ಬೆಂಗಳೂರು : ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯ ಆಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್ಬಾಗ್ನಲ್ಲಿ ಆಗಸ್ಟ್ 7 ರ ಇಂದಿನಿಂದ 18ರ ವರೆಗೆ ನಡೆಯಲಿದೆ.
ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ಜೀವನ, ಸಾಧನೆ, ಹೋರಾಟದ ಹಾದಿಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗುತ್ತಿದೆ. ಕಿತ್ತೂರಿನ ಐತಿಹಾಸಿಕ ಕೋಟೆ ಹೂವುಗಳಲ್ಲಿ ಅನಾವರಣಗೊಳ್ಳಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ.
ಇಂದು ಬೆಳಗ್ಗೆ 10ಕ್ಕೆ ಲಾಲ್ ಬಾಗ್ ಗಾಜಿನಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 218ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ರಾಮಲಿಂಗರೆಡ್ಡಿ ಉಪಸ್ಥಿತರಿರಲಿದ್ದಾರೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಜೀವನ ಫಲಪುಷ್ಪಗಳಲ್ಲಿ ಅನಾವರಣಗೊಳ್ಳಲಿದೆ.
ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ
ಪ್ರವೇಶಕ್ಕೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಲಭ್ಯವಿದ್ದು, ವೆಬ್ ಸೈಟ್ : https://hasiru.karnataka.gov.in/floweshow/login.aspx ಮಾಡಬಹುದು. ಮೊಬೈಲ್ನಲ್ಲಿ ಕ್ಯೂಆರ್ಕೋಡ್ ಪ್ರತಿಯನ್ನು ತೋರಿಸಿ ಪುಷ್ಪ ಪ್ರದರ್ಶನಕ್ಕೆ ನೇರ ಪ್ರವೇಶ ಪಡೆಯಬಹುದು.
ಎಂಟ್ರಿ ಫೀ ಎಷ್ಟು?
ಸಾಮಾನ್ಯ ದಿನಗಳಲ್ಲಿ
ವಯಸ್ಕರಿಗೆ ತಲಾ 80 ರು.ಗಳು, ಮಕ್ಕಳಿಗೆ ತಲಾ 30 ರು. ಹಾಗೂ ಶನಿವಾರ ಮತ್ತು ರಜಾ ದಿನದಲ್ಲಿ ವಯಸ್ಕರಿಗೆ ತಲಾ 100 ರು.ನಂತೆ ಟಿಕೆಟ್ ದರ ನಿಗದಿಪಡಿಸಲಾಗಿದೆ. ಸಮವಸ್ತ್ರ ಧರಿಸಿ ಬರುವಂತ ಶಾಲಾ ಮಕ್ಕಳಿಗೆ (1ರಿಂದ 10ನೇ ತರಗತಿ)ಮಾತ್ರ ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ತಿಳಿಸಿದರು.