ಬೆಂಗಳೂರು: ಮೋದಿ ಸರ್ಕಾರ ಸಂಸತ್ತಿನಲ್ಲಿ ಯಾವುದೇ ಚರ್ಚೆ ಮಾಡದೇ ವಿಬಿ ಜಿ ರಾಮ್ ಜಿ ಮಸೂದೆ ಅಂಗೀಕರಿಸಿದ್ದಾರೆ. ಮನರೇಗಾ ಯೋಜನೆ ಕಾಯ್ದೆ ಸುಧಾರಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇವರು ಸುಧಾರಿಸಿಯೂ ಇಲ್ಲ, ಸಬಲೀಕರಣ ಮಾಡಿಲ್ಲ. ಮನರೇಗಾ ಕಾಯ್ದೆಯನ್ನು ತೆಗೆದು ಹಾಕಿದ್ದಾರೆ ಎಂಬುದಾಗಿ ಕೇಂದ್ರ ಸರ್ಕಾರದ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕಳೆದ 19-20 ವರ್ಷಗಳಿಂದ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಜೀವನೋಪಾಯದ ಗ್ಯಾರಂಟಿ ನೀಡಿತ್ತು. ಮೋದಿ ಸರ್ಕಾರ ಈ ಗ್ಯಾರಂಟಿ ಕಸಿದುಕೊಂಡಿದೆ. ಬೇಡಿಕೆ ಆಧಾರಿತ ಯೋಜನೆ, ವಿತರಣೆ ಆಧಾರಿತ ಯೋಜನೆಯಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿತ್ತು. ಈಗ ಇದು ಕಾಯ್ದೆಯಾಗಿ ಉಳಿದಿಲ್ಲ. ಇತರೆ ಸರ್ಕಾರಿ ಯೋಜನೆಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಮೋದಿ ಸರ್ಕಾರ ವಿಬಿ ಜಿ ರಾಮ್ ಜಿ ಬಿಲ್ ತಂರುವ ಮೂಲಕ 3 ಪ್ರಮುಖ ಸಂವಿಧಾನಿಕ ಹಕ್ಕು ಮೊಟಕುಗೊಳಿಸಿದೆ.ಜೀವನೋಪಾಯದ ಹಕ್ಕು ಕಸಿದಿರುವುದು, ಪಂಚಾಯಿತಿಗಳ ಹಕ್ಕು ಕಸಿದಿದೆ. ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯದೇ ರಾಜ್ಯದ ಮೇಲೆ ಆರ್ಥಿಕ ಹೊರೆ ಹಾಕಿದ್ದಾರೆ ಹೇಳಿದ್ದಾರೆ.
ಮನರೇಗಾದಲ್ಲಿ ಉದ್ಯೋಗದ ಹಕ್ಕು ಎಂದು ಇತ್ತು. ಹೊಸ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಉದ್ಯೋಗ ಎಂದು ಮಾಡಲಾಗಿದೆ. ಈ ಮಸೂದೆಯ ಸೆಕ್ಷನ್ 5ನಲ್ಲಿ ಕೇಂದ್ರ ಸರ್ಕಾರ ಪ್ರತಿ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ನೀಡಲಾಗುವ ಅನುದಾನದ ಮೇಲೆ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಇನ್ನು ಸೆಕ್ಷನ್ 5(1)ರಲ್ಲಿ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆಗೊಳಿಸಿದ ಪ್ರದೇಶಗಳಲ್ಲಿ ಅನುದಾನ ನೀಡುತ್ತದೆ. ಈ ರೀತಿ ಅನುದಾನ ನೀಡಿದ ನಂತರ ಆ ಭಾಗದ ಉದ್ಯೋಗ ಕಾರ್ಡ್ ಹೊಂದಿರುವವರು ಕೆಲಸ ಮಾಡಬಹುದು ಎಂದು ಹೇಳಿದೆ. ಈ ಹಿಂದೆ ಒಬ್ಬ ವ್ಯಕ್ತಿ ಮನರೇಗಾ ಉದ್ಯೋಗ ಕಾರ್ಡ್ ಹೊಂದಿದ್ದರೆ ಆತ ಎಲ್ಲಿ ಬೇಕಾದರೂ ಹೇಗಿ ಕೆಲಸ ಮಾಡುವ ಅವಕಾಶವಿತ್ತು. ಈಗ ಈ ಅವಕಾಶವನ್ನು ಕಸಿದುಕೊಳ್ಳಲಾಗಿದೆ.
