ಇಂದಿನ ದಿನಗಳಲ್ಲಿ ಪ್ರೀತಿ ಎಷ್ಟು ವೇಗವಾಗಿ ಚಿಗುರುತ್ತದೆಯೋ, ಅಷ್ಟೇ ವೇಗವಾಗಿ ಬ್ರೇಕಪ್ ಗಳು ಕೂಡ ನಡೆಯುತ್ತಿವೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ವ್ಯಕ್ತಿಯಿಂದ ದೂರವಾಗುವುದು ಅಥವಾ ಆ ನೆನಪುಗಳನ್ನು ಮರೆತು ಬದುಕುವುದು ಯಾರಿಗಾದರೂ ಅತೀವ ನೋವಿನ ಸಂಗತಿ. ಆದರೆ, ಈ ಕಷ್ಟಕಾಲದಿಂದ ಹೊರಬಂದು ಜೀವನವನ್ನು ಹೊಸದಾಗಿ ಹೇಗೆ ಆರಂಭಿಸಬೇಕು ಎಂಬುದರ ಕುರಿತು ಖ್ಯಾತ ರಿಲೇಷನ್ಶಿಪ್ ಕೋಚ್ ಮತ್ತು ಕೌನ್ಸೆಲರ್ ಕಂಫರ್ಟ್ ಒಮೊವ್ರೆ, ತಮ್ಮ ‘ಹಾರ್ಟ್ಸ್ ಬ್ಲೂಮ್ ಹಿಯರ್’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಅದ್ಭುತ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳ ವಿವರ ಇಲ್ಲಿದೆ:
1. ನಿಮ್ಮ ಮೇಲೆ ನಿಮಗಿರಲಿ ನಂಬಿಕೆ
ಬ್ರೇಕಪ್ ನಂತರ, “ನಾನು ತೆಗೆದುಕೊಂಡ ನಿರ್ಧಾರ ಸರಿಯೇ?” ಎಂಬ ಸಂಶಯ ನಿಮ್ಮನ್ನು ಕಾಡಬಹುದು. ಆದರೆ, ನಿಮ್ಮ ಸಂತೋಷ ಮತ್ತು ಮಾನಸಿಕ ಶಾಂತಿಗಾಗಿ ನೀವು ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಬಲವಾಗಿ ನಂಬಿ. ನಿಮ್ಮ ಮನಸ್ಸಿನಲ್ಲಿರುವ ಕೋಪ ಅಥವಾ ಅಪರಾಧಿ ಭಾವನೆಯನ್ನು ಹತ್ತಿಕ್ಕಬೇಡಿ; ಬದಲಾಗಿ ಅದನ್ನು ಡೈರಿಯಲ್ಲಿ ಬರೆಯಿರಿ. ತಪ್ಪು ಸಂಬಂಧದಲ್ಲಿ ಇಷ್ಟು ದಿನ ಏಕೆ ಇದ್ದೆ ಎಂದು ನಿಮ್ಮನ್ನು ನೀವು ದೂಷಿಸಿಕೊಳ್ಳುವ ಬದಲು, ನಿಮ್ಮನ್ನು ನೀವು ಕ್ಷಮಿಸಿ ಪ್ರೀತಿಸಲು ಕಲಿಯಿರಿ.
2. ಗತಕಾಲವನ್ನು ವಾಸ್ತವದ ದೃಷ್ಟಿಯಿಂದ ನೋಡಿ
ಸಾಮಾನ್ಯವಾಗಿ ನಮ್ಮ ಮೆದುಳು ಹಳೆಯ ಕೆಟ್ಟ ನೆನಪುಗಳನ್ನು ಮರೆಸಿ, ಕೇವಲ ಸುಂದರ ಕ್ಷಣಗಳನ್ನು ಮಾತ್ರ ನೆನಪಿಸುತ್ತದೆ. ಆದರೆ, ಆ ಸಂಬಂಧದಿಂದ ನೀವು ಹೊರಬರಲು ಕಾರಣವಾದ ಕಹಿ ಘಟನೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಮಾಜಿ ಸಂಗಾತಿ ನಿಮ್ಮ ಯಶಸ್ಸನ್ನು ನೋಡಿ ಅಸೂಯೆಪಡಬೇಕು ಅಥವಾ ಅವರು ಬಂದು ಕ್ಷಮೆಯಾಚಿಸಬೇಕು ಎಂದು ಕಾಯಬೇಡಿ. ಇಂತಹ ನಿರೀಕ್ಷೆಗಳು ನಿಮ್ಮನ್ನು ಮತ್ತೆ ಹಳೆಯ ನೆನಪುಗಳಿಗೇ ಕಟ್ಟಿಹಾಕುತ್ತವೆ.
