ದಕ್ಷಿಣ ಕನ್ನಡ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿ ಮೇಲ್ಮಹಡಿ ಸಭಾಂಗಣದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಕುಕ್ಕೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ 30ನೇ ಮಾಸ್ಟರ್ ಪ್ಲಾನ್ ಸಮಿತಿ ಸಭೆ ನಡೆಯಿತು.
ಈ ಸಭೆಯಲ್ಲಿ ಸುಮಾರು ರೂ.26 ಕೋಟಿ ವೆಚ್ಚದ ಸುತ್ತು ಪೌಳಿ ನಿರ್ಮಾಣ ಕೆಲಸ, ರಥ ಬೀದಿಯ ಬಲಭಾಗದಲ್ಲಿ ಸುಮಾರು 5000 ಜನ ಏಕಕಾಲದಲ್ಲಿ ಕುಳಿತುಕೊಳ್ಳುವ ಭೋಜನ ಶಾಲೆ, ಅಂದಾಜು 80 ರಿಂದ 100 ಕೋಟಿ ವೆಚ್ಚದಲ್ಲಿ ಇಂಜಾಡಿ ಬಳಿ ಯಾತ್ರಿಕರಿಗೆ 820 ಕೊಠಡಿಗಳ ವಸತಿ ಯೋಜನೆ, ರಥಬೀದಿಯ ಇಕ್ಕೆಲದಲ್ಲಿ ಪಾರಂಪರಿಕ ಕಟ್ಟಡ ನಿರ್ಮಾಣ, ಆಧುನಿಕ ಶೌಚಾಲಯ, ಡಾರ್ಮೆಟರಿ ನಿರ್ಮಾಣ, ಈ ಹಿಂದಿನ ವಸತಿ ಗೃಹಗಳಿಗೆ ಕಾಯಕಲ್ಪ, ನೌಕರರಿಗೆ ನೂತನ ವಸತಿ ಗೃಹ ನಿರ್ಮಾಣ, ಕಸ ವಿಲೇವಾರಿ ಘಟಕ, ವ್ಯಾಪಾರ ಮಳಿಗೆ ನಿರ್ಮಾಣ, ಅರಂಪಾಡಿ-ಎಡೋಳಿ ಮೂಲಕ ಸುಬ್ರಹ್ಮಣ್ಯಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಯಿತು.
ಲೋಕೋಪಯೋಗಿ ಅಭಿಯಂತರ ಪ್ರಮೋದ್ ಕುಮಾರ್ ಅವರು ಯೋಜನೆಯಡಿ ನಿರ್ಮಿಸಬೇಕಾದ ಕಟ್ಟಡಗಳ ನೀಲ ನಕ್ಷೆಯನ್ನು ಸಚಿವರಿಗೆ ತೋರಿಸಿ ಅದರ ಬಗ್ಗೆ ವಿವರಿಸಿದರು. ಮಾಸ್ಟರ್ ಪ್ಲಾನ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ದೇವಸ್ಥಾನದ ಸಮಿತಿಯವರು ತಮ್ಮ ನಿರ್ಧಾರ ಕೈಗೊಳ್ಳಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಿದ್ದು, ಸರಕಾರ ಅನುಮೋದನೆ ನೀಡಿದ ಕೂಡಲೇ ಕಾಮಗಾರಿ ಆರಂಬಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮಾಜಿ ಸಚಿವ ರಮಾನಾಥ ರೈ, ಶಾಸಕಿ ಭಾಗೀರಥಿ ಮುರುಳ್ಯ, ರಾಜ್ಯ ಮುಜರಾಯಿ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ದ.ಕ. ಜಿಲ್ಲಾ ಮುಜರಾಯಿ ಆಯುಕ್ತ ಗೋವಿಂದ ನಾಯ್ಕ್, ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜು, ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ, ಮಲ್ಲಿಕಾ ಪಕ್ಕಳ, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ.ಡಿ, ವಲಯಾರಣ್ಯಾಧಿಕಾರಿ ವಿಮಲ್ ಬಾಬು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ಪ್ಲಾನ್ ಸಮಿತಿ ಸದಸ್ಯರು, ಲೋಕೋಪಯೋಗಿ, ಕೆಎಸ್ಆರ್ಟಿಸಿ, ಕಂದಾಯ ಮೊದಲಾದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