ಬೆಂಗಳೂರು: ಬಿಎಂಟಿಸಿಯಲ್ಲಿ ಸಾರಿಗೆ ಆಶಾಕಿರಣ ಯೋಜನೆಯಡಿ 28100 ನೌಕರರ ಕಣ್ಣಿನ ತಪಾಸಣೆ ನಡೆಸಲಾಯಿತು. ಅಲ್ಲದೇ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ಜೊತೆಗೆ ಮೃತ ಬಿಎಂಟಿಸಿ ನೌಕರರ ಅವಲಂಬಿತರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪರಿಹಾರದ ಚೆಕ್ ವಿತರಣೆ ಮಾಡಿದರು.
ಇಂದು ಬಿ.ಎಂ.ಟಿ.ಸಿ ಯು ಸಿ-ಕ್ಯಾಂಪ್ ಸಹಯೋಗದಲ್ಲಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ 50 ಘಟಕಗಳಲ್ಲಿ ಹಾಗೂ 4 ಕಾರ್ಯಾಗಾರಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ತಪಾಸಣೆಗೆ ಒಳಪಡುವ ನೌಕರರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ಅವರು, ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ರೂ.50 ಲಕ್ಷ ಹಾಗೂ ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಅಕಾಲಿಕ ಮರಣ ಹೊಂದಿದ ನೌಕರರ ಅವಲಂಬಿತರಿಗೆ ರೂ.10 ಲಕ್ಷ ಚೆಕ್ ವಿತರಣೆ ಮಾಡಲಾಗುತ್ತಿದೆ. ಅದರಂತೆ 2024ರ ಫೆಬ್ರವರಿ–2025ರ ಏಪ್ರಿಲ್ ವರೆಗೆ 107 ನೌಕರರ ಕುಟುಂಬಗಳಿಗೆ ರೂ. 7.3 ಕೋಟಿ ಪರಿಹಾರ ಪಾವತಿ ಮಾಡಲಾಗಿದೆ ಎಂದರು.
ಇಂದು 12 ಸಿಬ್ಬಂದಿಗಳ ಕುಟುಂಬಕ್ಕೆ, ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಅಕಾಲಿಕ ಮರಣ ಹೊಂದಿದ ನೌಕರರ ಅವಲಂಬಿತರಿಗೆ ರೂ.10 ಲಕ್ಷ ಚೆಕ್ ವಿತರಣೆ ಮಾಡಲಾಗಿದೆ. ನಾನು ಒಂದೇ ವಿಷಯವನ್ನು ಪದೇ ಪದೇ ಹೇಳುತ್ತಿದ್ದೇನೆ, ಸಿಬ್ಬಂದಿಗಳ ಜೀವ ಅಮೂಲ್ಯ, ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬದವರೊಡನೆ ಸಂಸ್ಥೆ ಸದಾ ನಿಲ್ಲುತ್ತದೆ. ಆರ್ಥಿಕವಾಗಿ ಎಷ್ಟು ಸಹಾಯ ಮಾಡಲು ಸಾಧ್ಯವೋ ಅದನ್ನೆಲ್ಲವನ್ನು ನಾವು ಮಾಡುತ್ತಿದ್ದೇವೆ, ಮಕ್ಕಳ ವಿದ್ಯಾಭ್ಯಾಸ, ಮುಂದಿನ ಜೀವನೋಪಾಯಕ್ಕೆ ಒಂದು ದಾರಿ ಆಗಲಿ ಎಂಬ ಸದುದ್ದೇಶ ನಮ್ಮದಾಗಿದೆ ಎಂದು ತಿಳಿಸಿದರು.
ಬಿ.ಎಂ.ಟಿ ಸಿ ಯು ಏರೋ ಇಂಡಿಯಾ–2025 ಕಾರ್ಯಕ್ರಮದಲ್ಲಿ ಶ್ಲಾಘನೀಯ ಸೇವೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಶ್ಲಾಘನಾ ಪತ್ರ ನೀಡಿದ್ದಾರೆ. 3 ದಿನಗಳಲ್ಲಿ, 364 ಬಸ್ಸುಗಳು, 199 ವಿಶೇಷ ಸಾರಿಗೆ ಸೇವೆಗಳು, 16,932 ಪ್ರಯಾಣಿಕರು ರೂ. 75.40 ಲಕ್ಷ ಆದಾಯಗಳಿಸಿದೆ. ಪ್ರಯಾಣಿಕರ ಸೇವೆಯಲ್ಲಿಯೂ ಮುಂಚೂಣಿಯಲ್ಲಿದೆ ಎಂದರು.
ಸಿಬ್ಬಂದಿಗಳು ಹಾಗೂ ಅವರ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ ಉತ್ತೇಜಿಸುವುದು ನಮ್ಮ ಕರ್ತವ್ಯ, ಹೆಮ್ಮೆ ಮತ್ತು ಗೌರವವೆಂದು ನಾವು ಭಾವಿಸಿದ್ದೇವೆ. ಅದರಂತೆ ಇಂದು ಮಾಸ್ಟರ್ ಗೇಮ್ಸ್–2025 ದಲ್ಲಿ ಕಬಡ್ಡಿ ಪ್ರಥಮ ಸ್ಥಾನ, ವಾಲಿಬಾಲ್ ತೃತೀಯ ಸ್ಥಾನ ಪಡೆದಿರುವ ಬಿ.ಎಂ.ಟಿ.ಸಿ ತಂಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ಮಾಡಿದರು.
1. ಕುಮಾರಿ ಸಹನಾ ಎಸ್.ವಿ (ಕೃಷಿ ಎಂ.ಎಸ್ಸಿ, ಚಿನ್ನದ ಪದಕ) ಚಾಲಕ ವೈದ್ಯಪ್ಪ (ಘಟಕ 33)ರ ಪುತ್ರಿ.
2. ಕುಮಾರಿ ಸೌಮ್ಯ (ಎಸ್.ಎಸ್.ಎಲ್.ಸಿ – 621/625) ಚಾಲಕ ಲಕ್ಷ್ಮೀಕಾಂತ (ಘಟಕ 45)ರ ಪುತ್ರಿಗೆ ಗೌರವಿಸಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಎನ್ ವಿ. ಪ್ರಸಾದ್ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳು, ರಾಮಚಂದ್ರನ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬಿ.ಎಂ.ಟಿ.ಸಿ, ಶಿಲ್ಪಾ, ಭಾಅಸೇ, ನಿರ್ದೇಶಕರು ( ಮಾಹಿತಿ ತಂತ್ರಜ್ಞಾನ), ಅಹದ್ ನಿರ್ದೇಶಕರು ( ಭದ್ರತೆ) ಬಿ.ಎಂ.ಟಿ.ಸಿ ಮತ್ತು ಸಿ-ಕ್ಯಾಂಪ್ ನ ಪ್ರತಿನಿಧಿಗಳು ಭಾಗವಹಿಸಿದ್ದರು.
BREAKING: ಸಿಯುಇಟಿ ಪಿಜಿ ಫಲಿತಾಂಶ 2025 ಪ್ರಕಟ | CUET PG Result 2025
BIG NEWS: KAS ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: KPSC ಸ್ಪಷ್ಟನೆ