ಮನರೇಗಾ ಯೋಜನೆಯಲ್ಲಿ ವರ್ಷದ 365ದಿನಗಳಲ್ಲಿ ಯಾವಾಗ ಬೇಕಾದರೂ ಮಾಡಬಹುದಾಗಿತ್ತು. ಆದರೆ ವಿಬಿ ಜಿ ರಾಮ್ ಜಿ ಮಸೂದೆಯಲ್ಲಿ ಕೃಷಿಯ ಚಟುವಟಿಕೆಯ ಹೆಚ್ಚಾಗಿರುವ ಸಮಯದಲ್ಲಿ 60 ದಿನ ಈ ಯೋಜನೆಯಡಿ ಉದ್ಯೋಗ ಮಾಡುವಂತಿಲ್ಲ ಎಂದು ಸೆಕ್ಷನ್ 6 (1)ನಲ್ಲಿ ತಿಳಿಸಿದೆ.
ಕಟಾವು ವೇಳೆಯಲ್ಲಿ ಮನರೇಗಾ ಮೂಲಕ ಕನಿಷ್ಠ ವೇತನ ಸಿಗುತ್ತದೆ. ಈಗ ಹೊಸ ಕಾಯ್ದೆ ಮೂಲಕ ಕೃಷಿ ಚಟುವಟಿಕೆ ವೇಳೆ ಉದ್ಯೋಗ ಸಿಗದಿರುವ ಕಾರಣ ಕಾರ್ಮಿಕರು ಜಮೀನುದಾರರು ಕೊಟ್ಟಷ್ಟು ಕೂಲಿಗೆ ಅವರ ಬಳಿ ಹೋಗಿ ದುಡಿಯಬೇಕಾಗಿದೆ. ಈ ಸಮಯದಲ್ಲಿ ಈ ಕಾರ್ಮಿಕರಿಗೆ ಕನಿಷ್ಠ ವೇತನದ ರಕ್ಷಣೆ ಇರುವುದಿಲ್ಲ. ಕೃಷಿ ಕಾರ್ಮಿಕರು ಸಿಗುತ್ತಿಲ್ಲ ಎಂಬುದಕ್ಕೆ ಕೇಂದ್ರ ಸರ್ಕಾರದ ಬಳಿ ಯಾವ ದಾಖಲೆ, ಅಂಕಿ ಅಂಶಗಳಿವೆ?
ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ವರ್ಷ ವೇತನ ಪರಿಷ್ಕರಣೆಯಾಗುತ್ತಿತ್ತು. ಆದರೆ ಹೊಸ ಯೋಜನೆಯಲ್ಲಿ ಇದನ್ನು ತೆಗೆದುಹಾಕಲಾಗಿದೆ. ಮನರೇಗಾದಲ್ಲಿ ಪಂಚಾಯಿತಿಗಳ ಮೂಲಕ ಕೆಲಸ ಕೈಗೊಳ್ಳುತ್ತಿದ್ದರು. ಈಗ ಈ ಕೆಲಸಗಳನ್ನು ನಿರ್ಧರಿಸುವವರು ಗ್ರಾಮಸ್ಥರು ನಿರ್ಧರಿಸುವುದಿಲ್ಲ. ದೆಹಲಿಯಲ್ಲಿ ಕೂತಿರುವವರು ನಿರ್ಧಾರ ಮಾಡುತ್ತಾರೆ. ಪಿ.ಎಂ ಗತಿಶಕ್ತಿ ಮಾಸ್ಟರ್ ಪ್ಲಾನ್ ಜೊತೆ ಸೇರಿಸಿದ್ದಾರೆ. ಪಿಎಂ ಗತಿಶಕ್ತಿ ಎಂಬುದು 500 ಕೋಟಿಗೂ ಹೆಚ್ಚು ಮೊತ್ತದ ಕೇಂದ್ರ ಸರ್ಕಾರ ಯೋಜನೆಗಳ ಮೇಲುಸ್ತುವಾರಿ ಮಾಡುವ ಪೋರ್ಟಲ್ ಆಗಿದೆ. ನೀವು ಈ ಪಿಎಂ ಗತಿ ಶಕ್ತಿ ಪೋರ್ಟಲ್ ನಲ್ಲಿ ನಿಮ್ಮ ಹೊಲದ ಕೆಲಸದ ಬಗ್ಗೆ ಮಾಹಿತಿ ಹಾಕಲು ಸಾಧ್ಯವೇ?
