ಬೆಂಗಳೂರು: ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಸಂಬಂಧ ಹಳಸಿಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮೊನ್ನೆ ದೆಹಲಿಯಲ್ಲಿದ್ದರು. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಥವಾ ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗದೇ ವಾಪಸ್ ಕರ್ನಾಟಕಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಧ್ಯೆ ಸಂಬಂಧಗಳು ಹಳಸಿಹೋಗಿದೆ ಎಂಬುದೇ ಇದರ ಅರ್ಥ ಎಂದು ನುಡಿದರು.
ರಾಜ್ಯ ಸರಕಾರದ ಮೇಲೆ ಒಂದು ರೀತಿ ಮೋಡ ಕವಿದ ವಾತಾವರಣವಿದೆ. ಯಾವತ್ತು ಗುಡುಗು, ಸಿಡಿಲಿನ ಮಳೆ ಪ್ರಾರಂಭವಾಗುತ್ತದೋ ಕಾದು ನೋಡಬೇಕಿದೆ. ಕಾಂಗ್ರೆಸ್ ಪಕ್ಷ ಮತ್ತು ಸರಕಾರದಲ್ಲಿ ಎಲ್ಲವೂ ಕೂಡ ಸರಿಯಿಲ್ಲ ಎಂಬುದಂತೂ ಸತ್ಯ. ಮುಖ್ಯಮಂತ್ರಿಗಳು- ಉಪ ಮುಖ್ಯಮಂತ್ರಿಗಳ ಹಗ್ಗಜಗ್ಗಾಟ ಮತ್ತು ಕುರ್ಚಿಗಾಗಿ ಪೈಪೋಟಿ ನಡೆದಿದೆ. ಯಾರು ಮುಖ್ಯಮಂತ್ರಿ? ಇವರೇ ಇರುತ್ತಾರೋ, ಬದಲಾವಣೆ ಆಗುತ್ತಾರೋ ಎಂಬುದರಿಂದ ಜನರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗದೇ ವಾಪಸ್ ಆಗಿರುವುದು ಒಳ್ಳೆಯ ಸಂಕೇತವಲ್ಲ; ಏನೇನು ಬೆಳವಣಿಗೆ ಆಗುತ್ತದೋ ಕಾದುನೋಡೋಣ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ- ಸರಕಾರದಲ್ಲಿ ಸುನಾಮಿ ಬರುವ ಭೀತಿ ಇದೆ. ಅದಕ್ಕಾಗಿ ಬೇರೆ ಬೇರೆ ಹೇಳಿಕೆ ಕೊಟ್ಟು ವಿಚಾರಗಳನ್ನು ಬದಲಿಸುವ ಪ್ರಯತ್ನ- ಕುತಂತ್ರ ನಡೆಯುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ. ಮುಖ್ಯಮಂತ್ರಿ ಹಾಗೂ ಶಾಸಕರ ಮಧ್ಯೆ ಯಾರು ಸಿಎಂ ಆಗಬೇಕೆಂಬ ವಿಷಯದಲ್ಲಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ರಾಜ್ಯದ ಜನರು ಪರದಾಡುತ್ತಿದ್ದಾರೆ ಎಂದು ಅವರು ಹೇಳಿದರು.
