ರಾಯಚೂರು : ಸಹಕಾರಿ ಸಂಘಗಳು ಮತ್ತು ಖಾಸಗಿ ಮಳಿಗೆಗಳಲ್ಲಿ ಗೊಬ್ಬರ ದಾಸ್ತಾನು ಇರುವ ಬಗ್ಗೆ ಪ್ರತಿದಿನ ಫಲಕದ ಮೂಲಕ ಮಾಹಿತಿ ನೀಡಬೇಕು. ಸರಿಯಾಗಿ ಮಾಹಿತಿ ನೀಡದ ಖಾಸಗಿ ಮಾರಾಟಗಾರರನ್ನು ಬ್ಲ್ಯಾಕ್ ಲಿಸ್ಟ್ಗೆ ಸೇರಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಸೂಚನೆ ನೀಡಿದರು.
ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ರಸಗೊಬ್ಬರ ವಿತರಣೆ ವಿಷಯದ ಬಗ್ಗೆ ಚರ್ಚೆ ನಡೆಸಲಾಯಿತು.
ಪ್ರಸಕ್ತ ಸಾಲಿನಲ್ಲಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗೊಬ್ಬರ ಪೂರೈಕೆ ಆಗಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಕೃಷಿ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು. ರಸಗೊಬ್ಬರದ ಕೊರತೆ ಇರುವ ಬಗ್ಗೆ ತಿಳಿಸಿದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
1.45,000 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು
ರಾಯಚೂರು ಜಿಲ್ಲೆಯಲ್ಲಿ ಕಾಪು ದಾಸ್ತಾನು 6027 ಮೆಟ್ರಿಕ್ ಟನ್ ಪೈಕಿ 2527.48 ಮೆಟ್ರಿಕ್ ಟನ್ ಲಭ್ಯವಿದ್ದು, ರಿಟೇಲ್ ಮಾರಾಟಗಾರರಲ್ಲಿ 57,763 ಮೆ. ಟನ್ ರಸಗೊಬ್ಬರ ಲಭ್ಯವಿರುತ್ತದೆ. ಜಿಲ್ಲೆಗೆ 1,50,000 ಮೆಟ್ರಿಕ್ ಟನ್ ಬೇಡಿಕೆ ಇದ್ದು ಪೈಕಿ ಇದುವರೆಗೆ 1.45,000 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಪ್ರಕಾಶ್ ಚವ್ಹಾಣ್ ಸಭೆಗೆ ಮಾಹಿತಿ ನೀಡಿದರು.
ರೈತರಿಗೆ ಗೊಬ್ಬರ ಸರಿಯಾಗಿ ತಲುಪುತ್ತಿಲ್ಲ
ರೈತರಿಗೆ ಗೊಬ್ಬರ ಸರಿಯಾಗಿ ತಲುಪುತ್ತಿಲ್ಲ. ಯಾರಿಗೆ ಕೊಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರೂ ಆಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರುವಿಹಾಳ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕರೆಮ್ಮ ಜಿ ನಾಯಕ ಹಾಗೂ ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಅವರು, ಸಕಾಲಕ್ಕೆ ಗೊಬ್ಬರ ಸಿಗದೇ ರೈತರು ಪರದಾಡುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಗೆ ಸರಿಯಾದ ವ್ಯವಸ್ಥೆಯಾಗಬೇಕು ಎಂದು ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ರುದ್ರಾಗೌಡ ಮಹಾಂತಗೌಡ ಹಾಗೂ ಸೋಮಶೇಖರ ಪಾಟೀಲ ಸಲಹೆ ಮಾಡಿದರು.
