ಮೈಸೂರು: ರೈಲಿನಲ್ಲಿ ಅಕ್ರಮ ವಸ್ತುಗಳ ಸಾಗಣೆಯನ್ನು ತಡೆಗಟ್ಟಲು ನಡೆಯುತ್ತಿರುವ “ಸತರ್ಕ್” ಕಾರ್ಯಾಚರಣೆಯ ವೇಳೆ 25.06.2025 ರಂದು ಆಕಸ್ಮಿಕ ತಪಾಸಣೆ ನಡೆಸಲಾಯಿತು. ಈ ತಪಾಸಣೆ, ಸ್ಯಾಮ್ ಪ್ರಸಾಂತ್ ಜೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಮೈಸೂರು ಅವರ ಮಾರ್ಗದರ್ಶನದಲ್ಲಿ ಮತ್ತು ಇ.ಕೆ. ಅನುಜ್ ಕುಮಾರ್, ಸಹಾಯಕ ಭದ್ರತಾ ಆಯುಕ್ತರು ಮೈಸೂರು ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು.
ಈ ತಪಾಸಣೆಯ ತಂಡವನ್ನು ಆನಂದ ಬಿ, ಎಎಸ್ಐ ಮೈಸೂರು ಅವರು ನೇತೃತ್ವ ವಹಿಸಿದ್ದರು. ಅವರ ಜೊತೆಗೆ ಶಿವನಂದ ಟಿ, ಮುಖ್ಯ ಕಾನ್ಸ್ಟೆಬಲ್ ದಾವಣಗೆರೆ, ಮುಜಮ್ಮಿಲ್ ಖಾನ್, ಕಾನ್ಸ್ಟೆಬಲ್ ಮೈಸೂರು ಹಾಗೂ ನಾಯಿ ಪಾಳೆಯ (ಡಾಗ್ ಸ್ಕ್ವಾಡ್) ಸಿಬ್ಬಂದಿ (ಅರಸೀಕೆರೆಯಿಂದ) ಉಪಸ್ಥಿತರಿದ್ದರು.
ಈ ತಂಡವು ರೈಲು ಸಂಖ್ಯೆ 17310 (ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್ಪ್ರೆಸ್) ನಲ್ಲಿ ರಾಣಿಬೆನ್ನೂರು ಮತ್ತು ಹರಿಹರ ನಿಲ್ದಾಣಗಳ ನಡುವೆ ತಪಾಸಣೆ ನಡೆಸಿತು. ತಪಾಸಣೆಯ ವೇಳೆ ಜನರಲ್ ಕೋಚ್ನಲ್ಲಿ ಒಂದು ಅನಾಮದೆಯ ಬ್ಯಾಗ್ ಪತ್ತೆಯಾಯಿತು.
ಈ ವಿಷಯವನ್ನು ತಕ್ಷಣವೇ ಎ. ಕೊಂಡಾ ರೆಡ್ಡಿ ಎಸ್ಐಪಿಎಫ್ ದಾವಣಗೆರೆ ಮತ್ತು ಎನ್.ಜಿ. ನಾಯ್ಕ್ ಎಎಸ್ಐಪಿಎಫ್ ಹರಿಹರ ಅವರಿಗೆ ತಿಳಿಸಲಾಯಿತು. ರೈಲು ಬೆಳಗ್ಗೆ 07:09 ಗಂಟೆಗೆ ಹರಿಹರ ನಿಲ್ದಾಣಕ್ಕೆ ಬಂದಾಗ, ಎ. ಕೊಂಡಾ ರೆಡ್ಡಿ, ಮಹಿಳಾ ಕಾನ್ಸ್ಟೆಬಲ್ ಗ್ರೀಷ್ಮಾ ಜಿ. ಹಾಗೂ ಹೋಂಗಾರ್ಡ್ ಸಿಬ್ಬಂದಿಗಳು ಬೋಗಿಯನ್ನು ಪರಿಶೀಲಿಸಿ ಬ್ಯಾಗ್ ಖಚಿತಪಡಿಸಿದರು.
ಬ್ಯಾಗ್ ಬಗ್ಗೆ ಹತ್ತಿರದ ಪ್ರಯಾಣಿಕರಲ್ಲಿ ವಿಚಾರಿಸಿದಾಗ ಯಾರೂ ಅದರ ಮಾಲೀಕರು ಎಂದು ಮುಂದೆ ಬಾರದ ಕಾರಣ, ಶಂಕಿತವಾಗಿ ಬ್ಯಾಗ್ ಅನ್ನು ತೆರೆಯಲಾಯಿತು. ಅದರೊಳಗೆ ಸುಮಾರು ₹8,340/- ಮೌಲ್ಯದ 12 ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಬ್ಯಾಗ್ ಅನ್ನು ರೈಲ್ವೆ ರಕ್ಷಣಾ ದಳ ಔಟ್ಪೋಸ್ಟ್ ಹರಿಹರಕ್ಕೆ ಸುರಕ್ಷಿತವಾಗಿ ತರಲಾಯಿತು.
ಈ ಬಗ್ಗೆ ಹರಿಹರದ ಅಬಕಾರಿ ಇನ್ಸ್ಪೆಕ್ಟರ್ ಶಿವರಾಜ್ ಕೆ. ಅವರಿಗೆ ಮಾಹಿತಿ ನೀಡಲಾಯಿತು. ಅವರು ತಮ್ಮ ಸಿಬ್ಬಂದಿಗಳೊಂದಿಗೆ ರೈಲ್ವೆ ರಕ್ಷಣಾ ದಳ ಔಟ್ಪೋಸ್ಟ್ಗೆ ಬಂದು, ಸಿಪಿಡಿ ಮತ್ತು ಆರ್ ಪಿ ಎಫ್ ಸಿಬ್ಬಂದಿಗಳ ಸಮ್ಮುಖದಲ್ಲಿ ಕಾನೂನು ಕ್ರಮಗಳನ್ನು ಅನುಸರಿಸಿ ಮದ್ಯವನ್ನು ತಮ್ಮ ವಶಕ್ಕೆ ಪಡೆದರು.
ನೈಋತ್ಯ ರೈಲ್ವೆ ಮೈಸೂರು ವಿಭಾಗ ರೈಲಿನ ಭದ್ರತೆ ಮತ್ತು ಮುನ್ನೆಚ್ಚರಿಕೆಯ ಕರ್ತವ್ಯ ನಿರ್ವಹಿಸುವಲ್ಲಿ ಬದ್ಧವಾಗಿದೆ. ಎಲ್ಲ ಪ್ರಯಾಣಿಕರಿಗೂ ಮನವಿ ನೀವು ರೈಲಿನಲ್ಲಿ ಯಾವುದಾದರೂ ಶಂಕಾಸ್ಪದ ವಸ್ತುಗಳು ಅಥವಾ ಚಟುವಟಿಕೆಗಳನ್ನ ನೋಡಿದರೆ, ತಕ್ಷಣ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಮೈಸೂರು ನೈರುತ್ಯ ರೈಲ್ವೆ ವಿಭಾಗದ ವಿಭಾಗೀಯ ವ್ಯಾಪಾರ ನಿರ್ವಾಹಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಮನವಿ ಮಾಡಿದ್ದಾರೆ.