ನಾವು ವಿಪಕ್ಷದಲ್ಲಿ 3 ವರ್ಷ ಆರಾಮವಾಗಿ ಇರಲಿದ್ದೇವೆ. ಆ ವಿಷಯದಲ್ಲಿ ಆತಂಕ ಇಲ್ಲ. 2028ರಲ್ಲಿ ನಮ್ಮ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದೇವೆಯೇ ಹೊರತು ಇವರ ಜೊತೆ ಸೇರಿ ಗುದ್ದಾಡುವ ಅವಶ್ಯಕತೆ ನಮಗಿಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ನವೆಂಬರ್ನಲ್ಲಿ ಕ್ರಾಂತಿ- ಮಹಾಕ್ರಾಂತಿ ಏನೇನು ಆಗಲಿದೆಯೋ ಕಾದುನೋಡಿ. ಆದರೆ, ರಾಜ್ಯದ ಆಡಳಿತ ಪಕ್ಷದಲ್ಲಿ ಯುದ್ಧ ಪ್ರಾರಂಭವಾಗಿದೆ ಎಂಬುದು ಸತ್ಯ. ಯಾರ್ಯಾರನ್ನು ಇದು ಬಲಿ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಿ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ನಾವು ವಿಪಕ್ಷವಾಗಿದ್ದು, ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜನರು ಕೂಡ ಬೀದಿಗಿಳಿದು ಹೋರಾಟ ಮಾಡುವ ವಾತಾವರಣ ನಿರ್ಮಾಣವಾಗಿದೆ. ಈ ಸರಕಾರ ಇದ್ದರೆಷ್ಟು, ಬಿದ್ದರೆಷ್ಟು, ಸಿಎಂ ಬದಲಾದರೆಷ್ಟು, ಇನ್ಯಾರೋ ಮುಖ್ಯಮಂತ್ರಿ ಆದರೆಷ್ಟು- ಇವ್ಯಾವುದೂ ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರುವುದಿಲ್ಲ. ಹಾಗಾಗಿ ರಾಜ್ಯದ ಜನರಿಗೆ ಇದರ ಬಗ್ಗೆ ಆಸಕ್ತಿಯೂ ಇಲ್ಲ ಎಂದು ತಿಳಿಸಿದರು.
ನಮ್ಮ ಪಕ್ಷದ ವರಿಷ್ಠರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಎಲ್ಲವೂ ಕೂಡ ಒಳ್ಳೆಯದಾಗಲಿದೆ ಎಂದು ಅವರು ಪ್ರಶ್ನೆಗೆ ವಿಶ್ವಾಸದಿಂದ ಉತ್ತರ ಕೊಟ್ಟರು. ಸೋಮಣ್ಣ ಅವರು ಕೇಂದ್ರದ ಸಚಿವರು; ಪಕ್ಷದ ಹಿರಿಯರಿದ್ದು, ಪಕ್ಷದ ಬಗ್ಗೆ ಕಾಳಜಿ, ಬದ್ಧತೆ ಇಟ್ಟುಕೊಂಡವರು. ಸೋಮಣ್ಣ ಅವರು ಸಮಸ್ಯೆ ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಶ್ರೀರಾಮುಲು- ಜನಾರ್ದನ ರೆಡ್ಡಿ ಅವರ ವಿಷಯದಲ್ಲಿ ಮಾತನಾಡಿದರೆ ಅದು ಸ್ವಾಗತಾರ್ಹ. ಸಾಧ್ಯವಾದರೆ ನಾನು ಕೂಡ ಜೋಡಿಸಿಕೊಳ್ಳುವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ- ಮಹಾನಗರ ಪಾಲಿಕೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅವರ ನ್ಯಾಯಸಮ್ಮತ ಬೇಡಿಕೆ ಈಡೇರಿಸುವ ಕರ್ತವ್ಯ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳದು. ಅಭಿವೃದ್ಧಿ ಇಲ್ಲದೇ ಜನರು ಪರದಾಡುವಂತಾಗಿದೆ. ಮತ್ತೊಂದು ಕಡೆ ಕಾರ್ಮಿಕರ ಬೇಡಿಕೆ ಈಡೇರಿಸಲು ಸಾಧ್ಯವಾಗದೇ ಜನಸಾಮಾನ್ಯರು ನಗರಗಳಲ್ಲಿ ಪರದಾಡುತ್ತಿದ್ದಾರೆ. ಬೇಡಿಕೆ ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೂಡಲೇ ಗಮನ ಕೊಡಬೇಕೆಂದು ಅವರು ಆಗ್ರಹಿಸಿದರು.
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