ಮನರೇಗಾದಲ್ಲಿ ಕೇಂದ್ರ ಸರ್ಕಾರದ ಅನುದಾನವಿತ್ತು. ಈಗ 60:40 ಅನುಪಾತದಲ್ಲಿ ರಾಜ್ಯ ಸರ್ಕಾರದ ಮೇಲೆ ಹೊರೆ ಹಾಕಿದ್ದಾರೆ. ಸೆಕ್ಷನ್ 22(1)ರಲ್ಲಿ ಇದರ ತಿಳಿಸಲಾಗಿದೆ. ನಿಮ್ಮ ಪಂಚಾಯ್ತಿ ಅಧಿಸೂಚನೆ ಹೊರಡಿಸಬೇಕು. ನಂತರ ಕೇಂದ್ರ ಸರ್ಕಾರದ ಮಾನದಂಡಗಳ ಅನುಸಾರ ಇರಬೇಕು. ನಂತರ 60:40 ಅನುಪಾತದಲ್ಲಿ ರಾಜ್ಯ ಸರ್ಕಾರ ಅನುದಾನ ನೀಡಬೇಕು. ಈ ಯೋಜನೆಯಲ್ಲಿ ಹೆಚ್ಚುವರಿ ವೆಚ್ಚವಾದರೆ ಅದನ್ನು ರಾಜ್ಯ ಸರ್ಕಾರವೇ ಭರಿಸಬೇಕು. 100% ಕೇಂದ್ರ ಸರ್ಕಾರದ ಯೋಜನೆಯಾಗಿದ್ದ ಈ ಯೋಜನೆ ಈಗ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಪರಿವರ್ತನೆಯಾಗಿದೆ.
ಪಾರದರ್ಶಕತೆಗಾಗಿ ನಾವು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದೇವೆ. ತಂತ್ರಜ್ಞಾನ ಅಳವಡಿಸಿಕೊಂಡಾಗ ಯೋಜನೆ ಸಶಕ್ತವಾಗಬೇಕು. ಆದರೆ ಕೇಂದ್ರ ಸರ್ಕಾರ ಬಯೋಮೆಟ್ರಿಕ್, ಜಿಯೋ ಸ್ಪೇಷಲ್ ತಂತ್ರಜ್ಞಾನ, ಜಿಯೋ ಮ್ಯಾಪಿಂಗ್, ಎಐ ಸೇರಿದಂತೆ ಅನೇಕ ತಂತ್ರಜ್ಞಾನ ಕೈಗೊಂಡಿದ್ದಾರೆ. ಈ ಸರ್ಕಾರ ತಂತ್ರಜ್ಞಾನ ಹೆಸರಲ್ಲಿ ಜನರನ್ನು ಉದ್ಯೋಗದಿಂದ ದೂರ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಡಿಜಿಟಲ್ ಲಿಂಕ್ ಆಗಿಲ್ಲ ಎಂದು 38% ಹಾಗೂ ಮತ್ತೆ ಕೆಲವು ರಾಜ್ಯಗಳಲ್ಲಿ 63% ನಷ್ಟು ಕಾರ್ಮಿಕರಿಗೆ ವೇತನವೇ ಸಿಕ್ಕಿಲ್ಲ. ಇಷ್ಟೆಲ್ಲಾ ತಂತ್ರಜ್ಞಾನ ಅಳವಡಿಸಿಕೊಂಡಿದ್ದರೂ 16.6% ನಷ್ಟು ಬೇಡಿಕೆ ಕಮ್ಮಿಯಾಗಿದೆ. ಇದು ಗ್ರಾಮೀಣ ಪ್ರದೇಶದ ಜನರಿಗೆ ಜೀವನೋಪಾಯ ನೀಡುವ ರೀತಿಯೇ?
