ಬೆಂಗಳೂರು: ರಾಜ್ಯ ಸರ್ಕಾರದಿಂದ ಆಶಾ ಮೆಂಟರ್ ಗಳನ್ನ ಕರ್ತವ್ಯದಿಂದ ಬಿಡುಗಡೆ ಮಾಡಿದ್ದು ಖಂಡನೀಯವೇ ಸರಿ. ಈ ಆದೇಶ ಹಿಪಡೆಯದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ( KSHCOEA BMS ) ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ ಎಚ್ಚರಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಜಿಲ್ಲೆ ಹಾಗೂ ತಾಲುಕು ಮಟ್ಟದಲ್ಲಿ ಆಶಾ ಕಾರ್ಯಕ್ರಮ ಅನುಷ್ಠಾನ ಮಾಡಲು 2007-2008 ರಿಂದ ನೇಮಕಾತಿ ಮಾಡಿಕೊಂಡಿದ್ದು, ಈಗ ದಿಢೀರನೆ ಈ ಎಲ್ಲಾ 195 ಆಶಾ ಮೆಂಟರ್ ಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದು ಈ ಆದೇಶದಲ್ಲಿ ಬಿಡುಗಡೆ ಹೊಂದಿದ ಸದರಿ ಸಿಬ್ಬಂದಿಗಳನ್ನು ಅರ್ಹರಿದ್ದಲ್ಲಿ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆದ್ಯತೆ ಮೇಲೆ ನೇಮಿಸಲು ಪರಿಗಣಿಸಬಹುದು ಎಂದು ಆದೇಶದಲ್ಲಿ ತಿಳಿಸಿರುತ್ತಾರೆ, ಅಂದರೆ ಹೊಸ ನೇಮಕಾತಿ ಮಾಡಿಕೊಳ್ಳಲು ತಿಳಿಸಿರುತ್ತಾರೆ ಎಂದಿದ್ದಾರೆ.
ಕಳೆದ 15-18 ವರ್ಷಗಳಿಂದ ಸೇವೆ ನೀಡಿದ ಸಿಬ್ಬಂದಿಗಳನ್ನು ಏಕಾಏಕಿ ಈ ರೀತೀ ಆದೇಶ ಮಾಡಿ ಬೀದಿಗೆ ತಳ್ಳಿದರೆ ಅವರ ಭವಿಷ್ಯ ಹಾಗು ಮುಂದಿನ ಜೀವನ ಹೇಗೆ ಆವರ ಕುಟುಂಬದ ಬಗ್ಗೆ ಏನೂ ಎಂಬ ಪ್ರಶ್ನೆ ಉದ್ಭವಿಸಿದೆ ಎಂಬುದಾಗಿ ಹೇಳಿದ್ದಾರೆ.
ಈ ಸಿಬ್ಬಂದಿಗಳು ಈಗಾಗಲೇ ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಸೇರಿಸಿದ್ದು ಇದರಿಂದ ಕುಟುಂಬದ ಮೇಲೆ ಮಾನಸಿಕವಾಗಿ ಹಾಗು ಆರ್ಥಿಕವಾಗಿ ಹಾನಿ ಉಂಟಾಗುತ್ತದೆ. ಈ ಆದೇಶದಲ್ಲಿ ಈ ಹುದ್ದೆಗಳಲ್ಲಿ ಇರುವ ಮೆಂಟರಗಳನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಸ್ಟಾಫ್ ನರ್ಸ್ ಹುದ್ದೆಯಲ್ಲಿ ಮುಂದುವರೆಯಲು ಆದೇಶ ಹೊರಡಿಸಿದೆ. ಆದರೆ 15 ವರ್ಷದ ಸೇವೆಯನ್ನು ಪರಿಗಣಿಸದೆ ನೇರವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಮಾಡಿದ್ದು ಸರಿಯಲ್ಲ ಅಂತ ಕಿಡಿಕಾರಿದ್ದಾರೆ.
