ಮಂಗಳೂರು: ಬಂದರು ನಗರಿ ಮಂಗಳೂರಿನ ಪ್ರಸಿದ್ಧ ಗರೋಡಿ ಕ್ಷೇತ್ರದ ಉತ್ಸವ ಸಂದರ್ಭದಲ್ಲಿ ‘ಕೋಳಿ ಅಂಕ’ ನಡೆಸುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ‘ಕೋಳಿ ಅಂಕ’ವು ಉತ್ಸವ ಸಂದರ್ಭದ ಮೋಜಿನ ಆಟವಾಗಿದೆಯೇ ಹೊರತು ಜಾತ್ರಾ ಸಂಪ್ರದಾಯದ ಭಾಗ ಅಲ್ಲ ಎಂದು ಆಸ್ತಿಕರ ಹೇಳಿಕೊಂಡರೆ, ಇನ್ನೂ ಕೆಲವರು ಈ ಸ್ಪರ್ಧೆಗೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ.
ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಾಕಾರಿ ಪೋಸ್ಟ್’ಗಳು ಹರಿದಾಡುತ್ತಿವೆ ಎಂದು ಆರೋಪಿಸಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯೂ ಆದ ಬಿಲ್ಲವ ಸಮುದಾಯದ ಮುಖಂಡ ಪದ್ಮರಾಜ್ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರನ್ನಾಧರಿಸಿ ಮಂಗಳೂರಿನ ಕಂಕನಾಡಿ ಠಾಣೆ ಪೊಲೀಸರು FIR ದಾಖಲಿಸಿದ್ದಾರೆ.
ಏನಿದು ಆರೋಪ?
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “Kalyug Kalki Post” ಎಂಬ ಶೀರ್ಷಿಕೆಯಡಿ ಒಂದು ದುರುದ್ದೇಶಪೂರಿತ ಹಾಗೂ ಪ್ರಚೋದನಾತ್ಮಕ ಪೋಸ್ಟ್ ಹರಿದಾಡುತ್ತಿದೆ. ಈ ಪೋಸ್ಟ್ನಲ್ಲಿರುವ ವಿಷಯವು ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹದ್ದಾಗಿದ್ದು, ಸಮಾಜದಲ್ಲಿ ಅಶಾಂತಿ, ವೈಮನಸ್ಸು ಹಾಗೂ ಶಾಂತಿ ಭಂಗಕ್ಕೆ ಕಾರಣವಾಗುವ ಅಪಾಯವನ್ನು ಹೊಂದಿದೆ ಎಂಬುದಾಗಿ ಆರೋಪಿಸಲಾಗಿತ್ತು.
ಸಾಮಾಜಿಕ ಮಾಧ್ಯಮಗಳಂತಹ ಸಾರ್ವಜನಿಕ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡು ಅಪಪ್ರಚಾರ ನಡೆಸುವುದು ಕಾನೂನುಬಾಹಿರವಾಗಿದ್ದು, ಇದು ಸಮಾಜದ ಸಾಮರಸ್ಯ ಮತ್ತು ಸಹಬಾಳ್ವೆಗೆ ಗಂಭೀರ ಸವಾಲಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಕಾನೂನಿನ ಪ್ರಕಾರ ಸೂಕ್ತ ತನಿಖೆ ಹಾಗೂ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ ಎಂದು ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ.
ಈ ರೀತಿಯ ಪೋಸ್ಟ್ ಹಾಕಿರುವುದರಿಂದ ಅತೀವ ನೋವಾಗಿದೆ. ದೇವರ ವಿಚಾರವನ್ನು ಹಾಗೂ ಶ್ರದ್ದೆ-ಭಕ್ತಿಗೆ ಕಳಂಕ ತರುವಂತಹಾ ಅಪಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಪದ್ಮರಾಜ್ ಪೂಜಾರಿ, ಸಾಮಾಜಿಕ ಜಾಲತಾಣಗಳ ಮೂಲಕ ದುರುದ್ದೇಶಪೂರಿತ ಅಪಪ್ರಚಾರ ಮಾಡುವವರಿಗೆ ಬುದ್ಧಿ ನೀಡುವಂತೆ, ಹಾಗೂ ಸಮಾಜದಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆ ನೆಲೆಗೊಳ್ಳುವ ಉದ್ದೇಶದಿಂದ, ಸೋಮವಾರ ಸಂಜೆ 6 ಗಂಟೆಗೆ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಅಪಪ್ರಚಾರಕ್ಕೆ ಕಾರಣರಾದವರು ಅಥವಾ ಇದರಲ್ಲಿ ಭಾಗಿಯಾದವರು, ಆತ್ಮಾವಲೋಕನದ ಮನಸ್ಸಿನಿಂದ ಆ ಸಮಯದಲ್ಲಿ ಗರೋಡಿ ಕ್ಷೇತ್ರಕ್ಕೆ ಆಗಮಿಸಿ, ಶಾಂತಿಯ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.
ಸಮಾಜದ ಶಾಂತಿ ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ ಅವುಗಳನ್ನು ಸಂಯಮ, ಸಂಸ್ಕೃತಿ ಮತ್ತು ಕಾನೂನುಬದ್ಧ ಮಾರ್ಗಗಳ ಮೂಲಕ ವ್ಯಕ್ತಪಡಿಸುವುದೇ ನಾಗರಿಕ ಧರ್ಮ ಎಂದವರು ಪ್ರತಿಪಾದಿಸಿದ್ದಾರೆ.
ಇದೇ ವೇಳೆ, ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಜಾತ್ರೋತ್ಸವ ಪ್ರಯುಕ್ತ ನಡೆಯುವ ಕೋಳಿ ಅಂಕದ ಕುರಿತು ಆಡಳಿತ ಯಂತ್ರವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿಲ್ಲ ಹಾಗೂ ಕೋಳಿ ಅಂಕವನ್ನು ತಡೆಯುವಂತೆ ಯಾವುದೇ ಒತ್ತಡ ಪ್ರಯೋಗಿಸಲಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟವಾಗಿ ಪ್ರಮಾಣೀಕರಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
5.50 ಲಕ್ಷ ಹಣ ಖಡಿವಾದರೂ ಕ್ರಮ ವಹಿಸದ ಬ್ಯಾಂಕ್: ದಂಡ ವಿಧಿಸಿ ಶಾಕ್ ಕೊಟ್ಟ ‘ಗ್ರಾಹಕರ ಆಯೋಗ’
ಪ್ರತಿ ಗ್ರಾಮದ ಅಭಿವೃದ್ದಿ ಆದಾಗ ಸಮಗ್ರ ಕರ್ನಾಟಕ ಪರಿಕಲ್ಪನೆ ಸಾಕಾರ: ಸಂಸದ ಬಸವರಾಜ ಬೊಮ್ಮಾಯಿ