ಮನರೇಗಾ ಯೋಜನೆಯಲ್ಲಿ ನಾವು ಗ್ರಾಮೀಣದ ಆಸ್ತಿಗಳನ್ನು ನಿರ್ಮಾಣ ಮಾಡಬಹುದಾಗಿತ್ತು. ಗ್ರಾಮ ಸಭೆ ನಡೆಸಿ, ಗ್ರಾಮಸ್ಥರಿಗೆ ಏನು ಬೇಕು, ಪಂಚಾಯ್ತಿಗಳಿಗೆ ಏನು ಬೇಕು ಎಂದು ನಿರ್ಧಾರ ಮಾಡಬಹುದಿತ್ತು. ಕಳೆದ ಎರಡೂವರೆ ವರ್ಷದಲ್ಲಿ 17 ಲಕ್ಷ ಹಳ್ಳಿ ಮಟ್ಟದಲ್ಲಿ ಆಸ್ತಿ ಸೃಜನೆ ಮಾಡಲಾಗಿದೆ. 80 ಲಕ್ಷ ಕುಟುಂಬಗಳಿಗೆ ಜೀವನೋಪಾಯ ನೀಡಿದ್ದೇವೆ. 21,144 ಕೋಟಿ ವೆಚ್ಚ ಮಾಡಿದ್ದೇವೆ. ಕೇಂದ್ರ ಸರ್ಕಾರದ ಬದಲಾವಣೆಯಿಂದ ಈ ಯೋಜನೆಯಲ್ಲಿ ಗುತ್ತಿಗೆ ಆಧಾರಿತ ಕಾಮಗಾರಿಗಳತ್ತ ಸಾಗುವಂತಾಗಿದೆ. ಸೆಕ್ಷನ್ 21 (2)ನಲ್ಲಿ ಗುತ್ತಿಗೆದಾರರನ್ನು ಬಳಸಿಕೊಂಡು ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮನರೇಗಾ ಯೋಜನೆಯಲ್ಲಿ ಗುತ್ತಿಗೆದಾರ ಎಂಬ ಹೆಸರೇ ಇರಲಿಲ್ಲ. ಉದಾಹರಣೆಗೆ ಪ್ರಾಥಮಿಕ ಶಾಲೆಯನ್ನು ಕಟ್ಟುತ್ತಿರುವಾಗ ಅದರ ಕಾಂಪೌಂಡ್ ಅನ್ನು ಉದ್ಯೋಗ ಖಾತರಿಯಿಂದ ಕಟ್ಟಿದರೆ ಇಲ್ಲಿ ಯೋಜನೆಗಳ ಸಮ್ಮಿಳಿತವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಕ್ರಾಮಿಕರು ಗುತ್ತಿಗೆದಾರರ ಅಡಿಯಲ್ಲಿ ದುಡಿಯಬೇಕಾಗುತ್ತದೆ. ಮನರೇಗಾದಲ್ಲಿ ಎಲ್ಲಾ ಪಂಚಾಯ್ತಿಗೆ ಅನುದಾನ ಬರುತ್ತಿತ್ತು. ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಅಧಿಸೂಚನೆಗೊಂಡ ಪಂಚಾಯ್ತಿಗಳಿಗೆ ಮಾತ್ರ ಅನುದಾನ ಬರುತ್ತದೆ.
ಇದೆಲ್ಲದರ ಜೊತೆಗೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆಯ ನಿಯಮ ಉಲ್ಲಂಘಿಸಿದೆ. ಕೇಂದ್ರ ಸರ್ಕಾರಕ್ಕೆ ಕೇವಲ ಕನ್ನಡಿಗರ ದುಡಿಮೆ ಹಾಗೂ ಬೇವರು, ತೆರಿಗೆ, ಸಾಮರ್ಥ್ಯ, ಪ್ರತಿಭೆ ಮಾತ್ರ ಬೇಕಾಗಿದೆ. ಅವರ ವಿಕಸಿತ ಭಾರತದ ಕನಸನ್ನು ಕನ್ನಡಿಗರು ನನಸು ಮಾಡಬೇಕಿದೆ. ಅವರು ನಮಗೆ ಪ್ರತಿಯಾಗಿ ಕೊಡುವುದು ಚೊಂಬು.
