರಲ್ಲಿ 80,257 ರೈತರ ರೂ. 345.08 ಕೋಟಿಗಳ ಸಾಲ ಮನ್ನಾ ಅನುದಾನ ಬಿಡುಗಡೆ ಮಾಡಲಾಗಿದೆ. 6048 ರೈತರಿಗೆ ರೂ. 14.45 ಕೋಟಿಗಳ ಸಾಲ ಮನ್ನ ಬಿಡುಗಡೆ ಬಾಕಿ ಇದ್ದು ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಸಹಕಾರ ಸಂಘಗಳು ಒಳಗೊಂಡಂತೆ ರಾಜ್ಯದ ಸಹಕಾರ ಸಂಘಗಳಲ್ಲಿ ಹಸಿರು ಪಟ್ಟಿ ರೈತರ ಪೈಕಿ ಬಾಕಿ ಇರುವ 31,003 ರೈತರಿಗೆ ರೂ. 167.51 ಕೋಟಿಗಳನ್ನು ಮತ್ತು ಅರ್ಹತೆ ಗುರಿತಿಸಲು ಬಾಕಿ ಇರುವ ರೈತರಿಗೆ ಸಂಬಂಧಿಸಿದಂತೆ ರೂ. 64.49 ಕೋಟಿ ಒಟ್ಟಾರೆ ಅಂದಾಜು ರೂ 232.00 ಕೋಟಿಗಳಿಗೆ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದ್ದು, ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿರುತ್ತದೆ ಎಂದು ತಿಳಿಸಿದರು.
2017ನೇ ಸಾಲಿನ ರೂ. 50,000/- ಗಳ ಸಾಲ ಮನ್ನ ಯೋಜನೆಯಡಿ ರಾಮನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಡಿ.ಸಿ.ಸಿ ಬ್ಯಾಂಕಿಗೆ ಅಧ್ಯರ್ಪಿತಗೊಂಡ ಮತ್ತು ಸ್ವಂತ ಬಂಡವಾಳದಲ್ಲಿ ಸಾಲ ನೀಡುವ ಸಹಕಾರ ಸಂಘಗಳ 86,703 ರೈತ ಸದಸ್ಯರಿಗೆ ರೂ. 360.86 ಕೋಟಿಗಳ ಸಾಲ ಮನ್ನಾ ಕ್ಲೇಂ ಮಾಡಿದ್ದು, ಈ ಪೈಕಿ 2017-18 ಮತ್ತು 2018-19ರಲ್ಲಿ 82,899 ರೈತರ 345.07 ಕೋಟಿಗಳ ಸಾಲ ಮನ್ನಾ ಅನುದಾನ ಬಿಡುಗಡೆ ಮಾಡಲಾಗಿತ್ತು. 2023-24ನೇ ಸಾಲಿನಲ್ಲಿ ಮಾರ್ಚ್ 28ರಂದು, 3,804 ರೈತರಿಗೆ ರೂ. 15.79 ಕೋಟಿಗಳ ಸಾಲ ಮನ್ನಾ ಅನುದಾನವನ್ನು ಬಿಡುಗಡೆ ಮಾಡಿದ್ದು, ಇದರಿಂದ ಪೂರ್ಣ ಮೊತ್ತ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.