ತುಮಕೂರು : ಸರ್ವೋನ್ನತ ನ್ಯಾಯಾಲಯಕ್ಕೆ ಡಿಮ್ಡ್ ಅರಣ್ಯ ಕುರಿತಂತೆ 2022ರಲ್ಲಿ ಸಲ್ಲಿಸಲಾಗಿರುವ ಪ್ರಮಾಣಪತ್ರದಲ್ಲಿರುವ ಎಲ್ಲ ಪರಿಭಾವಿತ ಅರಣ್ಯದ ಜಂಟಿ ಸರ್ವೆ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ತುಮಕೂರಿನಲ್ಲಿಂದು ಹಾಸನ ವೃತ್ತದ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಬಾಕಿ ಇರುವ ಜಂಟಿ ಸರ್ವೆ ನಡೆಸಲು ಮತ್ತು ಈಗಾಗಲೇ ಜಂಟಿ ಸರ್ವೆ ಪೂರ್ಣಗೊಂಡಿರುವ ಸರ್ವೆ ನಂಬರ್ ಗಳ ನಕ್ಷೆ ನೀಡುವಂತೆ ಉಪ ವಿಭಾಗಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಲು ಸೂಚಿಸಿದರು.
ಕಂದಾಯ ಇಲಾಖೆಯವರು ಸರ್ವೆ ಮಾಡುತ್ತಿಲ್ಲ ಎಂದು ನೆಪ ಹೇಳದೆ, ಜಂಟಿ ಸರ್ವೆಗೆ ನಿಯಮಾನುಸಾರ ಅರ್ಜಿ ಸಲ್ಲಿಸಲು ಮತ್ತು ಜಿಲ್ಲಾಧಿಕಾರಿಯವರಿಗೆ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಈ ಸಂಬಂಧ ಲಿಖಿತ ಮನವಿ ಸಲ್ಲಿಸಿ ಆದಷ್ಟು ಶೀಘ್ರ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದೀರ್ಘ ಕಾಲದಿಂದ ಬಾಕಿ ಇರುವ ಅರಣ್ಯ ಅಪರಾಧ, ಒತ್ತುವರಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ವಹಿಸುವಂತೆ ಈ ಸಂಬಂಧ ಸರ್ಕಾರಿ ವಕೀಲರಿಗೆ ಸೂಕ್ತ ದಾಖಲೆ, ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಮತ್ತು ಸೆಕ್ಷನ್ 4 ಆಗಿರುವ ಜಮೀನುಗಳ ವಿಚಾರದಲ್ಲಿ ಎಫ್.ಎಸ್.ಓ.ಗಳೊಂದಿಗೆ ಸಹಕರಿಸಿ ಶೀಘ್ರ ಸೆಕ್ಷನ್ 17 ಆಗುವಂತೆ ಕ್ರಮವಹಿಸಲೂ ಈಶ್ವರ ಖಂಡ್ರೆ ಸೂಚಿಸಿದರು.
ಒತ್ತುವರಿ ತೆರವಿಗೆ ಕ್ರಮಕ್ಕೆ ಸೂಚನೆ:
ರಾಜ್ಯ ಸರ್ಕಾರ 2015ರಲ್ಲಿ ಕೈಗೊಂಡಿರುವ ತೀರ್ಮಾನಕ್ಕೆ ಬದ್ಧರಾಗಿ ಪಟ್ಟಾ ಜಮೀನು ಮತ್ತು ಜೀವನೋಪಾಯಕ್ಕಾಗಿ ಮಾಡಿಕೊಂಡಿರುವ ಅರಣ್ಯ ಒತ್ತುವರಿ ಎರಡೂ ಸೇರಿ 3 ಎಕರೆಗಿಂತ ಕಡಿಮೆ ಇರುವ ಸಣ್ಣ ಒತ್ತುವರಿದಾರರಿಗೆ ತೊಂದರೆ ನೀಡದೆ, 3 ಎಕರೆಗಿಂತ ಹೆಚ್ಚಿನ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡು, ತೆರವು ಮಾಡಿಸಿ ಎಂದು ಅರಣ್ಯ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನೆಡುವ ಗಿಡಕ್ಕೆ ಲೆಕ್ಕ ಇಡಿ:
ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗದಿಂದ ಮತ್ತು ಪ್ರಾದೇಶಿಕ ಅರಣ್ಯ ವಿಭಾಗದಿಂದ ಪ್ರತಿ ವರ್ಷ ವನಮಹೋತ್ಸವದ ವೇಳೆ ಪ್ರತಿ ವಲಯದಲ್ಲಿ ಸಾವಿರಾರು ಸಸಿ ನೆಡುತ್ತಿದೆ. ಆದರೆ ಈ ರೀತಿ ನೆಟ್ಟ ಸಸಿಗಳ ಪೈಕಿ ಎಷ್ಟು ಬದುಕಿ ಉಳಿದಿದೆ ಎಂಬ ಬಗ್ಗೆ ನಿಖರ ಮಾಹಿತಿ ಇರಬೇಕು. ಅದಕ್ಕೆ ಲೆಕ್ಕ ಇಡಬೇಕು. ಜಿಯೋ ಟ್ಯಾಗ್ ಮಾಡಿ, ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಅರಣ್ಯ ಇಲಾಖೆಯ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡಬೇಕು. ಸಸಿ ನೆಡುವ – ಹಸಿರು ಹೊದಿಕೆ ಹೆಚ್ಚಿಸುವ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ಇಲ್ಲವಾದರೆ ಸಂಬಂಧಿತ ವಲಯ ಅರಣ್ಯಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದೂ ಈಶ್ವರ ಖಂಡ್ರೆ ಎಚ್ಚರಿಸಿದರು.