3. ನೋವನ್ನು ಸ್ವೀಕರಿಸಿ, ಮನಸಾರೆ ಅತ್ತುಬಿಡಿ
ನೋವಾದಾಗ ಅಳುವುದು ದೌರ್ಬಲ್ಯವಲ್ಲ. ನಿಮ್ಮ ನೋವಿಗೆ ಗೌರವ ನೀಡಿ, ಮನಸ್ಸಿಗೆ ಎನಿಸಿದರೆ ಅತ್ತುಬಿಡಿ. ಆ ನಂತರ ನಿಮ್ಮತ್ತ ಗಮನ ಹರಿಸಿ. ಇಷ್ಟವಾದ ಸಂಗೀತ ಕೇಳುವುದು, ನಡಿಗೆ, ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಅಥವಾ ಇಷ್ಟವಾದ ಆಹಾರ ಸೇವಿಸುವ ಮೂಲಕ ನಿಮ್ಮನ್ನು ನೀವು ಖುಷಿಪಡಿಸಿಕೊಳ್ಳಿ. “ನಾನು ಯಾವುದಕ್ಕೂ ಲಾಯಕ್ಕಿಲ್ಲ” ಎಂಬ ನಕಾರಾತ್ಮಕ ಯೋಚನೆಗಳನ್ನು ಬಿಟ್ಟು, “ನಾನು ಅದ್ಭುತ ವ್ಯಕ್ತಿ ಮತ್ತು ನಿಜವಾದ ಪ್ರೀತಿಗೆ ಅರ್ಹನು/ಳು” ಎಂದು ನಿಮಗೆ ನೀವೇ ಹೇಳಿಕೊಳ್ಳಿ.
4. ಹೊಸ ಭವಿಷ್ಯದತ್ತ ಹೆಜ್ಜೆ ಇಡಿ
ಅವರಿಲ್ಲದೆ ಜೀವನ ಶೂನ್ಯ ಎನಿಸಬಹುದು. ಆದರೆ ನಿಮಗಾಗಿ ಒಂದು ಸುಂದರ ಭವಿಷ್ಯ ಕಾಯುತ್ತಿದೆ ಎಂದು ಕಲ್ಪಿಸಿಕೊಳ್ಳಿ. ಹೊಸ ಸ್ನೇಹಿತರನ್ನು ಭೇಟಿ ಮಾಡಿ, ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಮತ್ತು ನಿಮ್ಮ ಗುರಿಗಳತ್ತ ಗಮನ ಹರಿಸಿ. ಗತಕಾಲದ ಬಗ್ಗೆ ಕೊರಗುವುದಕ್ಕಿಂತ, ವರ್ತಮಾನದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳುವುದು ಉತ್ತಮ.
5. ಬದಲಾವಣೆಯನ್ನು ಸ್ವಾಗತಿಸಿ, ತಾಳ್ಮೆಯಿಂದಿರಿ
ಮನಸ್ಸಿಗೆ ಆದ ಗಾಯ ಮಾಯಲು ಸಮಯ ಬೇಕಾಗುತ್ತದೆ. ನೋವು ನಮ್ಮನ್ನು ಬೆಳೆಸುತ್ತದೆ; ಆ ಬದಲಾವಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಪಕ್ವತೆಯಿಂದ ವರ್ತಿಸಿ. ಒಂದೇ ದಿನದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ನಿರೀಕ್ಷಿಸಬೇಡಿ. ನಿಮ್ಮ ಮೇಲೆ ನಿಮಗೆ ತಾಳ್ಮೆ ಇರಲಿ. ಕಾಲವೇ ಎಲ್ಲ ನೋವಿಗೂ ಮದ್ದು ಎಂಬುದು ಮರೆಯದಿರಿ.
ಗಮನಿಸಿ: ಜೀವನದ ಈ ಹಂತವನ್ನು ದಾಟಲು ಸಮಯ ಬೇಕಾದರೂ, ಈ ಮೇಲಿನ ಅಂಶಗಳು ನಿಮ್ಮನ್ನು ಮಾನಸಿಕವಾಗಿ ಸದೃಢಗೊಳಿಸಲು ಖಂಡಿತ ನೆರವಾಗುತ್ತವೆ.