ಶೇ.32ರಷ್ಟು ಮಳೆ ಕೊರತೆ
ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಶೇ.69ರಷ್ಟು ಹೆಚ್ಚಿನ ಮಳೆಯಾಗಿದೆ. ಜೂನ್ ಮತ್ತು ಜುಲೈನಲ್ಲಿ ಶೇ.32ರಷ್ಟು ಮಳೆ ಕೊರತೆಯಿಂದ ತೊಗರಿ ಮತ್ತು ಹತ್ತಿ ಬೆಳೆಗಳು ನಲುಗುತ್ತಿವೆ. ಜಿಲ್ಲೆಯಲ್ಲಿ 5.53 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಪೈಕಿ ಇದುವರೆಗೆ ಶೇ.48 ಹೇಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 37 ರೈತ ಸಂಪರ್ಕ ಕೇಂದ್ರಗಳಿಂದ 4856.23 ಕ್ವಿಂಟಾಲ್ನಷ್ಟು ಭತ್ತ, ತೊಗರಿ, ಸಜ್ಜೆ, ಹೆಸರು, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬಿತ್ತನೆ ಬೀಜ ದಾಸ್ತಾನು ಮಾಡಿ ಇದುವರೆಗೆ ರಿಯಾಯಿತಿ ದರದಲ್ಲಿ 3245.21 ಕ್ವಿಂಟಾಲ್ ಬೀಜ ವಿತರಣೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ತನಿಖೆಗೆ ಸೂಚನೆ
ಬೇರೆ ಬೇರೆ ತಾಲೂಕುಗಳಲ್ಲಿ ಜಲಧಾರೆ ಯೋಜನೆಯ ಕಾಮಗಾರಿಯು ಕಳಪೆಯಾಗಿದೆ. ಎಂದು ಶಾಸಕರು ತಿಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಾಸಕರು ನೀಡಿದ ದೂರಿನ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಜಲಧಾರೆ ಕಾಮಗಾರಿ ಕಳಪೆಯ ಬಗ್ಗೆ ಮಸ್ಕಿ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿ ಕಾಮಗಾರಿ ಕಳಪೆ ಎಂದು ಕಂಡುಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಶಿಕ್ಷೆಗೆ ಗುರಿಪಡಿಸಲು ವಾರದೊಳಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓಗೆ ಸಚಿವರು ನಿರ್ದೇಶಿಸಿದರು.
ಟೋಲ್ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ
ದೇವದುರ್ಗ ತಾಲೂಕಿನಲ್ಲಿ ಮಾತ್ರ 40 ಕೀ.ಮಿ.ಯೊಳಗೆ ಎರಡು ಟೋಲ್ ಅಳವಡಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಈ ಅನ್ಯಾಯ ಸರಿಪಡಿಸಲೇಬೇಕು. ಇದನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ಎಂದು ಶಾಸಕರಾದ ಕರೆಮ್ಮ ಜಿ ನಾಯಕ ಅವರು ಪಟ್ಟುಹಿಡಿದರು. 33 ಪಂಚಾಯಿತಿಗಳಿಗೆ ಕೇವಲ 6 ಜನ ಪಿಡಿಓ ಇದ್ದಾರೆ. ಎಲ್ಲ ಪಂಚಾಯಿತಿಗಳಿಗೆ ಪಿಡಿಓ ನೇಮಕಾತಿಯಾಗಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಲೋಕೋಪಯೋಗಿ ಸಚಿವರೊಂದಿಗೆ ತಾವು ಮಾತನಾಡುತ್ತೇನೆ, ಸದ್ಯಕ್ಕೆ ತಾತ್ಕಾಲಿಕವಾಗಿ ಟೋಲು ಸ್ಥಗಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಶರಣಗೌಡ ಪಾಟೀಲ ಬಯ್ಯಾಪುರ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾಮಯ್ಯ ಮುರಾರಿ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಬೆಂಗಳೂರಿನ ಎಲ್ಲಾ ನಿವೇಶನಗಳಿಗೆ ಕಾನೂನು ಉದ್ದೇಶಕ್ಕೆ ‘ಅಧಿಕೃತ ಎ-ಖಾತಾ’ ನೀಡಲು ಸಂಪುಟದ ನಿರ್ಧಾರ | BBMP E-Khata