ಸಂವಿಧಾನದ ಆರ್ಟಿಕಲ್ 280 ಪ್ರಕಾರ ಹಣಕಾಸು ಆಯೋಗವನ್ನು ರಚಿಸಿದೆ. ಇದು ದೇಶದಲ್ಲಿ ರಾಜ್ಯಗಳ ನಡುವೆ ವಿವಿಧ ಹಂತಗಳಲ್ಲಿ ಆರ್ಥಿಕ ಹಣಕಾಸು ಹಂಚಿಕೆ ಮಾಲಾಗುತ್ತದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರದ ಆಯವ್ಯಯದ ಸಂಬಂಧದ ತೀರ್ಮಾನ ಮಾಡಲಾಗುವುದು. ಅಲ್ಲದೆ ರಾಜ್ಯಗಳಿಂದ ಬಂದ ಆದಾಯವನ್ನು ವಿವಿಧ ರಾಜ್ಯಗಳಿಗೆ ಮರು ಹಂಚಿಕೆ ಮಾಡಲಾಗುವುದು. ಜೊತೆಗೆ ಹಣಕಾಸು ಆಯೋಗ ಪಂಚಾಯ್ತಿ, ಮುನ್ಸಿಪಲ್, ನಗರ ಸ್ಥಳೀಯ ಸಂಸ್ಥೆಗಳ ಬೇಡಿಕೆ ನುಸಾರ ಹಂಚಿಕೆ ಮಾಡುವ ಜವಾಬ್ದಾರಿ ಹೊಂದಿದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಆಯವ್ಯದಲ್ಲಿ ತಾರತಮ್ಯವಾಗದೇ, ಎಲ್ಲವೂ ಕೇಂದ್ರೀಕೃತವಾಗದಂತೆ ನೋಡಿಕೊಳ್ಳುವುದು ಅದರ ಜವಾಬ್ದಾರಿ.
16ನೇ ಹಣಕಾಸು ಆಯೋಗ ತನ್ನ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 60:40 ಅನುದಾನ ಹಂಚಿಕೆ ಮಾಡುವ ವಿಚಾರವಾಗಿ ರಾಜ್ಯಗಳ ಜೊತೆ ಕೇಂದ್ರ ಸರ್ಕಾರ ಚರ್ಚೆ ನಡೆಸಿದೆಯೇ? 16ನೇ ಹಣಕಾಸು ಆಯೋಗಕ್ಕೆ ತಿಳಿಸಿದೆಯೇ? ಪ್ರತಿ ವರ್ಷ ನಮಗೆ 3-4 ಸಾವಿರ ಕೋಟಿ ರಾಜ್ಯ ಸರ್ಕಾರ ನೀಡಬೇಕು ಎಂದರೆ ಹಣಕಾಸು ಆಯೋಗಕ್ಕೆ ಮಾಹಿತಿ ನೀಡಿದ್ದೀರಿ. ಇದರೊಂದಿಗೆ ಕೇಂದ್ರ ಸರ್ಕಾರ ಸಂವಿಧಾನದ ಆರ್ಟಿಕಲ್ 280 ಉಲ್ಲಂಘನೆ ಮಾಡಿದೆ. ಇನ್ನು ಆರ್ಟಿಕಲ್ 258 ಅನ್ನು ಉಲ್ಲಂಘನೆ ಮಾಡಿದೆ. 60:40 ಅನುಪಾದದ ಅನುದಾನ ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರ ಯಾರ ಜೊತೆ ಚರ್ಚೆ ಮಾಡಿದೆ. ಮೋದಿ ವರು ರಾತ್ರಿ ಕನಸು ಕಂಡು, ಬೆಳಗ್ಗೆ ಮಸೂದೆ ತರುತ್ತಾರೆ. ರಾಜ್ಯ ಸರ್ಕಾರಗಳು ಎಳ್ಲದಕ್ಕೂ ತಲೆ ಅಲ್ಲಾಡಿಸಿಕೊಂಡು ಕೂರಬೇಕಾ? ಪಂಚಾಯ್ತಿ ಹಕ್ಕು, ಜೀವನೋಪಾಯ, ರಾಜ್ಯ ಸರ್ಕಾರಗಳ ಹಕ್ಕು ಮೊಟಕುಗೊಳಿಸುತ್ತಿದೆ. ಈ ಸರ್ಕಾರ ಸಂವೂರ್ಣವಾಗಿ ಅಸಂವಿಧಾನಿಕವಾಗಿ ಕಾರ್ಯ ನಿರ್ವಹಿಸುತ್ತಿದೆ.