ಒಂದು ವೇಳೆ ಹುದ್ದೆಗಳು ಖಾಲಿ ಇದ್ದಲ್ಲಿ ಅವರಿಗೆ ಆದ್ಯತೆ ನೀಡಿ ಹೊಸದಾಗಿ ನೇಮಕ ಮಾಡಲು ಸೂಚನೆ ನೀಡಿದ್ದು ಅವೈಜ್ಞಾನಿಕ ಆದೇಶ ಇದಾಗಿದೆ. ಕಡಿಮೆ ಸಂಬಳಕ್ಕೆ ದುಡಿದ 195 ಜನ ಮಹಿಳೆಯರು ಈಗಾಗಲೇ 40-50 ರ ವಯಸ್ಸಿನ ಆಸುಪಾಸಿನಲ್ಲಿ ಇದ್ದು, ಮೈಯಲ್ಲಿ ಶಕ್ತಿ ಇರುವವರಿಗೆ ಅತ್ಯಂತ ಕಡಿಮೆ ಸಂಬಳ 10 ರಿಂದ 12 ಸಾವಿರಕ್ಕೆ ದುಡಿಸಿಕೊಂಡು ಈಗ ಏಕಾಏಕಿ ಕೆಲಸದಿಂದ ತೆಗೆದುಹಾಕಿದರೆ ಆ ನೌಕರರಿಗೆ ಅನ್ಯಾಯವಾಗುತ್ತದೆ. ಅವರ ಹಾಗೂ ಅವರ ಕಣ್ಣೀರ ಶಾಪಕ್ಕೆ ಗುರಿಯಾಗುವ ಮುಂಚೆ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂಬುದಾಗಿ ತಿಳಿಸಿದ್ದಾರೆ.
ಇವರು ಚುನಾವಣಾ ಪೂರ್ವ ಭರವಸೆ ಕೊಟ್ಟಂತೆ NHM ನೌಕರರನ್ನು ಖಾಯಂ ಮಾಡುತ್ತಾರೆ ಎಂದು ನಾವು ಭಾವಿಸಿದರೆ ಈ ಸರಕಾರ ನೌಕರರನ್ನು ಖಾಯಂ ಮನೆಗೆ ಕಳಿಸುವಂತ ಆದೇಶ ಮಾಡುತ್ತಿದೆ. ಯಾವ ಪುರುಷಾರ್ಥಕ್ಕಾಗಿ NHM ನೌಕರರು ಮತ ಹಾಕಿ ಗೆಲ್ಲಿಸಿ ವಿಧಾನಸೌಧದ ಮೂರನೆಯ ಮಹಡಿಗೆ ಕಳಿಸಿದ್ವೋ ಅಂತ ಭಾಸವಾಗುತ್ತಿದೆ. ರಾಜ್ಯ ಸರಕಾರ ಉದ್ಯೋಗ ಸೃಷ್ಟಿ ಮಾಡುವ ಬದಲು ನಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
ಈ ಆದೇಶವನ್ನು ಕೂಡಲೇ ಕೈ ಬಿಡಬೇಕೆಂದು KSHCOEA BMS ಸಂಘವು ಆಗ್ರಹಿಸುತ್ತದೆ. ಒಂದು ವೇಳೆ ಅನಿವಾರ್ಯ ಬಂದಲ್ಲಿ ಕೋರ್ಟ್ ಮೊರೆ ಸಹ ಹೋಗುತ್ತೇವೆ. ಅಗತ್ಯ ಬಿದ್ದರೆ ಕುಟುಂಬ ಸಮೇತ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಾಗಿ ಅನುದಾನ ಉಳಿಸಿಕೊಳ್ಳುವದಕ್ಕೆ ಈ ರೀತಿ ನಿರ್ಧಾರಗಳು ತೆಗೆದುಕೋಳ್ಳುತ್ತಿರುವದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಅದಕ್ಕೆ ಹಲವಾರು ದಾರಿಗಳಿವೆ. ಸಿಬ್ಬಂದಿಗಳ ಹೊಟ್ಟೆ ಮೇಲೆ ಹೊಡೆದು ಸರ್ಕಾರ ನಡೆಸುವುದು ಯಾವ ನ್ಯಾಯ? ಪ್ರಣಾಳಿಕೆಯಲ್ಲಿ ಏಕೆ ಹಾಕಿದ್ದೀರಿ? ಸುಮ್ಮನೆ ಸಂತೋಷ ಪಡಿಸೋಕ? ಅಥವಾ ಸುಳ್ಳು ಹೇಳಿಯಾದರು ಮತ ಪಡೆಯೋಕ? ನಮಗೆ ನೀಡಿದ ವಾಗ್ದಾನದಂತೆ ಖಾಯಂ ಗ್ಯಾರಂಟಿ ಈಡೇರಿಸಿಕೊಡಿ. ಅದನ್ನು ಬಿಟ್ಟು ಸಿಬ್ಬಂದಿಗಳನ್ನು ಮನೆಗೆ ಕಳುಹಿಸುವುದನ್ನು ನಿಲ್ಲಿಸಬೇಕು ಎಂದು KSHCOEA BMS ಸಂಘದ ರಾಜ್ಯಾಧ್ಯಕ್ಷ ಶ್ರೀಕಾಂತ್ ಸ್ವಾಮಿ ಒತ್ತಾಯಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ..,
BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