ವಿಬಿ ಜಿ ರಾಮ್ ಜಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯಾಗಲಿದೆ. ಕನಿಷ್ಠ ವೇತನ ಮರೆಮಾಚಿ ಶೋಷಣೆ ಆರಂಭವಾಗುತ್ತದೆ. ಇದರಿಂದ ಈಗಿರುವ 58% ಮಹಿಳೆಯರ ಔದ್ಯೋಗಿಕ ಭಾಗವಹಿಸುವಿಕೆ, ಕ್ರಮೇಣ ಕಡಿಮೆಯಾಗಲಿದೆ.
ತಮ್ಮ ಆರ್ಥಿಕ ಪರಿಸ್ಥಿತಿ ಬಹಳ ಉತ್ತಮವಾಗಿದೆ ಎನ್ನುವ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಯೋಜನೆಗಳನ್ನು ರಾಜ್ಯ ಸರ್ಕಾರಗಳ ಇನುದಾನ ಪಾಲು ಹೆಚ್ಚಳ ಮಾಡುತ್ತಿರುವುದೇಕೆ?
ಕೇಂದ್ರ ಸರ್ಕಾರ ಗಾಂಧಿಜಿ ಅವರ ಹೆಸರು ತೆಗೆದಿದೆ ಎಂಬ ವಿಚಾರಕ್ಕೆ ಮಾತ್ರ ನಾವು ಇದನ್ನು ವಿರೋಧ ಮಾಡುತ್ತಿಲ್ಲ. ನಿಮಗೆ ಗಾಂಧಿಜಿ ಮೇಲೆ ದ್ವೇಷ ಇದೆ ಎಂದು ನಮಗೆ ಗೊತ್ತಿದೆ. ಆ ದ್ವೇಷವನ್ನು ನಮ್ಮ ಯುವ ಜನತೆ ಹಾಗೂ ಗ್ರಾಮೀಣ ಭಾಗದ ಜನರ ಮೇಲೆ ತೀರಿಸಿಕೊಳ್ಳುತ್ತಿರುವುದೇಕೆ? ನಿಮಗೆ ನಾಥುರಾಮ್ ಗೋಡ್ಸೆ ಇಷ್ಟವಾದರೆ, ಅವರ ಹೆಸರನ್ನೇ ಇಡಿ. ಜಿ ನಾಥುರಾಮ್ ಜಿ ಅಂತಲೇ ಹೆಸರಿಡಿ. ಆದರೆ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಪಂಚಾಯ್ತಿ ಮಟ್ಟ ಬಲಪಡಿಸಿ, ಗ್ರಾಮಗಳ ಆಸ್ತಿ ಸೃಜನೆ ಮಾಡಿ. ಮೋದಿ ಸರ್ಕಾರ ಬಂದ ನಂತರ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಯಾವ ಯೋಜನೆ ತಂದಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಈಗ, ಗ್ರಾಮೀಣ ಭಾಗದ ಜನರ ಜೀವನುಪಾಯ ಹಕ್ಕು ಕಸಿಯುತ್ತಿದ್ದಾರೆ.
ರೈತರ ಕಾನೂನನ್ನು ಅವರು ಹೇಗೆ ಹಿಂಪಡೆದರೋ, ಇದನ್ನು ಅದೇ ರೀತಿ ಹಿಂಪಡೆಯಲಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಜನರಿಗೆ ಅಸಮಾಧಾನವಿದೆ. ಜನ ಬೀದಿಗಿಳಿಯುತ್ತಾರೆ. ಈ ಜನ ವಿರೋಧಿ ನೀತಿಯನ್ನು ನಮ್ಮ ಸರ್ಕಾರ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.








